ಮಾನವೀಯ ಮೌಲ್ಯಗಳೇ ಸಾಹಿತ್ಯದ ಆಶಯ: ಕೆ.ಗುಣಪಾಲ ಕಡಂಬ

| Published : Dec 07 2024, 12:30 AM IST

ಸಾರಾಂಶ

ಕಾರ್ಕಳ ತಾಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 20ನೇ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಿತು.

ಕಾರ್ಕಳ ತಾಲೂಕು 20ನೇ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಾರ್ಕಳ

ಜನಪದರ ಬದುಕು ಮೌಲ್ಯದಿಂದ ಕೂಡಿದ್ದರೆ ಅದೇ ದೊಡ್ಡ ಸಾಹಿತ್ಯ. ಸಾಹಿತ್ಯದ ಆಶಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ಮುಂದಿನ ಪೀಳಿಗೆಗೆ ಕಟ್ಟಿ ಕೊಡುವುದಾಗಿದೆ ಎಂದು ಜನಪದ ವಿದ್ವಾಂಸ ಕೆ.ಗುಣಪಾಲ ಕಡಂಬ ಹೇಳಿದರು.

ಅವರು ಕಾರ್ಕಳ ತಾಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 20ನೇ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಸಾಹಿತ್ಯ ಬದುಕನ್ನು ಕಟ್ಟಿ ಕೊಡುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿ ಬೆಳೆಸುಕೊಳ್ಳಬೇಕು ಎಂದು ಹೇಳಿದರು.

ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯನ ನುಡಿಗಳನ್ನಾಡಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂಡ ಸದಾನಂದ ಶೆಣೈ, ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಜಾನಪದ ವಿದ್ವಾಂಸ ಕೆ. ಗುಣಪಾಲ ಕಡಂಬ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ., ಶಾಲಾ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಶೀತಲ್‌ ಕುಮಾರ್ ಜೈನ್, ಶಾಲಾ ಮುಖ್ಯಶಿಕ್ಷಕ ನರಸಿಂಹ ನಾಯಕ್, ಪ್ರಾಂಶುಪಾಲ ಬೇಬಿ ಈಶ್ವರ ಮಂಗಲ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಾಂತಿ ರಾಜ್ ಜೈನ್, ಶಿರ್ಲಾಲು ಗ್ರಾ.ಪಂ. ಅಧ್ಯಕ್ಷ ಶೋಭಾ, ಕಸಾಪ ಜಿಲ್ಲಾ ಕಾರ್ಯದರ್ಶಿ ಸತೀಶ್, ಕಂಬಳ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಮುನಿರಾಜ್ ರೆಂಜಾಳ ಉಪಸ್ಥಿತರಿದ್ದರು.

* ಕೃತಿ ಬಿಡುಗಡೆ

ಆರ್. ರಮೇಶ್ ಪ್ರಭು ಬರೆದ ‘ಹೊಂಗನಸು’, ಎಚ್.ವಿಧಾತ್ರಿ ರವಿಶಂಕರ್ ಅವರ ‘ನಕ್ಷತ್ರ ಪಟಲ’, ಶೈಲಜಾ ಹೆಗ್ಡೆ ಬರೆದ ‘ಭಾವ ಲಹರಿ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

* ಸಾಧಕರಿಗೆ ಸನ್ಮಾನ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ವಿನಾಯಕ ನಾಯ್ಕ, ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಕೋಣಗಳ ಯಜಮಾನ ಶ್ರೀಕಾಂತ್ ಭಟ್ ನಂದಳಿಕೆ, ಮಿಜಾರು ಶಕ್ತಿಪ್ರಸಾದ್ ಶೆಟ್ಟಿ, ವರ್ಣಚಿತ್ರ ಕಲಾವಿದ ಗಂಜೀಫಾ ರಘುಪತಿ ಭಟ್, ೧೦ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿನಮ್ರ ಆಚಾರ್ಯ, ಕರುನಾಡ ಸಿರಿ ಪ್ರಶಸ್ತಿ ವಿಜೇತ ಕನ್ನಡ ಶಾಲೆ ಕಲ್ಯಾ ಸ.ಪ್ರ. ಶಾಲೆ ಮುಖ್ಯಶಿಕ್ಷಕಿ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು.

---------------------

ಸಮ್ಮೇಳನದಲ್ಲಿ ಮೂರು ಗೋಷ್ಠಿಗಳು

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಾರಧಿ, ಸಾಹಿತ್ಯ ಸಂಸ್ಕೃತಿ, ಸಾಹಿತ್ಯ ಮಂಥನ ಎಂಬ ಮೂರು ವಿಭಾಗದಲ್ಲಿ ಗೋಷ್ಠಿಗಳು ನಡೆಯಿತು.

ಸಾಹಿತ್ಯ ವಾರಧಿ ಗೋಷ್ಠಿಯಲ್ಲಿ ಹಳೆಗನ್ನಡ ಕಾವ್ಯ ಸೊಬಗು ವಿಷಯದ ಬಗ್ಗೆ ವಿಶ್ರಾಂತ ಪ್ರಾಂಶುಪಾಲ ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಯಶೋಧರ ಚರಿತ್ರೆ, ಪ್ರಣಯ ಕಾವ್ಯ ಎಂದು ಪ್ರಸಿದ್ಧಿ ಪಡೆದಿದ್ದರೂ ಅದು ಸಂಪೂರ್ಣ ಧಾರ್ಮಿಕ ಕಾವ್ಯ ಎಂದರು.ಸಾಹಿತ್ಯ ಸಂಸ್ಕೃತಿ ಗೋಷ್ಠಿಯಲ್ಲಿ ಸಾಂಸ್ಕೃತಿಕ ಹಿರಿಮೆ ಎನ್ನುವ ವಿಷಯದ ಬಗ್ಗೆ ಖ್ಯಾತ ವಾಗ್ಮಿ ಹಾಗೂ ರಾಷ್ಟ್ರೀಯ ತರಬೆತುದಾರ ಕೆ.ರಾಜೇಂದ್ರ ಭಟ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಕಾರ್ಕಳ ಕೊಟ್ಟ ಕೊಡುಗೆ ಅಪಾರ. ನಮ್ಮ ತಾಲೂಕಿನ ಹಿರಿಮೆ ಗರಿಮೆಯ ಬಗ್ಗೆ ಮಕ್ಕಳಿಗೆ ತಿಳಿಯಬೇಕಾಗಿದೆ ಎಂದ ಅವರು, ಕಾರ್ಕಳದ ಸಾಹಿತ್ಯದ ಹಿರಿಮೆ ಹಾಗೂ ಸಾಧಕರ ಬಗ್ಗೆ ಮಾಹಿತಿ ನೀಡಿದರು.ಸಾಹಿತ್ಯ ಮಂಥನಾ ಗೋಷ್ಠಿಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಕಾಮತ್, ವಲಯ ಅರಣ್ಯಾಧಿಕಾರಿ ಶಶಿಧರ್ ಗೌಡ, ತೋಟಗಾರಿಕೆ ಇಲಾಖೆ ಶ್ರೀನಿವಾಸ ಬಿ.ವಿ., ಶಿಕ್ಷಕ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಯುವ ಸಾಹಿತಿ ರಾಜೇಶ್ ಕುಮಾರ್ ಕಲ್ಯಾ, ಬಸ್ ಏಜೆಂಟರ ಬಳಗ ಕಾರ್ಕಳದ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಭಾಗವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲೆ ಹಾಗೂ ಸಾಂಸ್ಕೃತಿಕ ಚಿಂತಕರಾದ ಮಿತ್ರಪ್ರಭಾ ಹೆಗ್ಡೆ ಸಮನ್ವಯಕಾರರಾಗಿ ಭಾಗವಹಿಸಿ ಮಾತನಾಡಿದರು.ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಕೆ.ಗುಣಪಾಲ ಕಡಂಬ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು. ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

----------------------

ಸಾಹಿತ್ಯ, ಸಂಸ್ಕೃತಿ ನಡುವೆ ಅವಿನಾಭಾವ ಸಂಬಂಧ: ಸುನಿಲ್‌ ಕುಮಾರ್‌ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭಸಾಹಿತ್ಯ ಹಾಗೂ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಒಂದನ್ನೊಂದು ಬಿಟ್ಟು ಇರಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಅಭಿರುಚಿ ಶ್ರೀಮಂತವಾಗಿರುವಲ್ಲಿ ಭಾರತೀಯ ಸಂಸ್ಕೃತಿ ಅಡಗಿರುತ್ತದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.

ಅವರು ಕಾರ್ಕಳ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಶಿರ್ಲಾಲು ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ ಮಾತನಾಡಿ, ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಸಾಹಿತ್ಯಿಕವಾಗಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುತ್ತಾ ಸಾಗಿದರೆ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸಮ್ಮೇಳನಾಧ್ಯಕ್ಷ ಕೆ. ಗುಣಪಾಲ ಕಡಂಬ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಶ‌ರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಶೀತಲ್‌ ಕುಮಾರ್ ಜೈನ್, ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ, ಕ್ರಿಯೇಟಿವ್ ಕಾಲೇಜ್ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್., ಎಂಸಿಎಫ್‌ನ ಕೀರ್ತನ್ ಕುಮಾರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ, ಶಾಂತಿ ರಾಜ್ ಜೈನ್ ಉಪಸ್ಥಿತರಿದ್ದರು.

* ಸನ್ಮಾನ ಕಾರ್ಯಕ್ರಮ

ಜನಾರ್ದನ ಇಡ್ಯಾ (ವೈಜ್ಞಾನಿಕ/ಬಾಹ್ಯಾಕಾಶ ಕ್ಷೇತ್ರ), ಧರಣೇಂದ್ರ ಜೈನ್‌ ಶಿರ್ಲಾಲು (ಕೃಷಿ), ಸುಶೀಲಾ ಪಾಣಾರ (ಜಾನಪದ ಕ್ಷೇತ್ರ), ವಿಠಲ ಶೆಟ್ಟಿ (ನಾಟಿವೈದ್ಯ), ಸಿಲ್ವೆಸ್ಟರ್ ಡಿಮೆಲ್ಲೊ (ಸಂಕೀರ್ಣ), ಸಮದ್ ಖಾನ್ (ಸಂಘಟನೆ), ಮೊಹಮ್ಮದ್ ಶರೀಫ್ (ಪತ್ರಿಕಾ ರಂಗ), ರೇಷ್ಮಾ ಗೊರೂರು (ಸಾಹಿತ್ಯ), ಅವಿನಾಶ್ ಜಿ. ಶೆಟ್ಟಿ (ಸಮಾಜಸೇವೆ), ಕ್ರಿಯೇಟಿವ್ ಪುಸ್ತಕ ಮನೆಯ ಅಶ್ವಥ್ ಎಸ್‌.ಎಲ್. ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ಅರುಣ್ ಕುಮಾರ್ ಸ್ವಾಗತಿಸಿದರು. ಸುಧಾಕರ ಪೊಸ್ರಾಲ್ ವಂದಿಸಿದರು.

* ಪುರ ಮೆರವಣಿಗೆ:

ಶಿರ್ಲಾಲು ಭಗವಾನ್ ಅನಂತನಾಥ ಸ್ವಾಮಿ ಬಸದಿಯಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ಲಾಲು ಶಾಖಾ ಪ್ರಬಂಧಕ ಉದಯ ಶಂಕರ್, ಸಮ್ಮೇಳನದ ಪುರಮೆರವಣಿಗೆಗೆ ಚಾಲನೆ ನೀಡಿದರು. ಹುಲಿಕುಣಿತ, ಮಕ್ಕಳ ಬ್ಯಾಂಡ್ ಸೆಟ್, ಕೇರಳ ಚಂಡೆ, ತಟ್ಟಿರಾಯಗಳು, ಕೀಲುಕುದುರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಸಾಥ್ ನೀಡಿದವು. ಸುಮಾರು ಎರಡು ಕಿ.ಮೀ. ಕ್ರಮಿಸಿ ಕಾಲೇಜಿನ ಮೈದಾನವರೆಗೆ ಸಾಗಿಬಂತು.

ಈ ಸಂದರ್ಭ ನಂದಳಿಕೆ ಶ್ರೀಕಾಂತ್ ಭಟ್ ಅವರ ಪಾಂಡು ಕೋಣವನ್ನು ವಿಶೇಷ ಅಲಂಕರಿಸಿ ಸನ್ಮಾನಿಸಲಾಯಿತು.