ಕನ್ನಡಪ್ರಭ ವಾರ್ತೆ ಚಡಚಣ
ಕೌಟುಂಬಿಕ ಕಲಹ ಹಿನ್ನೆಲೆ ಅಕ್ಕ ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ನಡೆದಿದೆ.ಹಲಸಂಗಿ ಗ್ರಾಮದ ಬಾಬುಸಾ ಮಹಾದೇವ ಜಮಾದಾರ (35) ಹತ್ಯೆಯಾದವ. ಘಟನೆಯಲ್ಲಿ ಅಪ್ಪಾಸಾಹೇಬ ಮುಂಕಾಸೆ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆ:ಮೃತ ಬಾಬುಸಾಗೆ ಐದು ವರ್ಷಗಳ ಹಿಂದೆ ಅವರ ಅಕ್ಕ ಮಿನಾಕ್ಷಿ ಭತಗುಣಕಿ (ಜಮಾದಾರ) ಮಗಳು ಸತ್ಯವ್ವಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಆದರೆ, ಮದುವೆಯಾದಾಗಿನಿಂದಲೂ ಗಂಡ ಬಾಬುಸಾ ಹಾಗೂ ಪತ್ನಿ ಸತ್ಯವ್ವ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಶನಿವಾರ ಸಂಜೆ ಬಾಬುಸಾ ಅವರು ಹಲಸಂಗಿ ಕ್ರಾಸ್ ಬಳಿಯ ಅಕ್ಕ ಮಿನಾಕ್ಷಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆರಂಭಾವಾದ ಜಗಳ ತಾರಕಕ್ಕೇರಿದೆ. ಈ ವೇಳೆ ಆಕ್ರೋಶಗೊಂಡ ಅಕ್ಕ ಹಾಗೂ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಬಾಬುಸಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಎಸ್ಪಿ ಸುಲ್ಪಿ, ಸಿಪಿಐ ಪರುಶುರಾಮ ಮನಗೂಳಿ, ಪಿಎಸ್ಐ ಮಂಜುನಾಥ ತಿರಕನ್ನವರ ಭೇಟಿ ನೀಡಿ ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.