ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಹೈಕಮಾಂಡ್ ಪಡೆಯಬಾರದು ಎಂದು ಆಗ್ರಹಿಸಿ ಕುರುಬ ಸಮುದಾಯದ ಮುಖಂಡರು ನಗರದ ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ಕುರುಬ ಸಮುದಾಯದ ನೂರಾರು ಮಂದಿ ಮುಖಂಡರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆ ಪಡೆಯಬಾರದು ಎಂದು ಘೋಷಣೆಗಳನ್ನು ಕೂಗಿದರು. ದೇಶದ ತುಂಬೆಲ್ಲಾ ಕಳ್ಳಕಾಕರು ಆಡಳಿತ ನಡೆಸುತ್ತಿದ್ದಾರೆ. ನಿಮ್ಮಂತಹ ಸಜ್ಜನ ರಾಜಕಾರಣಿ ರಾಜೀನಾಮೆ ನೀಡುತ್ತಿರುವುದು ವ್ಯವಸ್ಥೆಗೆ ಮಾಡುತ್ತಿರುವ ಅಪಮಾನ ಎಂದು ಕುರುಬ ಸಮುದಾಯದ ಮುಖಂಡರು ಆಕ್ರೋಶ ಹೊರ ಹಾಕಿದರು.ಯಾವ ಕಾರಣಕ್ಕಾಗಿ ರಾಜೀನಾಮೆ ಪಡೆಯುತ್ತಿದ್ದಾರೆ, ಯಾವುದೇ ಕಾರಣವಿರಲಿ ನಿಮ್ಮೊಂದಿಗೆ ಸದಾ ನಾವು ನಿಲ್ಲುತ್ತೇವೆ ಎಂಬ ಭಿತ್ತ ಪತ್ರಗಳನ್ನು ಹಿಡಿದು ಕೈ ಹೈಕಮಾಂಡ್ ನಿರ್ಧಾರದ ವಿರುದ್ಧ ಪ್ರತಿಭಟಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್. ಸುರೇಶ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನು ಏಕಾಏಕಿ ರಾಜೀನಾಮೆ ಕೇಳಿ ಅಪಮಾನ ಮಾಡಿದ್ದಾರೆ. ಇದು ಅಹಿಂದ ಸಮುದಾಯಕ್ಕೆ ತುಂಬಾ ನೋವಾಗಿದೆ. ದಯವಿಟ್ಟು ರಾಜೀನಾಮೆ ಕೊಡಬೇಡಿ, ಮುಂದೆ ಏನಾಗುತ್ತದೆ ನೋಡೋಣ. ಮುಂದೆ ನಾವು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟು ಬೀಳುತ್ತದೆ. ೨೦೨೩ರಲ್ಲಿ ಅಹಿಂದ ಸಮುದಾಯದ ಮತ ನೀಡಿದ್ದರಿಂದಲೇ ೧೩೬ ಸೀಟು ಬಂದು ಸರ್ಕಾರ ರಚಿಸಲು ಸಾಧ್ಯವಾಯಿತು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರಾದ ಮಲ್ಲಿಕಾರ್ಜುನ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ತಪ್ಪು ನಿರ್ಧಾರ ಕೈಗೊಂಡಿರುವುದು ಖಂಡನೀಯ. ಸಿದ್ದರಾಮಯ್ಯನವರಲ್ಲಿ ಯಾವುದೇ ದೋಷ ಇರಲಿಲ್ಲ. ಇಂಥ ನಾಯಕನನ್ನು ಕಾಂಗ್ರೆಸ್ ಪಕ್ಷ ಕಳೆದುಕೊಳ್ಳುತ್ತಿದೆ ಎಂದರೆ ತುಂಬಾ ನೋವಿನ ಸಂಗತಿ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತುಂಬಾ ಹೊಡೆತ ಬೀಳಲಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಸುರೇಶ್, ಉಪಾಧ್ಯಕ್ಷ ಎಂ.ಬಿ. ಕುಮಾರಸ್ವಾಮಿ, ಪ್ರಧಾನಕ ಕಾರ್ಯದರ್ಶಿ ಮಲ್ಲಿಕಾರ್ಜುನ್, ತಿಪಟೂರು ಸಂಘದ ಚಂದ್ರೇಗೌಡ, ತುರುವೇಕೆರೆ ಲಿಂಗರಾಜು, ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕ ರೇವಣ್ಣ, ರಘು, ಟಿ.ಇ. ರಘುರಾಮ್ ಸೇರಿದಂತೆ ನೂರಾರು ಮಂದು ಪಾಲ್ಗೊಂಡಿದ್ದರು.