ಕನ್ನಡಪ್ರಭ ವಾರ್ತೆ, ತುಮಕೂರುಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾ ಶಾಖೆ ಹಾಗೂ ವಿವಿಧ ತಾಲೂಕುಗಳ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕನ್ನಡ ಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಜಿ.ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ರಾಜ್ಯದಲ್ಲಿರುವ 5.30 ಲಕ್ಷ ಸರಕಾರಿ ನೌಕರರಲ್ಲಿ 1.65 ಲಕ್ಷ ಶಿಕ್ಷಕರೇ ಇದ್ದಾರೆ. ಹಾಗಾಗಿ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಹುದೊಡ್ಡ ಸಂಘಟನೆಯಾಗಿದೆ. ತುಮಕೂರು ಜಿಲ್ಲಾ ಘಟಕಕ್ಕೆಎಲ್ಲಾ 26 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಜಿಲ್ಲಾ ಸಂಘಕ್ಕೂ ಪ್ರಧಾನ ಕಾರ್ಯದರ್ಶಿ ಅವರನ್ನು ಹೊರತು ಪಡಿಸಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವುದು ನಿಜಕ್ಕೂ ಮೆಚ್ಚುವಂತದ್ದು, ಅವಿರೋಧ ಆಯ್ಕೆ ಸಂಘದಲ್ಲಿ ಒಗ್ಗಟ್ಟು ಕಾಯ್ದುಕೊಂಡು ಹೋಗಲು ಸಹಕಾರಿಯಾಗಲಿದೆ ಎಂದರು.ನಮ್ಮ ರಾಜ್ಯಾಧ್ಯಕ್ಷರ ಸತತ ಪರಿಶ್ರಮದ ಫಲವಾಗಿ ನೌಕರರ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಎನ್.ಪಿ.ಎಸ್ ಬದಲಿಗೆ ಒಪಿಎಸ್ ಮತ್ತು ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕೆಲ ಆಸ್ಪತ್ರೆಗಳ ಸೇರ್ಪಡೆ ಸಂಬಂಧ ಸರಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸವಿದೆ.ಅಲ್ಲದೆ ಜಿಪಿಟಿ ಶಿಕ್ಷಕರಿಗೆ ಬಡ್ತಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲ ಕಾಲಕ್ಕೆ ಶಿಕ್ಷಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸಲು ಸಂಘ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ರಮೇಶ್ ನುಡಿದರು.ನಾನು ಓರ್ವ ಶಿಕ್ಷಕನಾಗಿ, ಜಿಲ್ಲಾ ಮಟ್ಟದಲ್ಲಿ ಗುರುಭವನ ಕಾಮಗಾರಿ ನೆನೆಗುದಿಗೆ ಬಿದ್ದಿರುವುದು ಒಳ್ಳೆಯದಲ್ಲ. ನೂತನ ಪದಾಧಿಕಾರಿಗಳು ಶಿಕ್ಷಕ ಕಲ್ಯಾಣ ನಿಧಿಯಿಂದ ನೀಡುವ 5 ಕೋಟಿ ರುಗಳ ಅನುದಾನವನ್ನು ಬಳಕೆ ಮಾಡಿಕೊಂಡು ಸುಸಜ್ಜಿತ ಗುರಭವನವನ್ನು ನಿರ್ಮಾಣ ಮಾಡುವತ್ತ ಗಮನಹರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಪಿ.ಜಿ.ತಿಮ್ಮೇಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಶಿಕ್ಷಕರ ಭವನ ನಿರ್ಮಾಣ ಕುರಿತು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪರಮೇಶ್.ಆರ್, ಇಡೀ ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸ ಪದ್ದತಿಗೆ ನಾಂದಿ ಹಾಡಿದೆ. ಇದು ಸಂಘಟನೆಗೆ ಬಹಳ ಪೂರಕವಾಗಿದೆ ಎಂದರು. ನಾಗರಾಜು, ಷಣ್ಮುಗಪ್ಪ, ಉಮೇಶ್, ತಾತಯ್ಯ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮರುಳಸಿದ್ದಯ್ಯ, ಖಜಾಂಚಿ ಮೋಹನಕುಮಾರ್, ಕೋಮಲ, ವಿಜಯಕುಮಾರ್, ಮೋಹನಕುಮಾರ್, ಸಂಗೀತ, ಎಂ.ಟಿ.ಭವ್ಯ, ಮಹೇಶ್, ಈಶ್ವರಯ್ಯ, ಬಸವರಾಜು, ಶ್ರೀನಿವಾಸ್, ಉಮೇಶ್,ಸವಿತಾ, ಮಂಗಳ ಗೌರಮ್ಮ, ನಂದಿನಿ, ಶಾಂತಕುಮಾರಿ,ಹರೀಶ್., ಕುಣಿಗಲ್‌ ರವಿಕುಮಾರ್. ಹನುಮಂತರಾಯಪ್ಪ, ಜಿಪಿಟಿ ಪ್ರವೀಣಕುಮಾರ್, ಜಯಲಕ್ಷ್ಮಮ್ಮ ಇದ್ದರು.