ಹೊಂಗನೂರು ಗ್ರಾಪಂ ಕಟ್ಟಡ ಅಶುಚಿತ್ವ, ಅನೈತಿಕ ಚಟುವಟಿಕೆ ತಾಣ

| Published : Oct 10 2025, 01:00 AM IST

ಹೊಂಗನೂರು ಗ್ರಾಪಂ ಕಟ್ಟಡ ಅಶುಚಿತ್ವ, ಅನೈತಿಕ ಚಟುವಟಿಕೆ ತಾಣ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ೧೮೫೮ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಹೊಂಗನೂರು ಬೆಲ್ಲವತ್ತ, ಮುರಟಿಪಾಳ್ಯ, ಶನಿವಾರಮುಂಟಿ ಗ್ರಾಮಗಳನ್ನು ಹೊಂಗನೂರು ಪಂಚಾಯಿತಿ ಒಳಗೊಂಡಿದೆ. ಗ್ರಾಮದಿಂದ ಕಳ್ಳೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗ್ರಾಮದ ಹೊರ ಭಾಗದಲ್ಲಿ ಪಂಚಾಯಿತಿ ಕಟ್ಟಡವಿದೆ. ಆದರೆ ಈ ಕಟ್ಟಡ ಸುತ್ತಲೂ ಕಳೆ ಸಸ್ಯಗಳು ಕಾಡಿನಂತೆ ಹಬ್ಬಿವೆ. ಇದರ ಹಂಬುಗಳು ಕಿಟಕಿ ಒಳಗಿಂದ ತೂರಿ ಕಚೇರಿ ಒಳಗೂ ಹಬ್ಬಿದೆ. ಕಟ್ಟಡದ ಹಿಂಭಾಗದಲ್ಲಿ ೨ ಶೌಚಗೃಹವಿದೆ. ಆದರೆ ಇದರ ನಿರ್ವಹಣೆಯಿಲ್ಲದೆ ಇದು ಗಬ್ಬು ನಾರುತ್ತಿದೆ. ಅಲ್ಲದೆ ಇಲ್ಲಿಗೆ ನೀರಿನ ಸಂಪರ್ಕವೂ ಇಲ್ಲ.

ಕನ್ನಡಪ್ರಭ ವಾರ್ತೆ ಯಳಂದೂರುಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ೧೮೫೮ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಹೊಂಗನೂರು ಬೆಲ್ಲವತ್ತ, ಮುರಟಿಪಾಳ್ಯ, ಶನಿವಾರಮುಂಟಿ ಗ್ರಾಮಗಳನ್ನು ಹೊಂಗನೂರು ಪಂಚಾಯಿತಿ ಒಳಗೊಂಡಿದೆ. ಗ್ರಾಮದಿಂದ ಕಳ್ಳೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗ್ರಾಮದ ಹೊರ ಭಾಗದಲ್ಲಿ ಪಂಚಾಯಿತಿ ಕಟ್ಟಡವಿದೆ. ಆದರೆ ಈ ಕಟ್ಟಡ ಸುತ್ತಲೂ ಕಳೆ ಸಸ್ಯಗಳು ಕಾಡಿನಂತೆ ಹಬ್ಬಿವೆ. ಇದರ ಹಂಬುಗಳು ಕಿಟಕಿ ಒಳಗಿಂದ ತೂರಿ ಕಚೇರಿ ಒಳಗೂ ಹಬ್ಬಿದೆ. ಕಟ್ಟಡದ ಹಿಂಭಾಗದಲ್ಲಿ ೨ ಶೌಚಗೃಹವಿದೆ. ಆದರೆ ಇದರ ನಿರ್ವಹಣೆಯಿಲ್ಲದೆ ಇದು ಗಬ್ಬು ನಾರುತ್ತಿದೆ. ಅಲ್ಲದೆ ಇಲ್ಲಿಗೆ ನೀರಿನ ಸಂಪರ್ಕವೂ ಇಲ್ಲ. ಈ ಪಂಚಾಯಿತಿ ಅಂಗಳದಲ್ಲಿ ಸಮಸ್ಯೆಗಳೇ ಎದ್ದು ಕಾಣುತ್ತದೆ. ಪಂಚಾಯಿತಿ ಸುತ್ತುಗೋಡೆಯ ಒಳಗೆ ಕುಡಿದು ಬೀಸಾಡುವ ಮದ್ಯದ ಪೌಚ್‌ಗಳಿವೆ. ಅಲ್ಲದೆ ಇದರ ಹಿಂಭಾಗ ಅರ್ಧಂಬಂರ್ಧವಾಗಿರುವ ಕಟ್ಟಡದಲ್ಲಿ ಕಳೆ ಸಸ್ಯಗಳು ಬೆಳೆದಿವೆ. ಕ್ರಿಮಿಕೀಟಗಳು, ಸರೀಸೃಪಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಕಚೇರಿ ಮುಂಭಾಗ ಇರುವ ಆಟೋಟಿಪ್ಪರ್ ಕೆಲಸಕ್ಕೆ ಬಾರದೆ ನಿಂತಿದ್ದು ಇದರ ಗಾಜು ಒಡೆದಿದೆ. ಮನೆಮನೆಗೆ ಕಸ ಸಂಗ್ರಹಿಸಲು ನೀಡಲು ಇಟ್ಟಿದ್ದ ಕಸದ ಬುಟ್ಟಿಗಳಿಗೆ ಕಸ ಹಿಡಿದಿದ್ದು ನಿರುಪಯುಕ್ತವಾಗಿ ಬಿದ್ದಿವೆ. ಕಚೇರಿ ಒಳಗೆ ಗ್ರಂಥಾಲಯಕ್ಕೆ ತಂದಿದ್ದ ಪಿಠೋಪಕರಣಗಳು, ಪುಸಕ್ತಗಳು ದೂಳು ಹಿಡಿಯುತ್ತಿದೆ.

ಸಾರ್ವಜನಿಕರು ಬಂದರೆ ಕೂರಲೂ ಸ್ಥಳ, ಕುಡಿಯಲು ನೀರು ಇಲ್ಲ. ಕಟ್ಟಡದ ಶೌಚಗೃಹಕ್ಕೆ ನೀರೆ ಇಲ್ಲದೆ ಇದು ಗಬ್ಬು ನಾರುತ್ತಿದೆ. ಇದರ ಪಿಟ್ ಗುಂಡಿ ಕೂಡ ಬಾಯ್ತೆರೆದು ನಿಂತಿದೆ. ಕಳೆದ ಹಲವು ದಿನಗಳಿಂದಲೂ ಇಲ್ಲಿನ ಸಿಸಿ ಕ್ಯಾಮೆರಾ ಕೆಟ್ಟಿ ನಿಂತಿದೆ. ಅಲ್ಲದೆ ಇಲ್ಲಿಗೆ ತೆರಳುವ ರಸ್ತೆಯ ಸುತ್ತಮುತ್ತಲೂ ಅನೈರ್ಮಲ್ಯ ತಾಂಡವ ಆಡುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸದ ಪಂಚಾಯಿತಿ ಗ್ರಾಮದಲ್ಲಿರುವ ನೂರಾರು ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿದೆ ಎಂಬುದು ಸ್ಥಳೀಯ ಮಹದೇವಸ್ವಾಮಿ ಪ್ರಶ್ನೆಯಾಗಿದೆ. ಗ್ರಾಪಂ ಸದಸ್ಯ ಚಾಮದಾಸಯ್ಯ ಮಾತನಾಡಿ, ಕೆಂಪನಪುರ ಗ್ರಾಪಂ ಪಿಡಿಒ ರಾಮೇಗೌಡ ಇಲ್ಲಿಗೆ ಪ್ರಭಾರ ಪಿಡಿಒ ಆಗಿದ್ದಾರೆ. ಇಲ್ಲಿಗೆ ಅಪರೂಪಕ್ಕೆ ಬರುತ್ತಾರೆ. ಬಂದರೂ ಇಲ್ಲಿ ಹೆಚ್ಚು ಹೊತ್ತು ನಿಲ್ಲ, ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದರೂ ಇದನ್ನು ಬಗೆಹರಿಸಿಕೊಳ್ಳಲು ನಮಗೆ ಪಿಡಿಒ ಸಿಗಲ್ಲ. ಅಲ್ಲದೆ ಇಲ್ಲಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಪೌರ ಕಾರ್ಮಿಕರೇ ಇಲ್ಲ. ಇಡೀ ಪಂಚಾಯಿತಿಯೇ ಗಬ್ಬು ನಾರುತ್ತಿದೆ. ಗ್ರಾಮದ ಕೆಲವೆಡೆ ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ನಾನು ಇಲ್ಲಿಗೆ ಪ್ರಭಾರ ಪಿಡಿಒ ಆಗಿದ್ದೇನೆ. ಹಾಗಾಗಿ ಇಲ್ಲಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಕಚೇರಿಯಲ್ಲಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು.

ರಾಮೇಗೌಡ ಪ್ರಭಾರ ಪಿಡಿಒ ಹೊಂಗನೂರು ಗ್ರಾಪಂ