ಜಿಲ್ಲಾ ಕಸಾಪದಿಂದ ‘ಶಾಸನ ಶೋಧನ ಅಧ್ಯಯನ ಸಂರಕ್ಷಣಾ’ ಯೋಜನೆ

| Published : Jun 08 2024, 12:34 AM IST

ಸಾರಾಂಶ

ದೇವಸ್ಥಾನದ ಮಾಜಿ ಅಧ್ಯಕ್ಷ ವಿಠಲ ಗೌಡ ಭಜಕರಾದ ಲೋಕೇಶ್ ಗೌಡ ಅವರ ಮನವಿ ಮೇರೆಗೆ ಮೇ ೨೯ರಂದು ಶಾಸನ ಹಾಗೂ ವಿಗ್ರಹದ ಅಧ್ಯಯನವನ್ನು ದೇವಸ್ಥಾನದ ಬಾಲಾಲಯದ ಮುಂಭಾಗದಲ್ಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ದ.ಕ. ಜಿಲ್ಲೆಯ ಅವಿಭಜಿತ ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಬರೆಪ್ಪಾಡಿ ಎಂಬಲ್ಲಿನ ಶ್ರೀ ಪಂಚಲಿಂಗೇಶ್ವರ - ಕೇಪುಳೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಹಾಗೂ ದೇವರ ತೀರ್ಥದ ಬಾವಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸುಮಾರು ೮೦೦ ವರ್ಷ ಹಳೆಯದು ಎನ್ನಲಾದ ಹೊಯ್ಸಳ ಕಾಲದ ಸುಮಾರು ೯ ಲೋಹದ ವಿಗ್ರಹಗಳು ಪತ್ತೆಯಾಗಿವೆ. ಜೊತೆಗೆ ದೇವಸ್ಥಾನದ ಒಳ ಆವರಣದದಲ್ಲಿ ಸುಮಾರು ೫೮೪ ವರ್ಷ ಹಳೆಯ ವಿಜಯನಗರ ಅರಸರ ಕಾಲದಲ್ಲಿ ಎರಡು ಕನ್ನಡ ಶಿಲಾ ಶಾಸನ ಸ್ಥಾಪಿಸಿದ ಮಹತ್ವ ಮರು ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ‘ಶಾಸನ -ಶೋಧನ -ಅಧ್ಯಯನ ಸಂರಕ್ಷಣಾ’ ಯೋಜನೆಯಡಿಯಲ್ಲಿ ಯೋಜನೆಯ ಪ್ರಮುಖ ಅಧ್ಯಯನಕಾರರಾದ ಇತಿಹಾಸ ತಜ್ಞ ಡಾ. ಉಮಾನಾಥ್ ಶೆಣೈ ಅವರ ನೇತೃತ್ವದಲ್ಲಿ ವಿಗ್ರಹಗಳ ಹಾಗೂ ಶಾಸನದ ಅಧ್ಯಯನ ನಡೆಸಲಾಯಿತು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಯನದಲ್ಲಿ ಸಹಕರಿಸಿದರು.

ದೇವಸ್ಥಾನದ ಮಾಜಿ ಅಧ್ಯಕ್ಷ ವಿಠಲ ಗೌಡ ಭಜಕರಾದ ಲೋಕೇಶ್ ಗೌಡ ಅವರ ಮನವಿ ಮೇರೆಗೆ ಮೇ ೨೯ರಂದು ಶಾಸನ ಹಾಗೂ ವಿಗ್ರಹದ ಅಧ್ಯಯನವನ್ನು ದೇವಸ್ಥಾನದ ಬಾಲಾಲಯದ ಮುಂಭಾಗದಲ್ಲಿ ನಡೆಸಲಾಯಿತು.

ಶಾಸನವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಸುಮಾರು ೨೩ ಸಾಲು ಓದುವ ಸಮಯದಲ್ಲಿ ದೇವಸ್ಥಾನದ ಅರ್ಚಕರಾದ ಜನೇಶ್ ಭಟ್ ಅವರು ಈ ಹಿಂದೆ ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕರಾದ ಡಾ.ಕೆ ಎಸ್. ಎನ್ ಉಡುಪ ಅವರು ಪ್ರಾಕ್ತನ ಇಲಾಖೆಯ ನೋಂದಣಿ ಸಂಖ್ಯೆ ೧೧೬,ಎ ಆರ್ ೨೪೬ ರ ಪ್ರಕಾರ ೧೯೩೦-೩೧ ರಲ್ಲಿ ಅಧ್ಯಯನ ಹಾಗೂ ನೋಂದಣಿ ಆಗಿರುವ ಶಾಸನದ ಪೂರ್ಣ ಪಾಠದ ಪ್ರತಿಯನ್ನು ಅವರು ನೀಡುವಾಗ, ಈ ಶಾಸನವು ಈ ಮೊದಲೇ ಪ್ರಾಕ್ತನ ಇಲಾಖೆಯಲ್ಲಿ ನೋಂದಣಿ ಆದ ವಿಷಯ ಬೆಳಕಿಗೆ ಬಂದಿತು. ಬಳಿಕ ಆ ಪೂರ್ಣ ಪಾಠವನ್ನೇ ಸಭೆಯಲ್ಲಿ ಓದಿ ಶಾಸನ ಸ್ಥಾಪಿಸಿದ ಉದ್ದೇಶ ಹಾಗೂ ವಿವರಗಳನ್ನು ತಿಳಿಸಲಾಯಿತು.ಶಾಸನದ ಸ್ವರೂಪ: ಹಳೆಯ ದೇವಸ್ಥಾನದ ಆವರಣದಲ್ಲಿ ಎರಡು ಶಿಲಾ ಶಾಸನಗಳು ಪತ್ತೆಯಾಗಿದ್ದು, ಶಾಸನವು ಶಿರೋ ಭಾಗದಿಂದ ಭೂಮಿಯ ಒಳಗೆ ನೆಡುವ ಜಾಗ ಸೇರಿ ಸುಮಾರು ೩೭.೬ ಇಂಚು ಉದ್ದ ಹಾಗೂ ೮.೬ ಇಂಚು ಅಗಲ, ೬.೬ ಇಂಚು ದಪ್ಪ ಇದೆ. ಭೂಮಿಯ ಒಳಗೆ ಹೂತು ಹಾಕುವ ಶಾಸನದ ಭಾಗವು ೭.೬ ಇಂಚು ಎತ್ತರವಿದೆ. ಶಾಸನದ ಪಠ್ಯ ಬರೆದ ಭಾಗವು ೨೪ ಇಂಚು ಇದ್ದು, ಅದರ ಮೇಲ್ಭಾಗ ೬ ಇಂಚು ವರೆಗೆ ಅರ್ಧಚಂದ್ರಾಕೃತಿಯಲ್ಲಿ ಇದೆ. ಶಾಸನದ ಶಿರೋಭಾಗದ ಬಲಬದಿಯಲ್ಲಿ ಅರ್ಧ ಚಂದ್ರ ಹಾಗೂ ಒಂದು ದೀಪ ಎಡ ಭಾಗದಲ್ಲಿ ಸೂರ್ಯ ಹಾಗೂ ಒಂದು ದೀಪ ಹಾಗೂ ಶಿರೋ ಭಾಗದಲ್ಲಿ ಒಂದು ಗೊಂಡೆ ಹಾಗೂ ಮಧ್ಯಭಾಗದಲ್ಲಿ ಪಾಣಿ ಪೀಠ ಸಹಿತ ಶಿವಲಿಂಗದ ಆಕೃತಿಯನ್ನು ಕೆತ್ತಲಾಗಿದೆ.

ಮೊದಲನೇ ಶಾಸನದ ಎದುರು ಭಾಗದಲ್ಲಿ ಕನ್ನಡ ಲಿಪಿಯ ಅಕ್ಷರಗಳನ್ನು ಸುಂದರವಾಗಿ ಕೆತ್ತಲಾಗಿದ್ದು, ೩೦ ಸಾಲುಗಳು ಇವೆ . ಶಾಸನದ ಹಿಂಭಾಗದಲ್ಲಿ ೩೪ ಸಾಲುಗಳಿದ್ದು ಸ್ಪಷ್ಟವಾಗಿ ಕೆತ್ತಿಲ್ಲ.

ಪತ್ತೆಯಾದ ಇನ್ನೊಂದು ಶಾಸನವೂ ಇದೇ ರೀತಿಯಲ್ಲಿ ಇದ್ದು, ಶಾಸನದ ಶಿರೋಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಪಾಣಿಪೀಠ ಸಹಿತ ಶಿವಲಿಂಗದ ಆಕೃತಿ ಗಳನ್ನು ಮಾತ್ರ ಕೆತ್ತಲಾಗಿದೆ.

ಎರಡನೇ ಶಾಸನದ ಹಿಂಭಾಗದಲ್ಲಿ ೧೨ ಸಾಲುಗಳನ್ನು ಕೆತ್ತಲಾಗಿದ್ದು, ಕೆತ್ತನೆಯು ಸ್ಪಷ್ಟವಾಗಿಲ್ಲ. ಶಾಸನದ ಮುಂಭಾಗದಲ್ಲಿ ಯಾವುದೇ ಅಕ್ಷರಗಳನ್ನು ಬರೆದಿಲ್ಲ. ಇತ್ತೀಚೆಗೆ ಯಾರೋ ‘ನಮಃ’ ಎಂಬ ಇತ್ತೀಚಿಗಿನ ಕನ್ನಡ ಲಿಪಿಯಲ್ಲಿ ಬರೆದ ಹಾಗೆ ಕಂಡು ಬರುತ್ತದೆ.

ಎರಡು ಶಾಸನದಲ್ಲಿ, ಒಂದನೇ ಶಾಸನದ ಮುಂಭಾಗದಲ್ಲಿ ಇರುವ ೩೦ ಸಾಲುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಹಿಂಭಾಗದಲ್ಲಿ ಇರುವ ೩೪ ಸಾಲುಗಳ ಪೈಕಿ ೩ ಸಾಲುಗಳು ಸಂಪೂರ್ಣ ನಷ್ಟವಾಗಿದೆ. ಎರಡನೇ ಶಾಸನದ ಮುಂಭಾಗವನ್ನು ಇತ್ತೀಚಿನ ದಿನಗಳಲ್ಲಿ ಎಳನೀರು ಒಡೆಯಲು ಅಥವಾ ತೆಂಗಿನಕಾಯಿ ಒಡೆಯಲು ಉಪಯೋಗಿಸಿ ಕತ್ತಿಯಿಂದ ತುಂಡರಿಸಿದ ಗೆರೆಗಳು ಹಾಗೂ ಕಲ್ಲಿನ ಕೆಲ ಸಣ್ಣ ಭಾಗ ತುಂಡಾಗಿ ಭಿನ್ನವಾದಂತೆ ಕಂಡುಬರುತ್ತದೆ. ಈ ಎರಡನೇ ಶಾಸನದ ಮುಂಭಾಗದಲ್ಲಿ ಯಾವುದೇ ಅಕ್ಷರಗಳನ್ನು ಕೆತ್ತಲಾಗಿಲ್ಲ. *ಶಾಸನದ ಪಠ್ಯ* ಒಟ್ಟು ೭೬ ಸಾಲುಗಳಿರುವ ಈ ಎರಡು ಶಾಸನವು ಕನ್ನಡ ಲಿಪಿಯಲ್ಲಿದ್ದು, ಸ್ವಸ್ತಿ ಶ್ರೀ ಗಣಪತಯೇ ನಮಃ ಎಂಬ ಪ್ರಾರ್ಥನಾ ಶ್ಲೋಕದಿಂದ ಪ್ರಾರಂಭಗೊಳ್ಳುತ್ತದೆ. ಜಯಾಭ್ಯುದಯ ಶಾಲಿವಾಹನ ಶಕ ೧೩೬೪ ಆಷಾಢ ಶುದ್ಧ ೧, ಮಂಗಳವಾರ ರೌದರಿ ನಾಮ ಸಂವತ್ಸರದಲ್ಲಿ ಸ್ಥಾಪಿಸಿದ ಶಾಸನ ಇದಾಗಿದೆ ಅಂದರೆ ಸುಮಾರು ಕ್ರಿ. ಶ ೧೪೪೨, ಮೇ ೩೧ ರಂದು ಶ್ರೀಮನ್ಮಹಾರಾಜಾಧಿರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಗಜಬ್ಯೇಂಟಗಾರ ದೇವರಾಯ ಮಹಾರಾಯರು ವಿಜೆ ನಗರಿಯ ಸಿಂಹಾಸನಾಧಿಪ ಆಗಿರುವ ಕಾಲಮಾನದಲ್ಲಿ ಶಾಸನ ಸ್ಥಾಪಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಬಾರಕೂರು ಹಾಗೂ ಮಂಗಳೂರು ರಾಜ್ಯವನ್ನು ಅಣ್ಣಪ್ಪ ಆಳುತ್ತಿದ್ದು, ಕಡಬ ರಾಜ್ಯವನ್ನು ರಾಮರಸರು ಆಳುತ್ತಿದ್ದು, ರಾಮರಸರು ಸ್ಥಾಪಿಸಿದ ಧರ್ಮಶಾಸನ ಎಂದು ಬರೆದಿದ್ದು, ಮಹಾಪ್ರದಾನ ಅಣ್ಣಪ್ಪ ದಣ್ಣಾಯಕ ಎಂದು ಉಲ್ಲೇಖವಿದ್ದು, ಶಾಸನದಲ್ಲಿ ಸ್ವಯಂಭು ಲಿಂಗೇಶ್ವರ ದೇವರ ಸನ್ನಿಧಿ ಎಂಬ ಉಲ್ಲೇಖವಿದೆ. ಈ ಶಾಸನದಲ್ಲಿ ದೇವರ ನಿತ್ಯ ನೈಮೆತ್ತಿಕಗಳಿಗೆ ಅನೇಕ ವ್ಯವಸ್ಥೆಗಳನ್ನು ವಿಜಯನಗರದ ಅರಸರ ಕಾಲದಲ್ಲಿ ಮಾಡಿದ ಉಲ್ಲೇಖವಿದ್ದು, ಮುಖ್ಯವಾಗಿ ಬ್ರಾಹ್ಮಣ ಸಂತರ್ಪಣೆಗೆ ಪ್ರತಿದಿನ ತುಪ್ಪ,ಮಜ್ಜಿಗೆ,ವೀಳ್ಯದೆಲೆ ಹಾಗೂ ದೇವರ ನಿತ್ಯ ನೈಮೆತ್ತಿಕಗಳು ಸಾಂಗವಾಗಿ ನಡೆಯುವ ವ್ಯವಸ್ಥೆಗಾಗಿ ಸ್ಥಳೀಯ /ಗ್ರಾಮದ ದಾನಿಗಳ ಜಮೀನಿನಲ್ಲಿ ಬೆಳೆಯುವ ಭತ್ತ ಮೂಡೆ ಅಳತೆಯ ಲೆಕ್ಕದಲ್ಲಿ ದೇವಸ್ಥಾನಕ್ಕೆ ನೀಡುವ ಕುರಿತು ಬರೆದಿದ್ದು, ಈ ಶಾಸನ ಬರೆಯುವಾಗ ಸಾಕ್ಷಿ ''''''''''''''''ಮುದಿಯ ನಾಡ ಕುಂಡು ಪಿಠನ್ವಜಿಲನಾಥ'''''''''''''''' ಎಂದು ಬರೆದಿದ್ದು, ''''''''''''''''ದೇವನ ಬರಹ'''''''''''''''' ಎಂದು ಮುಕ್ತಾಯವಾಗಿದೆ. *ಪತ್ತೆಯಾದ ವಿಗ್ರಹಗಳು* ಹಳೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಈಶಾನ್ಯ ಭಾಗದಲ್ಲಿದ್ದ ದೇವರ ಬಾವಿಯಲ್ಲಿ ಸುಮಾರು ೯ ಪಂಚಲೋಹದ/ಲೋಹದ ವಿಗ್ರಹಗಳು ಪತ್ತೆಯಾಗಿದ್ದು,ವರಾಹ ಲಕ್ಷ್ಮಿ ನಾರಾಯಣ, ಚತುರ್ಭುಜ ಲಕ್ಷ್ಮೀನಾರಾಯಣ/ವಿಷ್ಣು , ಸೊಂಟದಲ್ಲಿ ಕೈಯನ್ನಿರಿಸಿದ ವೆಂಕಟರಮಣ/ವಿಷ್ಣು, ದುರ್ಗೆ, ಸ್ತ್ರೀ ಹಾಗೂ ಪುರುಷ ಜೋಡಿ ದೈವ, ವಿಗ್ರಹದಿಂದ ರುಂಡ ಬೇರ್ಪಟ್ಟಿರುವ ಒಂದು ಮೂರ್ತಿ, ದ್ವಿಭುಜ ನವನೀತ ಕೃಷ್ಣ / ಗೋಪಾಲಕೃಷ್ಣ ಹಾಗೂ ಜಿಂಕೆಯನ್ನು ಕೈಯಲ್ಲಿ ಹಿಡಿದ ದೇವರ ಉತ್ಸವ ಮೂರ್ತಿ ಪತ್ತೆಯಾಗಿದ್ದು, ಇವುಗಳಲ್ಲಿ ಹೆಚ್ಚಿನ ಮೂರ್ತಿಗಳು ಭಿನ್ನ ಬಂದಿರುತ್ತದೆ ( ತುಂಡಾಗಿರುತ್ತದೆ). ಹಲವು ಶತಮಾನಗಳ ಹಿಂದೆ ಯಾವುದೋ ಕಾರಣಗಳಿಂದ ಈ ವಿಗ್ರಹಗಳನ್ನು ಜಲ ಸ್ತಂಭನ ಮಾಡಿರಬಹುದು ಎಂದು ಅಭಿಪ್ರಾಯ ಪಡಲಾಗಿದೆ.ಈ ಪುರಾತನ ವಿಗ್ರಹಗಳನ್ನು ಪರೀಕ್ಷಿಸಿ ನೋಡುವಾಗ ಇವುಗಳು ಶಾಸನ ಸ್ಥಾಪಿಸುವ ಸುಮಾರು ೨೦೦ ವರ್ಷಗಳ ಹಿಂದೆ ಹೊಯ್ಸಳರ ಕಾಲಮಾನದಲ್ಲಿ ಪ್ರತಿಷ್ಠಾಪನೆ ಆಗಿರಬಹುದು, ವಿಗ್ರಹ ಹಾಗೂ ಶಾಸನಗಳನ್ನು ಇನ್ನೂ ಹೆಚ್ಚಿನ ಅಧ್ಯಯನ ಮಾಡಿದಲ್ಲಿ ಅನೇಕ ಮಹತ್ವದ ವಿಚಾರಗಳು ಬೆಳಕಿಗೆ ಬರಬಹುದು ಎಂದು ಶಾಸನ ತಜ್ಞ ಹಾಗೂ ವಿಗ್ರಹ ತಜ್ಞರಾದ ಡಾ. ಉಮಾನಾಥ ಶೆಣೈ ಅವರು ಅಭಿಪ್ರಾಯ ಪಟ್ಟಿದ್ದಾರೆ.ಕನ್ನಡ ಭಾಷೆ ಹಾಗೂ ಲಿಪಿಯ ಪ್ರಾಚೀನತೆಯ ಬಗ್ಗೆ ಬೆಳಕನ್ನು ಚೆಲ್ಲುವ ಹಾಗೂ ಕ್ಷೇತ್ರದ ಗತವೈಭವವನ್ನು ಸಾರುವ ಈ ಜ್ಞಾನ ನಿಧಿಗಳಾದ ಶಾಸನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಯನಕಾರರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಮಾತ್ರವಲ್ಲದೆ ಕ್ಷೇತ್ರವನ್ನು ''''''''''''''''ಅಧ್ಯಯನ ತಾಣ''''''''''''''''ವಾಗಿ ಮಾಡುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಳ್ಳಲಾದ ವಿನೂತನ ಯೋಜನೆ "ಶಾಸನ-ಶೋಧನ- ಸಂರಕ್ಷಣಾ " ಯೋಜನೆಯಡಿಯಲ್ಲಿ ದೇವಸ್ಥಾನದ ಸಮಿತಿಯವರು ಒಪ್ಪಿದ್ದಲ್ಲಿ, ಶಾಸನ ಮಂಟಪವನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ತಿಳಿಸಿದ್ದಾರೆ.ಶಾಸನ ಹಾಗೂ ವಿಗ್ರಹಗಳ ಅಧ್ಯಯನ ಮಾಡುವ ಸಂದರ್ಭದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ವಿಠಲ ಗೌಡ, ದೇವಸ್ಥಾನ ಸಮಿತಿಯ ಮಾಜಿ ಸದಸ್ಯರಾದ ಜತ್ತಪ್ಪ ರೈ, ಸಮಿತಿಯ ಸದಸ್ಯರಾದ ದಾಮೋದರ, ಭಜಕರಾದ ಹರ್ಷಿತ ಮುದ್ಯ, ಹೇಮಂತ ಲೋಕೇಶಗೌಡ ಹಾಗೂ ಅರ್ಚಕರಾದ ಜನೇಶ ಭಟ್ ಅವರು ಉಪಸ್ಥಿತರಿದ್ದು ಮಾಹಿತಿಗಳನ್ನು ನೀಡಿದರು.