ಕನಕಪುರ: ದೇಶದ 694 ಸಂಸ್ಥಾನಗಳ ಪೈಕಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲ ಕರ್ನಾಟಕದ ಸುವರ್ಣ ಯುಗ. ಪಶ್ಚಿಮಾತ್ಯ ರಾಷ್ಟ್ರಗಳ ಲೇಖಕರು ಮತ್ತು ಇತಿಹಾಸಕಾರರು ಭರತ ಖಂಡದ ಇತಿಹಾಸದಲ್ಲಿಯೇ ಪ್ರಜಾಭ್ಯುದಯಕ್ಕಾಗಿ ತನ್ನ ರಾಜ ಸಿಂಹಾಸನವನ್ನೇ ಮುಡುಪಾಗಿಟ್ಟಿದ್ದವರು ಮೈಸೂರು ಸಂಸ್ಥಾನ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ದಾಖಲಿಸಿದ್ದಾರೆ ಎಂದು ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಪ್ರಯುಕ್ತ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸಕಾರರು ನಾಲ್ವಡಿ ಅವರ ಸಾಧನೆಗಳ ಬಗ್ಗೆ ಕಿಂಚಿತ್ತು ಬರೆಯದೆ ಅವರಿಗೆ ಚಾರಿತ್ರಿಕ ದ್ರೋಹವೆಸಗಿರುವುದು ದುರ್ದೈವ. ಕರ್ನಾಟಕದ ಕೃಷ್ಣರಾಜಸಾಗರ, ಮಾರ್ಕೋನಹಳ್ಳಿ, ತಿಪ್ಪಗೊಂಡನಹಳ್ಳಿ ಜಲಾಶಯ ಮಾರಿಕಣಿವೆ, ಕಣ್ವ ಜಲಾಶಯ, ಕನಕಪುರದ ಮಾವತ್ತೂರು ಕೆರೆ ಸೇರಿದಂತೆ ಲಕ್ಷಾಂತರ ಕೆರೆ ಕಟ್ಟೆಗಳನ್ನು ಕಟ್ಟಿ ನಾಡಿನ ರೈತರ ರಟ್ಟೆಗೆ ಬಲತುಂಬಿ ಹೊಟ್ಟೆಗೆ ಊಟ ನೀಡಿದ ಮಹನೀಯರು ನಾಲ್ವಡಿ ಕೃಷ್ಣರಾಜರು. ಬರಡು ಜಿಲ್ಲೆಯಲ್ಲಿ 4800 ಕೆರೆಗಳನ್ನು ಕಟ್ಟಿ ಕೆರೆಗಳ ಜಿಲ್ಲೆಯೆಂದೆ ಹೆಸರಿಸುವ ಕೋಲಾರ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿಸಿದ ಕೀರ್ತಿ ನಾಲ್ವಡಿ ಒಡೆಯರರಿಗೆ ಸಲ್ಲುತ್ತದೆ ಎಂದರು.ಮೈಸೂರು, ಬೆಂಗಳೂರಿನಲ್ಲಿ ಕೆಆರ್ ಆಸ್ಪತ್ರೆ, ಛಲವಾಂಬ, ವಾಣಿವಿಲಾಸ್, ವಿಕ್ಟೋರಿಯಾ, ನಿಮ್ಹಾನ್ಸ್, ಟಿಬಿ ಆಸ್ಪತ್ರೆ ಮಿಂಟೋ ಕಣ್ಣಾಸ್ಪತ್ರೆ, ಮಕ್ಕಳ ಆಸ್ಪತ್ರೆ ಮೊದಲಾದ ಬೃಹತ್ ಆಸ್ಪತ್ರೆಗಳನ್ನು ಕಟ್ಟಿ ಜನರ ಆರೋಗ್ಯ ರಕ್ಷಣೆ ಮಾಡಿದರು.
ಮೈಸೂರು ವಿಶ್ವವಿದ್ಯಾಲಯ, ಬೆಂಗಳೂಕಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ, ಎಚ್ಎಎಲ್, ಭದ್ರಾವತಿ ಕಾಗದ ಮತ್ತು ಕಬ್ಬಿಣದ ಕಾರ್ಖಾನೆಗಳು, ಕೆಎಸ್ಐಸಿ ರೇಷ್ಮೆ ನೂಲು, ಸೀರೆ ಘಟಕ, ಮೈಸೂರು ಸ್ಯಾಂಡಲ್ ಸೋಪಿನ ಫ್ಯಾಕ್ಟರಿ, ಜಯಚಾಮರಾಜೇಂದ್ರ ಒಡೆಯರ್ ಹೆಸರಿನ ಜಾವ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಮೊದಲದ ಐತಿಹ್ಯಗಳ ಸೃಜನಕಾರರಾಗಿ ಜಲ ವಿದ್ಯುತ್ ಯೋಜನೆ ರೂಪಿಸುವ ಮೂಲಕ ಪ್ರತಿ ಮನೆಗೆ ಬೆಳಕು ನೀಡಿ ಪ್ರತಿ ಮಗುವಿಗೂ ಶಿಕ್ಷಣ ನೀಡಿದ ನಾಲ್ವಡಿಯವರು ಕೃಷ್ಣರಾಜ ಭೂಪ ಮನೆ ಮನೆ ದೀಪ ಎಂದು ಪ್ರಸಿದ್ಧ ರಾಗಿದ್ದಾರೆ ಎಂದು ಶ್ಲಾಘಿಸಿದರು.ಎಕ್ಸ್ ಮುನ್ಸಿಪಲ್ ಕಾಲೇಜಿನ ಪ್ರಾಂಶುಪಾಲ ದೊಡ್ಡ ಬೋರೇಗೌಡ, ಭಾರತ ಸೇವಾ ದಳದ ಆನಂದ ಪೈ, ತಾಲೂಕು ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ, ಭಾರತ ರಾಷ್ಟ್ರೀಯ ಭೀಮ ಪಡೆಯ ಅಧ್ಯಕ್ಷ ಭರತ್ ಕುಮಾರ್, ತಾಮಸಂದ್ರದ ಪೈಲ್ವಾನ್ ಮುತ್ತುರಾಜು ಹಾಗೂ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿ ವರ್ಗ, ತಾಲೂಕು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.
ಕೆ ಕೆ ಪಿ ಸುದ್ದಿ 01:
ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಪ್ರಾಂಶುಪಾಲ ದೊಡ್ಡ ಬೋರೇಗೌಡ, ಭಾರತ ಸೇವಾ ದಳದ ಆನಂದ ಪೈ ಇತರರು ಪಾಲ್ಗೊಂಡಿದ್ದರು.