ಮುಳಗುಂದ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಗುಂದ ಗ್ರಾಮದಲ್ಲಿ ಅಕ್ರಮ ಅಕ್ಕಿ ದಂಧೆ ರಾಜಾರೋಷವಾಗಿ ನಡೆದಿದೆ. ಕಳೆದೆರಡು ತಿಂಗಳ ಹಿಂದೆ ಪಟ್ಟಣದಲ್ಲಿ ಪ್ರಕರಣವೊಂದನ್ನು ಭೇದಿಸಿರುವುದು ಇನ್ನು ಹಸಿರಾಗಿರುವಾಗಲೇ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ದಂಧೆಕೋರರು ಪಡಿತರ ಅಕ್ಕಿಯನ್ನು ತುಂಬಿಸಿಕೊಂಡು ನೀಲಗುಂದ, ಮಲ್ಲಿಗವಾಡ ರಸ್ತೆ ಮಾರ್ಗವಾಗಿ ಅಣ್ಣಿಗೇರಿ, ಹುಬ್ಬಳ್ಳಿಗೆ ರಾಜಾರೋಷವಾಗಿ ಕಳ್ಳ ಸಾಗಾಣೆ ಮಾಡುತ್ತಿರುವದು ಕಂಡು ಬಂದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಸಾರ್ವಜನಿಕರಿಗೆ ಆವಾಜ್ ಹಾಕಿದ ಘಟನೆ ನಡೆದಿದೆ.
ಸರ್ಕಾರ ಬಡ, ಮದ್ಯಮ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯೂ ದಂಧೆಕೋರರ, ಮಧ್ಯವರ್ತಿಗಳ ಪಾಲಾಗುತ್ತಿದ್ದು, ಅಧಿಕಾರಿಗಳು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತ್ತಿದ್ದಾರೆ.ಯಾರ ಭಯವೂ ಇಲ್ಲ
ಗ್ರಾಮೀಣ ಭಾಗದಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ಹೆಚ್ಚಾಗಿದ್ದು, ಕಡಿಮೆ ಬೆಲೆಗೆ ಮನೆ ಮನೆಗೆ ತೆರಳಿ ಅಕ್ಕಿಯನ್ನು ಖರೀದಿಸಿ, ಹೆಚ್ಚಿನ ಲಾಭಾಂಶಕ್ಕೆ ಮಾರಾಟ ಮಾಡುತ್ತಾರೆ. ಯಾರ ಭಯವೂ ಇಲ್ಲದೇ ಪ್ಯಾಸೆಂಜರ್ ಆಟೋದಲ್ಲಿ 10-15 ಕ್ವಿಂಟಲ್ ಅಕ್ಕಿಯನ್ನು ತುಂಬಿಸಿಕೊಂಡು ರಾಜಾರೋಷವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಕೊಡುತ್ತೇವೆ. ಯಾರಿಗ್ಯಾಕೆ ಹೆದರಬೇಕು ಎನ್ನುತ್ತಾರೆ. ಯಾರು ಏನೂ ಮಾಡಲು ಆಗುವುದಿಲ್ಲ ಎನ್ನುತ್ತಾರೆ. ಅಧಿಕಾರಿಗಳೇ ಇಂತಹ ದಂಧೆಕೋರರ ರಕ್ಷಣೆಗೆ ನಿಂತಾಗ ಸರ್ಕಾರದ ಯೋಜನೆಗಳ ಗುರಿ ದಾರಿ ತಪ್ಪುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಕ್ಕಿ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಗ್ರಾಮದಲ್ಲಿ ಈ ಅಕ್ರಮ ಪಡಿತರ ದಂಧೆ ಹಲವು ವರ್ಷಗಳಿಂದ ನಡೆದಿದ್ದು, ನಗರಗಳಿಂದ ಗ್ರಾಮೀಣ ಭಾಗಕ್ಕೆ ಕಡಿಮೆ ಬೆಲೆಗೆ ಅಕ್ಕಿ ತುಂಬಿಸಿಕೊಳ್ಳುವ ಅಕ್ರಮ ದಂಧೆ ನಡೆಯುತ್ತಿದೆ. ಆದರೆ, ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರವಿ ವಗ್ಗನವರ ಹೇಳಿದರು.
ಕಳೆದ ವಾರ ಗದಗಿಗೆ ವರ್ಗಾವಣೆಯಾಗಿ ಬಂದಿದ್ದು, ಪಡಿತರ ಅಕ್ಕಿ ಬಗ್ಗೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ಕೊಟ್ಟಿದ್ದೇನೆ ಬೆಳಧಡಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಸಾಗಾಟ ಸಂದರ್ಭದಲ್ಲಿ ಯಾರಾದರೂ ಮಾಹಿತಿ ನೀಡಿದರೆ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಎಸ್.ಡಿ. ಪಾಟೀಲ ತಿಳಿಸಿದ್ದಾರೆ.