ಬಡವರಲ್ಲಿ ಪ್ರಾಮಾಣಿಕತೆ ಹೆಚ್ಚು: ಅಬ್ದುಲ್ ಸಿದ್ದಿಕಿ

| Published : Aug 05 2025, 11:45 PM IST

ಸಾರಾಂಶ

ಬಡ ಜನರಲ್ಲಿ ಪ್ರಾಮಾಣಿಕತೆ ಹೆಚ್ಚಿರುತ್ತದೆ ಎಂದು ಸಹುಲತ್ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಅಬ್ದುಲ್ ಜಬ್ಬಾರ್ ಸಿದ್ದಿಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಬಡ ಜನರಲ್ಲಿ ಪ್ರಾಮಾಣಿಕತೆ ಹೆಚ್ಚಿರುತ್ತದೆ ಎಂದು ಸಹುಲತ್ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಅಬ್ದುಲ್ ಜಬ್ಬಾರ್ ಸಿದ್ದಿಕಿ ಹೇಳಿದರು.

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತದ ವತಿಯಿಂದ ನಗರದ ಮೊಘಲ್ ಗಾರ್ಡನ್ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಸಮುದಾಯ ಸಂಪರ್ಕ, ಮಿಷನ್ ಮತ್ತು ವಿಜನ್ ಕುರಿತ ಸಭೆಯಲ್ಲಿ ಮಾತನಾಡಿ, ಬೀದರ್ ಕಾರುಣ್ಯ ಸಹಕಾರಿ ಸಂಸ್ಥೆಯ ಬಡವರು ಹಾಗೂ ಸಣ್ಣ ವ್ಯಾಪಾರಿಗಳ ಸಾಲ ಮರು ಪಾವತಿ ಪ್ರಮಾಣ ಶೇಕಡ 98 ರಷ್ಟಿದೆ ಎಂದು ತಿಳಿಸಿದರು.

ದೇಶದಲ್ಲಿ ಬಡ್ಡಿ ರಹಿತ ಸಹಕಾರ ಸಂಘಗಳು 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 47 ಶಾಖೆಗಳಿದ್ದು, 1.25 ಲಕ್ಷ ಕುಟುಂಬಗಳು ಈ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿವೆ. ಪ್ರತಿ ನಿತ್ಯ ಈ ಸಂಸ್ಥೆಗಳು ಸುಮಾರು 1.5 ಕೋಟಿಯಷ್ಟು ಸಾಲ ನೀಡುತ್ತಿವೆ. ಬಡವರ ಹೆಚ್ಚಿನ ಆದಾಯದ ಪ್ರಮಾಣ ಇತರ ಬ್ಯಾಂಕ್‌ಗಳಿಗೆ ಬಡ್ಡಿ ರೂಪದಲ್ಲಿ ಹೋಗುತ್ತದೆ. ಆದರೆ, ನಮ್ಮ ಸಹಕಾರಿ ಸಂಘಗಳು ಬಡವರಿಗೆ ಬಡ್ಡಿ ರಹಿತವಾಗಿ ಸಾಲ ನೀಡುತ್ತಿವೆ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಬೀದರ್ ಕಾರುಣ್ಯ ಸಂಘವು ಕಡಿಮೆ ಅವಧಿಯಲ್ಲೇ ಅಭಿವೃದ್ಧಿ ಸಾಧಿಸಿರುವುದು ಆಶ್ಚರ್ಯ ಹಾಗೂ ಸಂತಸ ಉಂಟು ಮಾಡಿದೆ. ಸಂಘ ಬಡವರು ಹಾಗೂ ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.

ಸಂಘದ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಮುಜ್ತಬಾ ಖಾನ್ ಮಾತನಾಡಿ, ಸಂಘವು 7 ವರ್ಷಗಳ ಅವಧಿಯಲ್ಲಿ ಸಣ್ಣ ವ್ಯಾಪಾರಿಗಳಿಗೆ ₹60 ಕೋಟಿ ಹಾಗೂ 40 ಲಕ್ಷ ವೈಯಕ್ತಿಕ ಸಾಲ ವಿತರಿಸಿದೆ 3,500 ಕುಟುಂಬಗಳು ಸಂಘದೊಂದಿಗೆ ಜೋಡಣೆ ಆಗಿವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಹಮ್ಮದ್ ಮಾತನಾಡಿ, ದೇವರು ವ್ಯಾಪಾರವನ್ನು ಕಾನೂನು ಬದ್ಧಗೊಳಿಸಿದ್ದಾನೆ. ಬಡ್ಡಿ ನಿಷೇಧಿಸಿದ್ದಾನೆ ಎಂದು ತಿಳಿಸಿದರು.

ಬೀದರ್ ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಬಿ.ಎಸ್. ಕುದುರೆ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೌಝಂ ಮಾತನಾಡಿದರು.

ರಹಮತ್ ಉಲ್ಲಾ ಖಾನ್ ಅವರ ಕುರಾನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಕುರಾನ್ ಪಠಣವನ್ನು ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್ ಕನ್ನಡಕ್ಕೆ ಅನುವಾದಿಸಿದರು.

ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಸಂಘದ ಉಪಾಧ್ಯಕ್ಷ ಎಹ್ತೆಶಾಮ್ ಉಲ್ ಹಕ್, ಸಿಇಒ ಮುಹಮ್ಮದ್ ಮಸಿಯುದ್ದೀನ್, ಪ್ರಧಾನ ಕಾಜಿ ಡಾ. ಸೈಯದ್ ಹುಸಾಮುದ್ದೀನ್ ಉಜೇರ್, ಪ್ರಮುಖರಾದ ಮುಹಮ್ಮದ್ ಆಸಿಫುದ್ದೀನ್, ಶೇಖರ ಚೌಹಾಣ್, ಅಬ್ದುಲ್ ಸಲಾಂ, ಮುಬಾಶಿರ್ ಸಿಂದೆ, ಮುಹಮ್ಮದ್ ಅಕ್ರಂ ಅಲಿ, ಅಶ್ಫಾಕ್ ಅಹಮ್ಮದ್, ಅಸ್ಮಾ, ಸಬಿಯಾ ಖಾನಂ, ಅಹಮ್ಮದ್ ಸೇಠ್, ಶೇಖ್ ಸಿರಾಜುದ್ದೀನ್ ಮತ್ತಿತರರು ಇದ್ದರು.