ಹೊಳೆಆಲೂರು- ಬಾಗಲಕೋಟೆ ಜೋಡಿ ರೈಲ್ವೆ ಮಾರ್ಗದ ಭದ್ರತಾ ಸಮೀಕ್ಷೆ ಪರೀಶಿಲನೆ

| Published : Dec 30 2023, 01:30 AM IST

ಹೊಳೆಆಲೂರು- ಬಾಗಲಕೋಟೆ ಜೋಡಿ ರೈಲ್ವೆ ಮಾರ್ಗದ ಭದ್ರತಾ ಸಮೀಕ್ಷೆ ಪರೀಶಿಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ರೈಲ್ವೆ ಇಲಾಖೆಯ ಭದ್ರತಾ ಅಧಿಕಾರಿಗಳ ತಂಡ ಶುಕ್ರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಹೊಳೆಆಲೂರು- ಬಾಗಲಕೋಟೆ ಮಧ್ಯೆ ಜೋಡಿ ರೈಲ್ವೆ ಮಾರ್ಗದ ಭದ್ರತಾ ಸಮೀಕ್ಷೆ ಪರೀಶಿಲಿಸಿ ತಾತ್ಕಾಲಿಕ ರೈಲ್ವೆ ನಿಲ್ದಾಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈಲ್ವೆ ಇಲಾಖೆಯ ಭದ್ರತಾ ಅಧಿಕಾರಿಗಳ ತಂಡ ಶುಕ್ರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಹೊಳೆಆಲೂರು- ಬಾಗಲಕೋಟೆ ಮಧ್ಯೆ ಜೋಡಿ ರೈಲ್ವೆ ಮಾರ್ಗದ ಭದ್ರತಾ ಸಮೀಕ್ಷೆ ಪರೀಶಿಲಿಸಿ ತಾತ್ಕಾಲಿಕ ರೈಲ್ವೆ ನಿಲ್ದಾಣ ಉದ್ಘಾಟಿಸಿದರು.

ರೈಲ್ವೆ ಇಲಾಖೆಯ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಹರ್ಷಖರೆ, ವಿಭಾಗೀಯ ವಾಣಿಜ್ಯ ಅಧಿಕಾರಿ ಸಂತೋಷ ಹೆಗಡೆ ಅವರನ್ನೊಳಗೊಂಡ 50ಕ್ಕೂ ಅಧಿಕ ಅಧಿಕಾರಿಗಳು ರೈಲ್ವೆ ನಿಲ್ದಾಣದ ವ್ಯವಸ್ಥೆ, ಜೋಡಿ ಮಾರ್ಗದ ವಿದ್ದುದ್ಧೀಕರಣ ಒಳಗೊಂಡಂತೆ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಈ ವೇಳೆ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ್‌ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಮತ್ತು ಸಮಿತಿ ಸದಸ್ಯರು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಕುತುಬುದ್ದಿನ್‌ ಖಾಜಿ, ಅಮೃತ ಭಾರತ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಬಾಗಲಕೋಟೆ ರೈಲ್ವೆ ನಿಲ್ದಾಣದ ಕಾಮಗಾರಿ ಯೋಜನೆಗೆ ತಕ್ಕಂತೆ ನಡೆದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಲ್ದಾಣದಲ್ಲಿ ಶೌಚಾಲಯಗಳು, ಪ್ಲಾಟ್ ಫಾರ್ಮ್‌ಗಳಲ್ಲಿ ಲಿಫ್ಟ್‌ಗಳು ಮತ್ತು ಎಕ್ಸಿಲೇಟರ್ ಸೇತುವೆ ಮತ್ತು ಬ್ಯಾಟರಿ ಕಾರು ಮತ್ತು ಪೂರ್ಣ ಪ್ರಮಾಣದ ನಿಲ್ದಾಣ ಚಾವಣಿ ವ್ಯವಸ್ಥೆ ಮಾಡಲು ಆಗ್ರಹಿಸಿದರು.

ಈಗಾಗಲೇ ಹಲವು ರೈಲುಗಳು ಓಡಾಟ ನಿಲ್ಲಿಸಿದ್ದು, ಅವುಗಳ ಪುನಾರಂಭಿಸಲು ಕ್ರಮ ಕೈಗೊಳ್ಳಬೇಕು. ಸೋಲ್ಲಾಪುರ-ಹುಬ್ಬಳ್ಳಿ ಇಂಟರ್‌ಸಿಟಿ ರೈಲನ್ನು ವಾಸ್ಕೋಡಿಗಾಮಾ(ಗೋವಾ)ಗೆ ವಿಸ್ತರಿಸಬೇಕು. ವಿಜಯಪುರ ನಗರದಿಂದ ಪ್ರತಿನಿತ್ಯ ತಿರುಪತಿಗೆ ಹೊಸ ರೈಲು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಶ್ರೀನಿವಾಸ ಬಳ್ಳಾರಿ ಮಾತನಾಡಿ, ಬಾಗಲಕೋಟೆ ಜಿಲ್ಲಾ ಕೇಂದ್ರವಾಗಿರುವುದರಿಂದ 24 ಗಂಟೆಯವರೆಗೂ ರಿಸರ್ವೇಶನ್ ಕೌಂಟರ್ ಚಾಲನೆಯಲ್ಲಿರಬೇಕು. ನಿಲ್ದಾಣದಲ್ಲಿ ವಿಚಾರಣಾ ಕೊಠಡಿ ನಿರ್ಮಿಸಬೇಕು. ದ್ವಿಚಕ್ರ ವಾಹನಗಳ ಕಳುವಾಗುತ್ತಿದ್ದು, ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಆಟೋ ರೀಕ್ಷಾ ಮತ್ತು ಟಾಂಗಾಗಳ ನಿಲುಗಡೆಗೆ ನಿಲ್ದಾಣದಲ್ಲಿ ಪ್ರತ್ಯೇಕ ಭಾಗಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ರೈಲ್ವೆ ಮಾರ್ಗದ ಕಾಮಗಾರಿ ತೀವ್ರಗೊಳಿಸಿ:

ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ದಶಕದಿಂದ ರಾಜ್ಯ ಸರ್ಕಾರ ಭೂಮಿ ನೀಡಿಲ್ಲ ಎಂದು ನೆಪ ಹೇಳುತ್ತಿದ್ದು, ಯೋಜನೆಗೆ ಅಗತ್ಯವಿರುವ ಪೂರ್ಣ ಪ್ರಮಾಣದ ಭೂಮಿಯನ್ನು ರಾಜ್ಯ ಸರ್ಕಾರ ನೀಡಿದೆ. ಕುಡಚಿಯವರೆಗೂ ಪೂರ್ಣ ಪ್ರಮಾಣದ ಕಾಮಗಾರಿ ಏಕಕಾಲಕ್ಕೆ ಪ್ರಾರಂಭಿಸಿ 2024ರ ಅಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಒದಗಿಸಬೇಕು. ಈಗಾಗಲೆ ಲೋಕಾಪುರ-ಖಜ್ಜಿಡೋಣಿ ಕಾಮಗಾರಿ ಭರದಿಂದ ಸಾಗಿದ್ದು ಸ್ವಾಗತಾರ್ಹ. ಆದರೆ ಮುಂದಿನ ಕಾಮಗಾರಿಗೆ ಟೆಂಡರ್ ಕರೆದಿದ್ದು, ಶೀಘ್ರವೇ ಗುತ್ತಿಗೆದಾರರನ್ನುನೇಮಕಗೊಳಿಸಿ ಅವರಿಂದ 12 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೋಳಿಸುವ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ಸ್ಪಂಧಿಸಿದ ರೇಲ್ವೆ ಅಧಿಕಾರಿಗಳು ಎಲ್ಲಾ ವಿಷಯಗಳನ್ನು ಗಂಭಿರವಾಗಿ ಪರೀಶಿಲಿಸಿ ಕ್ರಮಕೈಗೊಳ್ಳಲಾಗುವುದು. ನಡೆದಂತಹ ಕಾಮಗಾರಿಗೆ ಗುಣಮಟ್ಟವನ್ನು ಕಾಯ್ದುಕೊಂಡು ವೇಗದ ಗತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೈನುದ್ದಿನ ಖಾಜಿ, ನಾರಾಯಣಸಾ ಪವಾರ, ಜಯಶ್ರೀ ಗುಳಬಾಳ, ಮತ್ತಿತರು ಉಪಸ್ಥಿತರಿದ್ದರು.