ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಗೃಹ ಸಚಿವ ಡಾ. ಜಿ ಪರಮೇಶ್ವರ್ ಸಜ್ಜನ ರಾಜಕಾರಣಿಯಾಗಿದ್ದು ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಅವರು ಯಾವುದೇ ತಪ್ಪುಗಳನ್ನು ಮಾಡುವಂತವರಲ್ಲ ಎಂದು ರಾಜ್ಯ ಸರ್ಕಾರದ ಪರಿಸರ ಇಲಾಖೆ ರಾಯಭಾರಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು. ತಾಲೂಕಿನ ಬಳ್ಳೂರು ಗ್ರಾಮದಲ್ಲಿರುವ ತಿಮ್ಮಕ್ಕನವರ ದತ್ತುಪುತ್ರ ಉಮೇಶ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ ಪರಮೇಶ್ವರ್ ಅವರು ಸಹಾಯ ಕೇಳಿಕೊಂಡು ಹೋದವರನ್ನು ವಾಪಸ್ ಕಳಿಸದೆ ತಮ್ಮ ಕೈಲಾದಷ್ಟು ನೀಡುವ ಮನೋಭಾವ ಉಳ್ಳವರಾಗಿದ್ದಾರೆ. ನಾಡಿನಲ್ಲಿ ದೀನದಲಿತರ ಧೀಮಂತ ನಾಯಕರಾಗಿದ್ದು ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಮಾಡುತ್ತಿರುವದು ಉತ್ತಮ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸಾಲುಮರದ ತಿಮ್ಮಕ್ಕನವರ ದತ್ತು ಪುತ್ರ ಬಳ್ಳೂರು ಉಮೇಶ್ ಮಾತನಾಡಿ, ಸಾಕಷ್ಟು ವರ್ಷಗಳಿಂದ ಜಿ. ಪರಮೇಶ್ವರ್ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ರಾಜ್ಯದ ಜನತೆಗೆ ತಿಳಿದ ವಿಷಯವಾಗಿದೆ. ಸಜ್ಜನ ರಾಜಕಾರಣಿಯಾದ ಇವರನ್ನು ಎಲ್ಲಾ ಸಮುದಾಯದವರು ಕೂಡ ಒಪ್ಪಿಕೊಂಡಿದ್ದಾರೆ. ಇವರು ದಲಿತ ಸಮುದಾಯದ ವ್ಯಕ್ತಿಯಾಗಿದ್ದು ಎಲ್ಲಿ ಉನ್ನತ ಹುದ್ದೆಗೆ ಹೋಗುತ್ತಾರೋ ಎಂಬ ಕಾರಣದಿಂದ ಕೆಲವರು ವಾಮಮಾರ್ಗಗಳನ್ನು ಹುಡುಕುವ ಮೂಲಕ ಅವರ ತೇಜೋವಧೆ ಮಾಡುತ್ತಿರುವ ಬಗ್ಗೆ ಶಂಕೆ ಇದ್ದು, ಮುಂದಿನ ದಿನಗಳಲ್ಲಿ ಕಿಡಿಗೇಡಿಗಳು ತಾವು ಮಾಡಿದ ಕರ್ಮದ ಫಲವನ್ನು ಅವರೇ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಲುಮರದ ತಿಮ್ಮಕ್ಕನವರಿಗೆ ಜಿ ಪರಮೇಶ್ವರ್ ಅವರು ಹಿರಿಯ ಮಗನಂತಿದ್ದು, ತಿಮ್ಮಕ್ಕನವರು ಇಷ್ಟು ದಿನ ಬದುಕಿದ್ದಾರೆಂದರೆ ಅದಕ್ಕೆ ಜಿ. ಪರಮೇಶ್ವರ್ ಅವರೇ ಕಾರಣರಾಗಿದ್ದಾರೆ. ಅವರು ತಿಮ್ಮಕ್ಕನವರಿಗೆ ಮಾಡಿರುವ ಸಹಾಯವನ್ನು ಎಂದೂ ಹೇಳಿಕೊಂಡಿಲ್ಲ. ಅದೇ ರೀತಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರು ಚೆಕ್ ಮೂಲಕ ಸಹಾಯ ಮಾಡುವುದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಅಕ್ರಮ ಗೋಲ್ಡ್ ಕೇಸ್ ಆರೋಪಿ ರನ್ಯಾರಾವ್ ಅವರಿಗೆ ಸಹಾಯ ಮಾಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು ರನ್ಯಾ ಅವರು ತಪ್ಪು ಮಾಡಿದ್ದರೆ ಅವರ ವಿರುದ್ಧ ತನಿಖೆಯಾಗಲಿ ಎಂದರು.ಜಿ ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಇ ಡಿ ದಾಳಿ ನಡೆಸಿದಾಗ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿ ಪರಮೇಶ್ವರ್ ತಿಳಿಸಿದ್ದರು. ಆದರೂ ಕೂಡ ಕೆಲ ರಾಜಕಾರಣಿಗಳು ಜಿ ಪರಮೇಶ್ವರ್ ವಿರುದ್ಧ ಇದನ್ನು ಅಸ್ತ್ರವಾಗಿ ಬಳಸಿಕೊಂಡು ರಾಜಕೀಯವಾಗಿ ಮಾತನಾಡುತ್ತಿರುವುದು ಖಂಡನೀಯ. ಜಿ ಪರಮೇಶ್ವರ್ ಅವರು ಕೆಲ ಬಡವರಿಗೆ ಉಚಿತವಾಗಿ ಮೆಡಿಕಲ್ ಸೀಟ್ ನೀಡಿದ್ದಾರೆ. ಅವರು ಮಾಡಿರುವ ಸಹಾಯವನ್ನು ಎಲ್ಲೂ ಕೂಡ ಹೇಳಿಕೊಳ್ಳುವ ಮನಸ್ಥಿತಿ ಅವರದಲ್ಲ. ಪ್ರತಿ ದಿನ ಅವರ ಬಳಿ ಸಹಾಯಕ್ಕೆ ಸಾಕಷ್ಟು ಜನರು ಹೋಗುತ್ತಿರುತ್ತಾರೆ. ಹಲವಾರು ಉತ್ತಮ ಕೆಲಸ ನಿರ್ವಹಿಸಿ ರಾಜ್ಯದ ಜನತೆಯ ಪ್ರೀತಿ ಪಾತ್ರರಾಗಿರುವ ಜಿ ಪರಮೇಶ್ವರ್ ಅವರ ಹೆಸರಿಗೆ ಮಸಿ ಬಳಿಯಲು ಇಡಿ ಇಲಾಖೆ ಪ್ರವೇಶವಾಗಿದ್ದು ತನಿಖೆ ನಡೆಯಲಿದೆ. ಆದರೆ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಇಟ್ಟುಕೊಂಡು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.