ಕಾರ್ಕಳ: ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ನ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಸಭಾಧ್ಯಕ್ಷತೆಯನ್ನು ಹತ್ತನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಆಚಾರ್ಯ ವಹಿಸಿ ಮಾತನಾಡಿ, ಸಮಾಜದ ಮತ್ತು ಪ್ರತಿಯೊಂದು ಕುಟುಂಬದ ಎಲ್ಲ ಮಕ್ಕಳ ಹಕ್ಕುಗಳನ್ನು ಕಾಪಾಡುವ ಗೌರವಿಸುವ ಹಾಗೂ ಅವರು ಅದನ್ನು ಅನುಭವಿಸುವಂತಾಗಲು ಸರ್ವ ಪ್ರಯತ್ನ ಮಾಡಬೇಕು. ಮಕ್ಕಳ ಹಿತದೃಷ್ಟಿಯಿಂದ ಮಕ್ಕಳ ಸಮಾನತೆ ಸ್ವಾತಂತ್ರ್ಯ ಸ್ವಾಭಿಮಾನ ಗೌಪ್ಯತೆ ಘನತೆಗೆ ಎಲ್ಲಿಯೂ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಈ ಕುರಿತಂತೆ ವಿದ್ಯಾರ್ಥಿಗಳಾದ ನಮ್ಮೆಲ್ಲರ ಜವಾಬ್ದಾರಿಗಳು ಕೂಡ ಹೌದು ಎಂದರು.

ಮುಖ್ಯ ಅತಿಥಿಗಳಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಾದ ವೈಷ್ಣವಿ, ಶಮಂತ್, ಒಂಬತ್ತನೆ ತರಗತಿ ವಿದ್ಯಾರ್ಥಿ ಸ್ವಸ್ತಿಕ್ ಉಪಸ್ಥಿತರಿದ್ದರು. ಒಂಬತ್ತನೆ ತರಗತಿ ವಿದ್ಯಾರ್ಥಿನಿ ಆಫೀಯ ಪ್ರಾಸ್ತಾವಿಕ ಮಾತನಾಡಿದರು. ಹತ್ತನೆ ತರಗತಿ ವಿದ್ಯಾರ್ಥಿನಿ ಧಾರಿಣಿ ಉಪಾಧ್ಯ ಮಕ್ಕಳ ಹಕ್ಕುಗಳ ಅರಿವು ಮೂಡಿಸುವ ಗೀತೆಯನ್ನು ಹಾಡಿದರು. ಶಾಲಾ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ ಅವರು ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು ಕ್ಲಬ್ ನ ಉದ್ದೇಶ ಹಾಗೂ ಅದರ ಅವಶ್ಯಕತೆಯ ಬಗ್ಗೆ ತಿಳಿಸಿದರು.

ವಿದ್ಯಾರ್ಥಿಗಳಾದ ವರ್ಷಿಣಿ ಸ್ವಾಗತಿಸಿದರು. ಶ್ರೇಯಾ ನಿರೂಪಿಸಿದರು. ಪ್ರಜ್ಞಾ ವಂದಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ಹರ್ಷಿಣಿ, ನಿತೀಕ್ಷಾ, ಪೃಥ್ವಿ, ಅಮೂಲ್ಯ, ಮನ್ವಿತಾ ವರ್ಷಿತಾ ಹಾಗೂ ವೀಕ್ಷೀತಾ ಪ್ರಾರ್ಥಿಸಿದರು. ಶಿಕ್ಷಕಿ ಚೇತನಾ ನಾಯಕ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಮಾರ್ಗದರ್ಶನ ಮಾಡಿದರು. ಶಿಕ್ಷಕರು ಉಪಸ್ಥಿತರಿದ್ದರು.