ಹಾನಗಲ್ಲ: ಬದುಕು ರೂಪಿಸಿಕೊಳ್ಳುವ ಶೈಕ್ಷಣಿಕ ಅವಧಿಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿಕೊಂಡರೆ ಉತ್ತಮ ಯಶಸ್ಸು ಕಾಣಲು ಸಾಧ್ಯವಲ್ಲದೆ, ಇದಕ್ಕೆ ಪರಿಶ್ರಮ ಬಲು ಮುಖ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ.ಎನ್.ಕೆ.ಪವಾರ ತಿಳಿಸಿದರು.ಮಂಗಳವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಕಾಲೇಜು ವಲಯ ಮಟ್ಟದ ಯುವಜನೋತ್ಸವ ೨೪-೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾದವುಗಳು. ಆದರೆ ಅದರ ನಿಜವಾದ ಅರಿವು ಪಡೆದಿರಬೇಕು. ಶೈಕ್ಷಣಿಕ ಅವಧಿ ಪ್ರೇರಣಾದಾಯಕವಾಗಿರಬೇಕು. ಅದು ಸಂಸ್ಕಾರಯುತವಾಗಿಯೂ ಇರಬೇಕು. ನಮ್ಮ ದೇಶ ಸಂಸ್ಕೃತಿಯನ್ನು ಪ್ರೀತಿಸುವ ಮನಸ್ಸು ನಮ್ಮದಾಗಿರಬೇಕು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಅದರ ಸಾರ್ಥಕತೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವುದರಲ್ಲಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ನಮ್ಮ ದೇಶದ ಕಲೆ ಸಂಸ್ಕೃತಿಯ ಉಳಿವು ಯುವಕರ ಕೈಯಲ್ಲಿದೆ. ಎಲ್ಲ ಕಾಲದಲ್ಲಿಯೂ ಪ್ರತಿಭೆಗಳಿರುತ್ತವೆ. ಆ ಎಲ್ಲ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡುವ ಮೂಲಕ ಅವನ್ನು ಬೆಳೆಸುವ ಸಂಕಲ್ಪ ಬೇಕಾಗಿದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ನಮ್ಮ ಪ್ರದರ್ಶನ ಪ್ರತಿಭೆಯ ಅಭಿವ್ಯಕ್ತ ಬಹು ಮುಖ್ಯ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಪಿ.ವಾಯ್.ಗುಡಗುಡಿ, ಸ್ಪರ್ಧೆಗಳು ಸೌಹಾರ್ದಯುತವಾಗಿರಲಿ. ನಮ್ಮ ಸರ್ವಾಂಗೀಣ ಅಭಿವೃದ್ಧಿಗಾಗಿ ಆಟ ಪಾಠಗಳೆರಡೂ ಮುಖ್ಯ. ಶಾರೀರಿಕ ಬೌದ್ಧಿಕ ವಿಕಾಸದತ್ತ ನಮ್ಮ ಚಿತ್ತವಿರಲಿ. ಪ್ರತಿಭೆ ಪ್ರಸಿದ್ಧಿಯ ಜೊತೆಗೆ ಜೀವನ ಯಶಸ್ಸನ್ನು ತಂದುಕೊಂಡಬಲ್ಲದು ಎಂದರು.ಪ್ರಾಚಾರ್ಯ ಡಾ.ಎಂ.ಎಚ್.ಹೊಳೆಯಣ್ಣನವರ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ರೇಖಾ ಶೆಟ್ಟರ, ಹುನುಮಂತಪ್ಪ ಮಲಗುಂದ, ದುಶ್ಯಂತ ನಾಗಜ್ಜನವರ, ಸುರೇಶ ರಾಯ್ಕರ, ಕಾರ್ಯದರ್ಶಿ ಮನೋಹರ ಬಳಿಗಾರ, ಕವಿವಿಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಕೆ. ಸಂತೋಷ, ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಪ್ರಕಾಶ ಹೊಳೇರ, ಯುವಜನೋತ್ಸವ ಸಂಯೋಜಕ ಅಶೋಕ ಪಾಗದ, ಸಹ ಸಂಯೋಜಕ ಮಹಮ್ಮದ್ಸಾದಿಕ್ ಬಡಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ರೂಪಾ ಚನ್ನಗೌಡರ ಪ್ರಾರ್ಥನೆ ಹಾಡಿದರು. ಭಾಗ್ಯಶ್ರೀ ಬಣಕಾರ ಸಂಗಡಿಗರು ನಾಡಗೀತೆ ಹಾಡಿದರು. ಪ್ರೊ.ಅಶೋಕ ಪಾಗದ ಸ್ವಾಗತಿಸಿದರು. ಡಾ. ಪ್ರಕಾಶ ಹೊಳೇರ ಪ್ರಾಸ್ತಾವಿಕ ಮಾತನಾಡಿದರು. ಸುಶೀಲಾ ಬಡಿಗೇರ, ಎನ್.ಜಿ. ಸುಷ್ಮಾ ನಿರೂಪಿಸಿದರು. ಮಹಮದ್ಸಾದಿಕ್ ಬಡಗಿ ವಂದಿಸಿದರು.
ಪಠ್ಯೇತರ ಚಟುವಟಿಕೆ ರೂಢಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ-ಪ್ರೊ. ಪವಾರ
ಬದುಕು ರೂಪಿಸಿಕೊಳ್ಳುವ ಶೈಕ್ಷಣಿಕ ಅವಧಿಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿಕೊಂಡರೆ ಉತ್ತಮ ಯಶಸ್ಸು ಕಾಣಲು ಸಾಧ್ಯವಲ್ಲದೆ, ಇದಕ್ಕೆ ಪರಿಶ್ರಮ ಬಲು ಮುಖ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ.ಎನ್.ಕೆ. ಪವಾರ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.