ಕನ್ನಡಪ್ರಭ ವಾರ್ತೆ ಮೈಸೂರು

ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಗುರುವಾರ ಸಾಮೂಹಿಕ ಪ್ರಾರ್ಥನೆ (ನಮಾಜ್) ಮಾಡಿದರು.ತಿಲಕ್‌ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಮೈಸೂರು ಸರ್ಖಾಜಿ ಮಹಮ್ಮದ್ ಉಸ್ಮಾನ್ ಶರೀಫ್ ಅವರ ನೇತೃತ್ವದಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಉದಯಗಿರಿ, ಕಲ್ಯಾಣಗಿರಿ, ರಾಜೀವ್‌ ನಗರ, ಗೌಸಿಯಾನಗರ, ಮಂಡಿ ಮೊಹಲ್ಲಾ, ದೇವರಾಜ ಮೊಹಲ್ಲಾ, ಉಸ್ಮಾನಿಯಾ ಬ್ಲಾಕ್, ಎನ್.ಆರ್. ಮೊಹಲ್ಲಾ, ಕೆಸರೆ, ಹಳೆಕೆಸರೆ ಸೇರಿದಂತೆ ವಿವಿಧ ಬಡಾವಣೆಗಳ ಮುಸಲ್ಮಾನರು ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು, ಸರ್ಖಾಜಿ ವಿಶೇಷ ಸಂದೇಶ ನೀಡುತ್ತಿದ್ದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಈ ಪ್ರಾರ್ಥನೆಯಲ್ಲಿ ಶಾಸಕ ತನ್ವೀರ್‌ ಸೇಠ್, ಮಾಜಿ ಮೇಯರ್ ಗಳು, ನಗರ ಪಾಲಿಕೆ ಮಾಜಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಹಲವು ಗಣ್ಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳವರು ಹೆಚ್ಚು ಕುರಿಗಳನ್ನು ಕತ್ತರಿಸಿ, ಮೂರು ಭಾಗವನ್ನಾಗಿ ಮಾಡಿ ಒಂದು ಭಾಗವನ್ನು ತಾವೇ ಇಟ್ಟುಕೊಂಡು, ಮತ್ತೊಂದು ಭಾಗ ನೆಂಟರು, ಸಂಬಂಧಿಕರಿಗೆ ಕೊಟ್ಟು ಮತ್ತೊಂದು ಭಾಗವನ್ನು ಬಡವರಿಗೆ ದಾನ ನೀಡಿದರು. ಇನ್ನೂ ಕೆಲವರು ಅತಿ ಹೆಚ್ಚು ಬಡವರು ಇರುವ ಕಡೆಗಳಿಗೆ ತೆರಳಿ ದಾನ ಮಾಡಿ ಬಕ್ರೀದ್ ಹಬ್ಬವನ್ನು ಆಚರಿಸಿದರು.ಬಕ್ರೀದ್ ಆಚರಣೆ ಹಿನ್ನೆಲೆ ಈದ್ಗಾ ಮೈದಾನ ಸುತ್ತಾಮುತ್ತಾ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.