ಮಂಗಳೂರು: ಇತ್ತೀಚೆಗೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವೈದ್ಯರು ಸೇವಾ ನಿರತರಾಗಿದ್ದ ಸಂದರ್ಭದಲ್ಲಿ ಅವರ ಮೇಲೆ ವೈಯಕ್ತಿಕ ಹಲ್ಲೆ, ಚಿಕಿತ್ಸಾಲಯಗಳಿಗೆ ದಾಳಿಯಿಂದ ಹಾನಿ-ನಷ್ಟ ಪ್ರಕರಣಗಳ ವರದಿ ದಾಖಲಾಗುತ್ತಿದ್ದು, ಇದನ್ನು ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಒಗ್ಗಟ್ಟಾಗಿ ಖಂಡಿಸಿ ಪ್ರತಿಭಟಿಸಬೇಕು. ಆರೋಪಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆ ಆಗುವಂತಹ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ, ತುಮಕೂರು ನಗರ ಮೂಲದ ಡಾ.ಟಿ.ಎ.ವೀರಭದ್ರಯ್ಯ ಹೇಳಿದರು.

ಅವರು ಭಾನುವಾರ ಡಾ.ಎ.ವಿ.ರಾವ್‌ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ವಿಶೇಷ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾಜದ ಆರೋಗ್ಯ ನಿರ್ಮಾಣದ ನಿಟ್ಟಿನಲ್ಲಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಸ್ಥೆಯನ್ನು ಬಲಪಡಿಸಬೇಕು. ಇನ್ನಷ್ಟು ವೈದ್ಯಕೀಯ ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಬೇಕು. ಸದಸ್ಯರ ಶೈಕ್ಷಣಿಕ ಅಭಿವೃದ್ಧಿಗೆ ನಿರಂತರ ವೈದ್ಯಕೀಯ ಶಿಕ್ಷಣ ಶಿಬಿರಗಳನ್ನು ಆಯೋಜಿಸಬೇಕು. ಸದಸ್ಯರ ಅಕಾಲಿಕ ಮರಣ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಸಂಘದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸದಸ್ಯರು ಹೆಸರು ನೋಂದಾಯಿಸಬೇಕು ಎಂದರು.

ಅಕ್ಟೋಬರ್ ತಿಂಗಳಲ್ಲಿ ಶಿವಮೊಗ್ಗ ನಗರದಲ್ಲಿ ನಡೆಯುವ ಸಂಸ್ಥೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸಬೇಕು ಎಂದು ಕರೆ ನೀಡಿದರು. ನಗರದ ಉಳ್ಳಾಲ ಪ್ರದೇಶದಲ್ಲಿ ಐಎಂಎ ನೂತನ ಶಾಖೆಯನ್ನು ಆರಂಭಿಸಲು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಡಾ.ಸದಾನಂದ ಪೂಜಾರಿ ನೇತೃತ್ವದಲ್ಲಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಡಾ.ಟಿ.ಎ.ವೀರಭದ್ರಯ್ಯ ಸಂಸ್ಥೆಗೆ ನೀಡಿದ ಅಮೂಲ್ಯ ಕೊಡುಗೆ, ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ, ಅಭಿನಂದಿಸಲಾಯಿತು.


ಕರ್ನಾಟಕ ವೈದ್ಯಕೀಯ ಮಂಡಳಿಯ ರಾಜ್ಯಾಧ್ಯಕ್ಷ ಡಾ.ಯೋಗಾನಂದ ರೆಡ್ಡಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಡಾ.ಮಹೇಶ್, ಸಂಘದ ಉಪಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಐಎಂಎ ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಡಾ.ಜಿ.ಕೆ.ಭಟ್, ಮಾಜಿ ಕಾರ್ಯದರ್ಶಿ ಡಾ. ಅವಿನ್ ಆಳ್ವ, ಚುನಾಯಿತ ಅಧ್ಯಕ್ಷ ಡಾ.ಉಲ್ಲಾಸ್ ಶೆಟ್ಟಿ, ಸಂಸ್ಥೆಯ ಕೋಶಾಧಿಕಾರಿ ಡಾ.ಜೂಲಿಯನ್ ಸಲ್ದಾನಾ ಮತ್ತಿತರರು ಇದ್ದರು.

ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಪ್ರಕಾಶ ಹರೀಶ್ಚಂದ್ರ ವಂದಿಸಿದರು. ಅಕ್ಷತಾ ನಿರೂಪಿಸಿದರು.