ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಲಿ: ಶಾಸಕ ರುದ್ರಪ್ಪ ಲಮಾಣಿ

| Published : Aug 27 2025, 01:01 AM IST

ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಲಿ: ಶಾಸಕ ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಮುನ್ನೂರಕ್ಕೂ ಹೆಚ್ಚು ಅನಧಿಕೃತ ಬಡಾವಣೆ ನಿರ್ಮಾಣ ಆಗುತ್ತಿವೆ. ಯಾವುದೇ ಪೂರ್ವಾಪರ ಯೋಜನೆ ಇಲ್ಲದ ಬಡಾವಣೆಗಳಿಗೆ ಶುಲ್ಕ ಭರಿಸುವ ನೆಪದಲ್ಲಿ ಹೆಸ್ಕಾಂ ವಿದ್ಯುತ್ ಕಂಬ ಅಳವಡಿಸುತ್ತಿದೆ.

ಹಾವೇರಿ: ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಬೇಕು. ಅಸಹಕಾರ ಕಂಡುಬಂದರೆ ಕ್ರಮ ಕೈಗೊಳ್ಳಲು ಹಿಂಜರಿಯಲ್ಲ ಎಂದು ಶಾಸಕ ರುದ್ರಪ್ಪ ಲಮಾಣಿ ಎಚ್ಚರಿಸಿದರು.ನಗರದ ಹೆಸ್ಕಾಂ ಉಪವಿಭಾಗದಲ್ಲಿ ನಡೆದ ತಾಲೂಕು ಮತ್ತು ಶಾಖಾ ಮಟ್ಟದ ಗ್ರಾಹಕರ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಹಾವೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 72809 ಗ್ಯಾರಂಟಿ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದಾರೆ. ಇವರನ್ನು ಹೊರತುಪಡಿಸಿ ರೈತರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸರ್ಕಾರವೇ ಉಚಿತವಾಗಿ ನೀಡುತ್ತಿದೆ. ರೈತರು ಮಾತ್ರ ಕಂಬ ಮತ್ತು ತಂತಿಗಳಿಗೆ ತಗಲುವ ವೆಚ್ಚ ಭರಿಸಬೇಕು. ಈ ಹಿನ್ನೆಲೆ ವಿದ್ಯುತ್ ಪೂರೈಕೆ ವಿಚಾರದಲ್ಲಿ ಶಾಖಾಧಿಕಾರಿಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.ವಿದ್ಯುತ್ ಪೂರೈಸುವ ಕಂಬಗಳ ಮೇಲಿರುವ ಗಿಡಗಳನ್ನು ಕಟಾವು ಮಾಡಿ ತೆರವುಗೊಳಿಸಬೇಕು. ಅಮಾಯಕರ ಪ್ರಾಣಹಾನಿ ತಪ್ಪಿಸಲು ನಿಗಾ ವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಹಕರ ಸಲಹಾ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಬೇಕು ಎಂದು ಸಲಹೆ ನೀಡಿದರು.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ನಗರದಲ್ಲಿ ಮುನ್ನೂರಕ್ಕೂ ಹೆಚ್ಚು ಅನಧಿಕೃತ ಬಡಾವಣೆ ನಿರ್ಮಾಣ ಆಗುತ್ತಿವೆ. ಯಾವುದೇ ಪೂರ್ವಾಪರ ಯೋಜನೆ ಇಲ್ಲದ ಬಡಾವಣೆಗಳಿಗೆ ಶುಲ್ಕ ಭರಿಸುವ ನೆಪದಲ್ಲಿ ಹೆಸ್ಕಾಂ ವಿದ್ಯುತ್ ಕಂಬ ಅಳವಡಿಸುತ್ತಿದೆ. ಇದರಿಂದ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಲಾಭಾಂಶ ಸಿಗುತ್ತಿಲ್ಲ. ಜತೆಗೆ ಗಟಾರ್‌ ಮತ್ತು ರಸ್ತೆ ಮಧ್ಯೆ ವಿದ್ಯುತ್ ಕಂಬಗಳನ್ನು ಅಳವಡಿಸುವುದರಿಂದ ಉತ್ತಮ ಲೇಔಟ್ ನಿರ್ಮಿಸಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಹೆಸ್ಕಾಂ ಜತೆಗೆ ನೇರವಾಗಿ ಸಂಪರ್ಕ ಸಾಧಿಸಲು ಗ್ರಾಹಕರ ಸಲಹಾ ಸಮಿತಿ ರಚಿಸಲಾಗಿದೆ. ಏಳು ಸಮಿತಿ ಅಧಿಕಾರಿಗಳೊಂದಿಗೆ ಒಡನಾಟ ಇಟ್ಟುಕೊಂಡು ಸೌಹಾರ್ದವಾಗಿ ನಡೆದುಕೊಳ್ಳಿ ಎಂದು ಸಮಿತಿ ಸದಸ್ಯರಿಗೆ ತಿಳಿಸಿದರು.ಈ ಮಧ್ಯೆ ಗ್ರಾಹಕ ಸಮಿತಿ ಸದಸ್ಯರು ತಮ್ಮ ವ್ಯಾಪ್ತಿಯ ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು.ಮುಖಂಡ ಸಿ.ಬಿ. ಕುರವತ್ತಿಗೌಡ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ಜಿಂಗಾಡೆ, ಸಹಾಯಕ ಎಂಜಿನಿಯರ್ ಅಭಿಷೇಕ್, ಗ್ರಾಹಕರ ಸಲಹಾ ಸಮಿತಿಯ ಸರಸ್ವತೆಮ್ಮ ಮಲ್ಲಾಡದ, ಚನ್ನಬಸಪ್ಪ ಹಂಗರಗಟ್ಟಿ, ಬಸನಗೌಡ ಹಿರೇಗೌಡ್ರ, ನಾರಾಯಣ ಕಮ್ಮಾರ, ಕರಿಯಪ್ಪ ಕೋಟಿಹಾಳ, ಜಯಮ್ಮ ಬಜ್ಜಿಹಳ್ಳಿ, ದೀಪಾ ಹಲಗಣ್ಣವರ, ಭರಮಗೌಡ ಮುದಿಗೌಡ್ರ, ಮೌನೇಶಪ್ಪ ಕಮ್ಮಾರ, ಪ್ರಕಾಶ ಹಂದ್ರಾಳ, ಸೋಮಶೇಖರ ಎಣ್ಣೆಯವರ, ಇಮಾಮಸಾಬ ಮುಗದೂರ, ಇಮ್ತಿಯಾಜ್ ಮಿಶ್ರಕೋಟಿ ಹಾಗೂ ಅಧಿಕಾರಿಗಳು ಇದ್ದರು.