ಕನ್ನಡಪ್ರಭ ವಾರ್ತೆ ಶಿರಾ
ಶ್ರೀ ಕನಕ ಪತ್ತಿನ ಸಹಕಾರ ಸಂಘವು ರೈತರಿಗೆ, ಜನಸಾಮಾನ್ಯರಿಗೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು, ಶಿರಾ ತಾಲೂಕಿನ ಜನರ ಸಹಕಾರದಿಂದ ಉತ್ತಮವಾಗಿ ಬೆಳೆಯುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಕಡೇಮನೆ ಎಸ್ ರವಿಕುಮಾರ್ ಹೇಳಿದರು.ಅವರು ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ೯ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಕನಕ ಪತ್ತಿನ ಸಹಕಾರ ಸಂಘವು ರಾಷ್ಟ್ರೀಕೃತ ಬ್ಯಾಂಕುಗಳಂತೆ ಜನರಿಗೆ ಸೇವೆ ನೀಡುತ್ತಿದೆ. ಕೃಷಿ ಸಾಲ, ಗಿರವಿ ಸಾಲ, ಎಫ್ಡಿ, ಆರ್.ಡಿ, ಗೃಹ ಸಾಲ, ವಾಹನ ಸಾಲ ಸೇರಿದಂತೆ ಇನ್ನೂ ಹಲವು ರೀತಿಯಲ್ಲಿ ಜನಸಾಮಾನ್ಯರಿಗೆ, ರೈತರಿಗೆ ಸಾಲ ನೀಡುತ್ತಿದೆ. ಶ್ರೀ ಕನಕ ಪತ್ತಿನ ಸಹಕಾರ ಸಂಘದಲ್ಲಿ ಬಂಗಾರದ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಶ್ರೀ ಕನಕ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ರಂಗನಾಥ್ ಎಸ್.ಕೆ.ದಾಸಪ್ಪ ಮಾತನಾಡಿ ಶಿರಾ ತಾಲೂಕು ತಾವರೆಕೆರೆ ಗ್ರಾಮದಲ್ಲಿ ಬ್ಯಾಂಕಿಗೆ ಹೆಚ್ಚಿನ ಗ್ರಾಹಕರಿದ್ದು, ಹಲವು ದಿನಗಳಿಂದ ಬ್ಯಾಂಕಿನ ಶಾಖೆ ತೆರೆಯುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಾವರೆಕೆರೆಯಲ್ಲಿ ೯ನೇ ಶಾಖೆಯನ್ನು ಪ್ರಾರಂಭಿಸಿದ್ದೇವೆ. ಇನ್ನೂ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಖೆಗಳನ್ನು ಪ್ರಾರಂಭಿಸಲಿದ್ದೇವೆ ಎಂದರು.ಈ ಸಂದರ್ಭದಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಾ.ಎಸ್ ಮಂಜುನಾಥ್,
ಸುರೇಶ್, ಪ್ರದೀಪ್, ರಾಘವೇಂದ್ರ, ತ್ರಿವೇಣಿ, ರಘುನಾಥ್, ಸುಶೀಲಾ ವಿರುಪಾಕ್ಷ, ದಿವ್ಯ ರಘು, ತಾವರೆಕೆರೆ ಮುಖಂಡರಾದ ಕೃಷ್ಣಪ್ಪ, ಸೀತಣ್ಣ, ನಂದಕುಮಾರ್, ಕಾಂತರಾಜ್, ಗೋವಿಂದಪ್ಪ, ನಾಗಭೂಷಣ್, ನಮ್ರತ, ತಾವರೆಕೆರೆ ಶಾಖಾ ಸಹಾಯಕ ವ್ಯಸ್ಥಾಪಕಿ ಸೌಮ್ಯ, ಪ್ರಜ್ವಲ್, ಜ್ಯೋತಿ, ದಿವಾಕರ್ ಸೇರಿದಂತೆ ಹಲವರು ಹಾಜರಿದ್ದರು.