ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾನವೀಯ ಮೌಲ್ಯ, ಸದ್ಗುಣಗಳು, ಕೌಶಲ್ಯವುಳ್ಳ ಶಿಕ್ಷಣವನ್ನು ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ನೀಡಬೇಕಾಗಿದೆ ಎಂದು ಎಸ್ಸೆಸ್ ಕೇರ್ ಟ್ರಸ್ಟ್ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಆವರಗೆರೆ ಗ್ರಾಮದ ಶ್ರೀ ಗುರು ಪಂಚಾಕ್ಷರಿ ಗವಾಯಿ ಕಾಂಪೋಜಿಟ್ ಶಾಲೆಯ ಸಂಭ್ರಮ-2023-24 ಉದ್ಘಾಟಿಸಿ ಮಾತನಾಡಿ, ಮಕ್ಕಳು ಸಹಪಠ್ಯ ಚಟುವಟಿಕೆಗಳಲ್ಲೂ ಪಾಲ್ಗೊಂಡಾಗ ಮಾತ್ರವೇ ನಾಯಕತ್ವ ಗುಣಗಳು ಸಹಜವಾಗಿಯೇ ಮೈಗೂಡುತ್ತವೆ. ಪ್ರತಿ ಮಗುವಿನಲ್ಲೂ ಒಂದೊಂದು ಕೌಶಲ್ಯ, ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವುದು ಶಿಕ್ಷಕರ ಜವಾಬ್ದಾರಿ ಎಂದರು.
ಮಕ್ಕಳು ಗುರಿ ತಲುಪಲು ಮಾಬೇಕಾದ ಪ್ರಯತ್ನಗಳ ಬಗ್ಗೆಯೂ ಪಾಲಕರು ಮಾರ್ಗದರ್ಶನ ನೀಡಬೇಕು. ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನಕ್ಕೆ ಸ್ಪರ್ಧಾತ್ಮಕ ಪುಸ್ತಕ ಓದುವ ಜೊತೆಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆಯೂ ಅರಿವಿರಬೇಕು. ನಿತ್ಯವೂ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿ, ಯುವ ಜನರು ರೂಢಿಸಿಕೊಳ್ಳಿ. ಗಂಡು, ಹೆಣ್ಣೆಂಬ ಬೇಧ ಮಾಡದೇ ಪಾಲಕರು ಸಮಾನ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಬೇಕು. ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆದರೂ ಹೆತ್ತವರು, ವಿದ್ಯೆ ಕೊಟ್ಟ ಗುರುವನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಹೆಸರಿನ ಸಂಸ್ಥೆಯು ಆವರಗೆರೆಯಂತಹ ಶ್ರಮಿಕರು, ಹೋರಾಟಗಾರರ ಊರಿನಲ್ಲಿ ಪಾಲಕರನ್ನೂ ಸಂಸ್ಥೆಯ ಭಾಗವಾಗಿ ಶಾಲೆಯ ಸಮಗ್ರ ಅಭಿವೃದ್ಧಿ ಸಾಗುತ್ತಿದೆ. ಸಂಸ್ಥೆಯ ಸಂಸ್ಥಾಪಕರಾಗಿದ್ದ ಹಿರಿಯ ವಕೀಲ ದಿವಂಗತ ಎ.ಎಚ್.ಶಿವಮೂರ್ತಿ ಸ್ವಾಮಿ ಪರಿಶ್ರಮಕ್ಕೆ ತಕ್ಕಂತೆ ಪತ್ನಿ ಎ.ಎಚ್.ಛಾಯಾಲಕ್ಷ್ಮಿ, ಮಕ್ಕಳಾದ ಬೋಧಕಿ ಸುಗ್ಗಲಾದೇವಿ, ಸಿದ್ದು ಸಂಸ್ಥೆ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ, ಹಿರಿಯ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ಮೌಖಿಕ ಮನೋಭಾವ ಸದೃಢ ಮನಸ್ಸನ್ನು ಬೆಳೆಸಲು ಈ ಶಾಲೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾಗಿದ್ದುಶಿಸ್ತು, ಶ್ರದ್ಧೆ, ಶ್ರಮ. ಇವುಗಳಿಲ್ಲದಿದ್ದರೆ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಯಾರು ಕಷ್ಟಪಡುತ್ತಾರೆ, ಶಿಸ್ತಿನಿಂದ, ಶ್ರಮದಿಂದ ಓಗುತ್ತಾರೋ ಅಂತಹವರು ಸಾಧನೆ ಮಾಡುತ್ತಾರೆ ಎಂದು ಹೇಳಿದರು.ಸಂಸ್ಥೆ ಅಧ್ಯಕ್ಷೆ ಎ.ಎಚ್.ಲಕ್ಷ್ಮಿಛಾಯಾ ಅಧ್ಯಕ್ಷತೆ ವಹಿಸಿದ್ದರು. ಸಾಶಿಇ ಉಪ ನಿರ್ದೇಶಕ ಜಿ.ಕೊಟ್ರೇಶ, ಕನ್ನಡಪ್ರಭದ ನಾಗರಾಜ ಎಸ್.ಬಡದಾಳ್, ಶಾಲಾ ಪೋಷಕ, ಪ್ರಗತಿಪರ ರೈತ ಜಿ.ಪರಮೇಶ್ವರಪ್ಪ, ಸಂಸ್ಥೆಯ ನಿರ್ದೇಶಕರಾದ ಸುಗ್ಗಲಾದೇವಿ, ಸಿದ್ದು, ಮುಖ್ಯ ಶಿಕ್ಷಕರು, ಶಿಕ್ಷಕ-ಶಿಕ್ಷಕಿಯರು, ಮಕ್ಕಳು, ಪಾಲಕರು, ಆವರಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು. ಇದೇ ವೇಳೆ ಪ್ರತಿಭಾವಂತ ಮಕ್ಕಳಿಗೆ ಶ್ರೀಗಳು, ಗಣ್ಯರು ಬಹುಮಾನ ವಿತರಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಮಾನವೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎಸ್ಸೆಸ್ ಕೇರ್ ಟ್ರಸ್ಟ್ ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ರ ಜನಾನುರಾಗಿ ವ್ಯಕ್ತಿತ್ವ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ರಾಜಕೀಯವಾಗಿಯೂ ಸೇವೆ ಮಾಡುವ ಅವಕಾಶ ಸಿಗಲಿ. ಸಾವಿರಾರು ಆರೋಗ್ಯ ಶಿಬಿರ, ಬಡವರಿಗೆ ಚಿಕಿತ್ಸೆಗೆ ನೆರವು ಹೀಗೆ ಸಾಕಷ್ಟು ಕೆಲಸ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ.
ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠ