ಕೆರೆಗೆ ನೀರನ್ನು ಬಿಡಲು ಪೈಪ್ ಲೈನ್ ಒಡೆದು ಹೋಗಿತ್ತು. ಹೊಸದಾಗಿ ಪೈಪ್ ಲೈನ್ ಮಾಡಲು ಟೆಂಡರ್ ಆಗಿದ್ದು
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿ ಪ್ರಯತ್ನ ಮಾಡುತ್ತಿದ್ದು, ಪ್ರತಿಯೊಂದು ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ಭರವಸೆ ನೀಡಿದರು.ಮೈಸೂರು ತಾಲೂಕಿನ ಕೆಲ್ಲಹಳ್ಳಿ, ಗುಜ್ಜೇಗೌಡನಪುರ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ 1 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ, ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲ್ಲಹಳ್ಳಿ ಗ್ರಾಮದಲ್ಲಿ ಈಗಾಗಲೆ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಬಾಕಿ ಇರುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು.
ಕೆರೆಗೆ ನೀರನ್ನು ಬಿಡಲು ಪೈಪ್ ಲೈನ್ ಒಡೆದು ಹೋಗಿತ್ತು. ಹೊಸದಾಗಿ ಪೈಪ್ ಲೈನ್ ಮಾಡಲು ಟೆಂಡರ್ ಆಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭ ಮಾಡಿ ಶೀಘ್ರವಾಗಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ನಂತರ ಗುಜ್ಜೇಗೌಡನಪುರ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರಲ್ಲದೆ, ಗುಜ್ಜೇಗೌಡನಪುರ ಗ್ರಾಮದಲ್ಲಿ ಇನ್ನು ಮೂರು ರಸ್ತೆಗಳು ಮಾತ್ರ ಬಾಕಿದ್ದು, ಈ ರಸ್ತೆಗಳನ್ನು ಈ ಅನುದಾನದಲ್ಲಿ ಕೈಗೊಳ್ಳುತ್ತಿದ್ದು, ಗುಜ್ಜೇಗೌಡನಪುರವು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ ಎಂದು ಅವರು ತಿಳಿಸಿದರು.
ನಂತರ ಮದ್ದೂರು ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ, 50 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಕ್ಷೇತ್ರದಲ್ಲಿ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಪುನರ್ ನಿರ್ಮಾಣ ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಸಾಕಷ್ಟು ಅರ್ಜಿಗಳು ಬರುತ್ತಿವೆ. ಶಾಸಕರ ನಿಧಿಯಿಂದ ಬರುವ ಅನುದಾನವನ್ನು ಹಂಚಿಕೆ ಮಾಡುವ ಜೊತೆಗೆ, ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡುತ್ತೇನೆ ಎಂದರು.ಮುಖಂಡರಾದ ಜಯಪುರ ಜವರನಾಯಕ, ದಾರಿಪುರ ಬಸವಣ್ಣ, ಮುತಾಲಿಕ್, ಶ್ರೀಕಾಂತ್, ರೇಣುಕಾ, ಶಿವರಾಜು, ರಂಗಸ್ವಾಮಿ, ಕೆಲ್ಲಹಳ್ಳಿ ಗ್ರಾಮದ ವಿಜಯ್, ನಾಗರಾಜು, ಭೈರೇಶ್, ಮಂಜು, ನಿಂಗರಾಜು, ಹಾರೋಹಳ್ಳಿ ಮೂರ್ತಿ, ಮಹಾದೇವಪ್ಪ, ಚಂದ್ರ, ಚೆನ್ನಕೇಶವೇಗೌಡ, ಸಿದ್ದರಾಜು, ಶಂಭಯ್ಯ, ಮದ್ದೂರಿನ ಶಿವಣ್ಣ, ಕೆಂಡಗಣ್ಣ, ಹರೀಶ್, ಶ್ರೀಧರ್, ಮಹೇಂದ್ರ, ರಘು, ಗುರುಸ್ವಾಮಿ ಮೊದಲಾದವರು ಇದ್ದರು.