ಕನ್ನಡಪ್ರಭ ವಾರ್ತೆ ಹಾಸನ

ರೋಟರಿ ಕೇವಲ ಒಂದು ಸೇವಾ ಸಂಸ್ಥೆಯಲ್ಲ, ಮಾನವೀಯ ಮೌಲ್ಯಗಳನ್ನು ಬೆಳೆಸುವ ವಿಶ್ವವ್ಯಾಪಿ ಚಳವಳಿಯಾಗಿದೆ ಎಂದು ರೋಟರಿ ಜಿಲ್ಲೆ 3182ರ 2026-27ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ರೋ. ವಸಂತ್ ಹೊಬ್ಳಿದಾರ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ದೀನರು, ದುರ್ಬಲರು, ನಿರ್ಗತಿಕರು ಹಾಗೂ ಆಶ್ರಯ ರಹಿತರ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ರೋಟೇರಿಯನ್ ಮೇಲಿದೆ. ಸೇವೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ರೋಟರಿಯ ಮೂಲ ಧ್ಯೇಯವಾಗಿದೆ ಎಂದು ಹೇಳಿದರು. ಇಂದಿನ ಸಮಾಜದಲ್ಲಿ ಮನುಷ್ಯರು ಪರಸ್ಪರ ಸಹಬಾಳ್ವೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶಗಳ ಭಿನ್ನತೆಗಳನ್ನು ಮೀರಿ ಮಾನವೀಯತೆಯ ಆಧಾರದ ಮೇಲೆ ಬದುಕುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸದೃಢ ಮತ್ತು ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನದ ಅಧ್ಯಕ್ಷ ಬಿ. ಆರ್‌. ಬೊಮ್ಮೇಗೌಡ ಮಾತನಾಡಿ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಶುದ್ಧ ಕುಡಿಯುವ ನೀರು ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆ ನಿರಂತರ ಸೇವೆ ಸಲ್ಲಿಸುತ್ತಿದೆ. ಈ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಕ್ಲಬ್‌ಗಳು ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಿದೆ ಎಂದು ಹೇಳಿದರು.ನೂತನ ಅಧ್ಯಕ್ಷ ಪರಮೇಶ್ವರ ಮಾತನಾಡಿ, ಕ್ಲಬ್ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮಾಜಮುಖಿ ಸೇವಾ ಯೋಜನೆಗಳನ್ನು ಯಶಸ್ವಿಗೊಳಿಸುವ ಸಂಕಲ್ಪ ಹೊಂದಿದ್ದೇವೆ. ರೋಟರಿಯ ಧ್ಯೇಯಗಳನ್ನು ಜನಸಾಮಾನ್ಯರ ಬದುಕಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಿಯೋಜಿತ ಸಹಾಯಕ ಗವರ್ನರ್ ಮಂಜುನಾಥ್, ವಲಯ ಸೇನಾನಿ ಡಾ. ತೇಜಸ್ವಿ, ಕಾರ್ಯದರ್ಶಿ ಅಶೋಕ್, ನಿಯೋಜಿತ ಕಾರ್ಯದರ್ಶಿ ಚೇತನ್, ಖಜಾಂಚಿ ಯೋಗೇಶ್ ಗೌಡ, ಸ್ವರೂಪ್ ಸೇರಿದಂತೆ ಹಲವು ರೋಟೇರಿಯನ್‌ಗಳು ಉಪಸ್ಥಿತರಿದ್ದರು. ರೋ. ರಮೇಶ್ ಕೆ.ಎಲ್. ಹಾಗೂ ಆನ್ಸ್. ಅನುಪಮ ಕಾರ್ಯಕ್ರಮ ನಿರೂಪಿಸಿದರು.