ಕನ್ನಡಪ್ರಭ ವಾರ್ತೆ ಚಡಚಣ

ಕೌಟುಂಬಿಕ ಕಲಹ ಹಿನ್ನೆಲೆ ಅಕ್ಕ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ನಡೆದಿದೆ.

​ಹಲಸಂಗಿ ಗ್ರಾಮದ ಬಾಬುಸಾ ಮಹಾದೇವ ಜಮಾದಾರ (35) ಹತ್ಯೆಯಾದವ. ಘಟನೆಯಲ್ಲಿ ಅಪ್ಪಾಸಾಹೇಬ ಮುಂಕಾಸೆ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ:

​ಮೃತ ಬಾಬುಸಾಗೆ ಐದು ವರ್ಷಗಳ ಹಿಂದೆ ಅವರ ಅಕ್ಕ ಮಿನಾಕ್ಷಿ ಭತಗುಣಕಿ (ಜಮಾದಾರ) ಮಗಳು ಸತ್ಯವ್ವಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಆದರೆ, ಮದುವೆಯಾದಾಗಿನಿಂದಲೂ ಗಂಡ ಬಾಬುಸಾ ಹಾಗೂ ಪತ್ನಿ ಸತ್ಯವ್ವ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.


​ಶನಿವಾರ ಸಂಜೆ ಬಾಬುಸಾ ಅವರು ಹಲಸಂಗಿ ಕ್ರಾಸ್ ಬಳಿಯ ಅಕ್ಕ ಮಿನಾಕ್ಷಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆರಂಭಾವಾದ ಜಗಳ ತಾರಕಕ್ಕೇರಿದೆ. ಈ ವೇಳೆ ಆಕ್ರೋಶಗೊಂಡ ಅಕ್ಕ ಹಾಗೂ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಬಾಬುಸಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಎಸ್ಪಿ ಸುಲ್ಪಿ, ಸಿಪಿಐ ಪರುಶುರಾಮ ಮನಗೂಳಿ, ಪಿಎಸ್ಐ ಮಂಜುನಾಥ ತಿರಕನ್ನವರ ಭೇಟಿ ನೀಡಿ ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.