ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸೋಲಾದ ನಂತರ ಬಿಜೆಪಿ ನಾಯಕರು ಫುಂಖಾನು ಫುಂಖವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ. ಈ ಮಸೂದೆಗಳ ಬಗ್ಗೆ ಚರ್ಚೆ ಮಾಡಲು ನಾನು ಸಿದ್ದನಿದ್ದೇನೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ ಈ ನಾಲ್ವರು ಚರ್ಚೆಗೆ ಬರಲಿ. ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಂಥಾಹ್ವಾನ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸೋಲಾದ ನಂತರ ಬಿಜೆಪಿ ನಾಯಕರು ಫುಂಖಾನು ಫುಂಖವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ. ಈ ಮಸೂದೆಗಳ ಬಗ್ಗೆ ಚರ್ಚೆ ಮಾಡಲು ನಾನು ಸಿದ್ದನಿದ್ದೇನೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ ಈ ನಾಲ್ವರು ಚರ್ಚೆಗೆ ಬರಲಿ. ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಂಥಾಹ್ವಾನ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಹಿಳಾ ಮೀಸಲಾತಿಯ ಸೋಗಿನಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಲು ಮುಂದಾಗಿದ್ದು, ಸಾವಿರಾರು ವರ್ಷಗಳಿಂದ ಮಹಿಳೆಯರಿಗೆ ಇವರು ಇಂತಹ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದರು.

ಕ್ಷೇತ್ರ ಪುನರ್ ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಒಂದೇ ಮತದಲ್ಲಿ ನಿರ್ಣಯಿಸಿ ಜಾರಿಗೆ ತರಲು ಮುಂದಾಗಿದ್ದರು. ಇದು ಮೂರ್ಖತನದ ಪರಮಾವಧಿ ಆದರೂ ಬಿಜೆಪಿಗರು ಬುದ್ದಿವಂತರಂತೆ ನಡೆದುಕೊಳ್ಳುತ್ತಿದ್ದಾರೆ. ಈ ಕುರಿತಂತೆ ಸಂಸದರು, ಕಾಂಗ್ರೆಸ್ ಮಹಿಳೆಯರಿಗೆ ಅನ್ಯಾಯ ಮಾಡಿದೆ ಎನ್ನುತ್ತಿದ್ದಾರೆ. ಹಾಗಾಗಿ ಎರಡು ಮಸೂದೆಗಳಿಗೆ ಒಂದೇ ಮತವಂತೆ ಹೇಗೆ ವಿಭಾಗವನ್ನು ಮಾಡುತ್ತಾರೆಂದು ಅವರು ತಿಳಿಸಬೇಕು ಎಂದರು.

ಮಹಿಳಾ ಮೀಸಲಾತಿಯನ್ನು ಪ್ರಪ್ರಥಮವಾಗಿ ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ. ನಾವು ಯಾವಾಗಲು ಮಹಿಳೆಯರ ಪರವಾಗಿ ಇದ್ದೇವೆ. ಆದರೆ ಈಗ ಬಿಜೆಪಿ ಅದನ್ನು ನಾವೇ ಸಾಧಿಸಲು ಹೊರಟ್ಟಿದ್ದೇವೆ ಎನ್ನುತ್ತಿದ್ದಾರೆ. ಅಷ್ಟು ಮಹಿಳೆಯ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರಲು ಮತದಾನ ಮಾಡಬೇಕಿತ್ತು. ಇಲ್ಲದಿದ್ದರೆ ಚುನಾವಣೆ ನಂತರ ಚರ್ಚಿಸಬಹುದಿತ್ತು. ಆದರೆ ಅಂತಹ ಯಾವುದೇ ಯೋಚನೆ ಮಾಡದೆ ದುರುದ್ದೇಶದಿಂದ ಜಾರಿ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಯವರ ಈ ಆಲೋಚನೆ ಹಿಂದೆ ಗೋಲ್ವಲ್ಕರ್ ಅವರ ಚಿಂತನಗಂಗಾದ ಉದ್ದೇಶ ಅಡಗಿದೆ ಎಂದು ಕಿಡಿಕಾರಿದರು.

ಅಷ್ಟಕ್ಕೂ ಈ ಮಸೂದೆಯನ್ನು ಮೊನ್ನೆಯೇ ಏಕೆ ಮಂಡಿಸಬೇಕಿತ್ತು. ಪಂಚರಾಜ್ಯಗಳ ಚುನಾವಣೆ ಮುಗಿದ ಮೇಲೆ ಅಥವಾ ಫಲಿತಾಂಶ ಬಂದ ಮೇಲೂ ಮಂಡಿಸಬಹುದಿತ್ತಲ್ಲವೇ ? ಈ ಆತುರ ಯಾಕೆ ? ಬಿಜೆಪಿ ಮುಖಂಡರು ತಾವೇ ಬುದ್ಧಿವಂತರು ಉಳಿದವರೆಲ್ಲಾ ದಡ್ಡರು ಎಂದುಕೊಂಡಿದ್ದಾರೆ. ನಿಧಾನವಾದರೂ ದೇಶದ ಜನರಿಗೆ ಸತ್ಯ ಗೊತ್ತಾಗುತ್ತಿದೆ. ಕಾಂಗ್ರೆಸ್‌ನ ಮೇಲೆ ಗೂಬೆ ಕೂರಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜನರೇ ಅರ್ಥಮಾಡಿಕೊಳ್ಳುತ್ತಾರೆ ಎಂದರು.

ಇಲ್ಲಿನ ಸಂಸದರು, ಶಾಸಕರು ಕೂಡ ಚಿಂತನಗಂಗಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಹಿಂದೂ ಸಮಾಜ ವಿರುದ್ದವಾಗಿ ಇದ್ದಾರೆ. ಚಿಂತನ ಗಂಗಾ ದಲಿತರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳಿದೆ. ಒಕ್ಕೂಟ ವ್ಯವಸ್ಥೆ ವಿರುದ್ದವಾಗಿದೆ. ಇದನ್ನು ಬಿಜೆಪಿ ಒಪ್ಪುತ್ತಾರಾ. 1962ರಲ್ಲಿ ಜನಸಂಘ ಮೀಸಲಾತಿಯನ್ನು ವಿರೋಧಿಸಿದ್ದರು. ಈ ಬಗ್ಗೆ ಚರ್ಚೆ ಮಾಡಲು ಶಾಸಕರು, ಸಂಸದರು ಸಿದ್ದವಾಗಿದ್ದಾರಾ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ಕೆಸ್ತೂರು ಮಂಜುನಾಥ್, ಆದರ್ಶ ಹುಂಚದಕಟ್ಟೆ, ಅಮರನಾಥ್‌ಶೆಟ್ಟಿ ಮತ್ತಿತರರು ಇದ್ದರು.

ಬಿಜೆಪಿಗರಿಂದ ಬೇರೇನು ನಿರೀಕ್ಷಿಸಲು ಸಾಧ್ಯ?

ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಜೆಪಿ ಅವರು ಅವಹೇಳನ ಮಾಡುತ್ತಿರುವುದು ಖಂಡನೀಯವಾಗಿದ್ದು, ಚಿಂತನಗಂಗಾದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಬಿಜೆಪಿಗರಿಂದ ಇದರ ಹೊರತಾಗಿ ಬೇರೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಸೈದ್ದಾಂತಿಕವಾಗಿ ಬಿಜೆಪಿ, ಆರ್‌ಎಸ್‌ಎಸ್ ಅವರು ವಿಷಜಂತು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಇದು ಭಾಗಶಃ ನೂರಕ್ಕೂ ನೂರು ಸತ್ಯ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ಸಿದ್ದಾಂತದ ಬಗ್ಗೆ ಟೀಕೆ ಮಾಡಿದ್ದಾರೆ. ಸೈದ್ದಾಂತಿಕ ದೃಷ್ಟಿಕೋನದಿಂದ ಸರಿಯಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಅವರು ಖರ್ಗೆ ಬಗ್ಗೆ ಅವಹೇಳನ ಮಾತನಾಡುತ್ತಿದ್ದಾರೆ. ಖರ್ಗೆ ಅವರು ಶಾಸಕರಾಗಿ, ಸಂಸದರಾಗಿ, ವಿರೋಧ ಪಕ್ಷದ ನಾಯಕರಾಗಿ ರಾಜಕೀಯದಲ್ಲಿ ಅನೇಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಅದನ್ನು ಗೌರವಿಸದೆ ಮಾತನಾಡುತ್ತಿದ್ದಾರೆ ಎಂದರು.

ಚಿಂತನಗಂಗಾದಲ್ಲಿ ಪುಟ 36 ಮತ್ತು 37ರಲ್ಲಿ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಉಚ್ಛ ಸ್ಥಾನದಿಂದ ಅಂದರೆ ತಲೆಯಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರೀಯ, ತೊಡೆಯಿಂದ ವೈಶ್ಯ ಹುಟ್ಟತ್ತಾನೆ ಎಂದು ಹೇಳುತ್ತದೆ. ಕೆಳಸ್ತರದಲ್ಲಿರುವ ಪಾದದಿಂದ ದಲಿತರು ಹುಟ್ಟುತ್ತಾರೆ ಎಂದು ಹೇಳುತ್ತದೆ. ಈ ನಿಟ್ಟಿನಲ್ಲಿ ಸಾವಿರಾರು ವರ್ಷಗಳಿಂದ ಮನುವಾದಿಗಳಿಂದ ದಲಿತರು ತುಳಿತಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಮೀಸಲಾತಿ ಕುರಿತು ಮಾತನಾಡುವ ನಾರಾಯಣ ಸ್ವಾಮಿ ಅವರು ಮೀಸಲಾತಿ ವಿಚಾರವಾಗಿ ಮಂಡಲ್ ಕಮಿಷ್ ನನ್ನು ಎಬಿವಿಪಿ ವಿರೋಧ ಮಾಡಿದಾಗ ಎಲ್ಲಿ ಹೋಗಿದ್ದರು. ಮೀಸಲಾತಿ ಇಲ್ಲದೆ ಇದ್ದಿದ್ದರೆ ನಾರಾಯಣ ಸ್ವಾಮಿ ಸದನದ ಒಳಗೆ ಹೊಗುತ್ತಿರಲ್ಲಿ ಎಂದು ಟೀಕಿಸಿದರು.