ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗುರುವಾರ ಮುಸಲ್ಮಾನ ಸಮುದಾಯ ಬಕ್ರೀದ್‌ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿತು. ಇಲ್ಲಿನ ಶಾಂತಿನಗರದ ಈದ್ಗಾ ಮತ್ತು ದರ್ಗಾಜೋಗಿಹಳ್ಳಿ-ಶಾಂತಿನಗರ 7ನೇ ಕ್ರಾಸ್‌ನಲ್ಲಿರುವ ಪ್ರಾರ್ಥನಾ ಸ್ಥಳಗಳಲ್ಲಿ ಸಹಸ್ರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗುರುವಾರ ಮುಸಲ್ಮಾನ ಸಮುದಾಯ ಬಕ್ರೀದ್‌ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿತು. ಇಲ್ಲಿನ ಶಾಂತಿನಗರದ ಈದ್ಗಾ ಮತ್ತು ದರ್ಗಾಜೋಗಿಹಳ್ಳಿ-ಶಾಂತಿನಗರ 7ನೇ ಕ್ರಾಸ್‌ನಲ್ಲಿರುವ ಪ್ರಾರ್ಥನಾ ಸ್ಥಳಗಳಲ್ಲಿ ಸಹಸ್ರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಮೌಲ್ವಿಗಳಿಂದ ಧರ್ಮೋಪದೇಶ ನಡೆಯಿತು. ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಅರ್ಪಿಸಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ರಂಜಾನ್‌ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಂಜಾನ್‌ ಸಂದರ್ಭದಲ್ಲಿ ಮುಸ್ಲಿಮರು ಇಡೀ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್-ಉಲ್-ಫಿತರ್ ಹಬ್ಬದ ಮೂಲಕ ಭಾವೈಕ್ಯ ಮೆರೆಯುತ್ತಾರೆ. ಆದರೆ, ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್‌ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ. ಅಲ್ಲದೇ, ಹಬ್ಬದ ದಿನದಂದು ಶಕ್ತ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಬಲಿ ಕೊಡುವುದು ಹಾಗೂ ಅದರ ಪಾಲನ್ನು ಬಂಧುಬಾಂಧವರು ಹಾಗೂ ನೆರೆಹೊರೆಯವರಿಗೆ ಸಮಾನವಾಗಿ ಹಂಚುವ ಸಂಪ್ರದಾಯ ಬೆಳೆದು ಬಂದಿದೆ.

ದೊಡ್ಡಬಳ್ಳಾಪುರ ನಗರದ ವಿವಿಧ ಈದ್ಗಾ ಮತ್ತು ದರ್ಗಾಗಳು, ತೂಬಗೆರೆ, ದೊಡ್ಡಬೆಳವಂಗಲ ಸೇರಿದಂತೆ ವಿವಿಧ ಹೋಬಳಿ ಕೇಂದ್ರಗಳು ಮತ್ತು ಗ್ರಾಮಗಳಲ್ಲೂ ಬಕ್ರೀದ್‌ ಸಾಮೂಹಿಕ ಪ್ರಾರ್ಥನೆಗಳು ನಡೆದವು.

ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಜನರು, ಸ್ನೇಹ ಸೌಹಾರ್ದತೆಯ ಸಂದೇಶವನ್ನು ಸಾರಿದರು.

28ಕೆಡಿಬಿಪಿ1- ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿರುವ ಈದ್ಗಾದಲ್ಲಿ ಬಕ್ರೀದ್‌ ಹಬ್ಬದ ಪ್ರಯುಕ್ತ ಮುಸಲ್ಮಾನ ಸಮುದಾಯದ ಸಾಮೂಹಿಕ ಪ್ರಾರ್ಥನೆ ನಡೆಯಿತು.

--

28ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಬಕ್ರೀದ್‌ ಸಂಭ್ರಮಕ್ಕೆ ಸಾಕ್ಷಿಯಾದ ಪುಟಾಣಿ ಮಕ್ಕಳು ಮತ್ತು ಕುರಿ.