ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ
ವಿದ್ಯಾರ್ಥಿಗಳು ಸ್ಪಷ್ಟ ಗುರಿಯನ್ನು ಹೊಂದಿ ಶಿಸ್ತು ಹಾಗೂ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲು ಸಾಧ್ಯ ಎಂದು ದೊಡ್ಡ ಕವಲಂದೆ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕ ಎಚ್.ಎನ್. ಯೋಗೀಶ್ ಹೇಳಿದರು.ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜಕ್ಕೆ, ತಂದೆ ತಾಯಿಗಳಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು ಎಂದರು.
ತಮ್ಮ ಪೋಷಕರ ಶ್ರಮವನ್ನು ಅರ್ಥ ಮಾಡಿಕೊಂಡು ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅಪಾರ ನಿರೀಕ್ಷಿ ಹೊಂದಿರುತ್ತಾರೆ. ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಶಿಕ್ಷಣ ಪಡೆಯುವ ಅವಧಿ ಅತ್ಯಂತ ಅಮೂಲ್ಯವಾಗಿದ್ದು ಅನಗತ್ಯ ಆಕರ್ಷಣಗಳಿಗೆ ಒಳಗಾಗದೆ ಗುರಿಯತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.ಹೆಮ್ಮರಗಾಲ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಲೋಕೇಶ್ ಮಾತನಾಡಿ, ಸಮಯ ಮೌಲ್ಯ ಅರಿತು ಶಿಸ್ತು ಬದ್ಧವಾಗಿ ಅಧ್ಯಯನ ಮಾಡಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಚ್.ಎಂ. ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ವ್ಯಾಸಂಗ ಮಾಡಿ ತಾವು ಓದಿದ ಕಾಲೇಜಿಗೆ ಹಾಗೂ ನಿಮ್ಮನ್ನು ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರು ತನ್ನಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಮಾತನಾಡಿ ಕಳೆದ ವರ್ಷ ಈ ಕಾಲೇಜಿಗೆ ತಾಲೂಕಿನಲ್ಲೇ ಅತಿ ಹೆಚ್ಚು ಫಲಿತಾಂಶವನ್ನು ನಮ್ಮ ಕಾಲೇಜು ಪಡೆದುಕೊಂಡಿದ್ದು ಈ ವರ್ಷವೂ ಶೇಕಡ ನೂರರಷ್ಟು ಫಲಿತಾಂಶವನ್ನು ಪಡೆಯಲು ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ನೀಡಬೇಕೆಂದು ಕರೆ ನೀಡಿದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಂಜನಗೂಡು ಅನುರಾಗ ಮಕ್ಕಳ ಮನೆ ಸಂಸ್ಥೆಯ ಸೋಮಶೇಖರ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.ಉಪನ್ಯಾಸಕರಾದ ಎಚ್. ವಿನಿಶ್, ಶ್ರೀಧರ್, ನಾಗರತ್ನ, ಸುರೇಶ್, ಮನು, ಪ್ರೇಮಮ್ಮ, ಸುಶೀಲ ಹಾಗೂ ಲಕ್ಷ್ಮಿ ಮೊದಲಾದವರು ಇದ್ದರು.