ಕನ್ನಡಪ್ರಭ ವಾರ್ತೆ ಆಲೂರುರಾಜ್ಯಸರ್ಕಾರವು ಜಾರಿಗೆ ತಂದಿರುವ ಶೇಕಡ 17ರ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯವಾದ ಮಾದಿಗ ಸಮುದಾಯಕ್ಕೆ ಪ್ರಸ್ತುತ ಇರುವ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ನಿಗದಿಪಡಿಸಿದ ನಂತರ ಸರ್ಕಾರಿ ಹುದ್ದೆಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಆಲೂರು ತಾಲೂಕು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ ಅಂಕೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಪುಟ್ಟರಾಜು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ 101 ಜಾತಿ ಉಪಜಾತಿಗಳಲ್ಲಿ, ಶೇಕಡ 15ರಷ್ಟು ಮೀಸಲಾತಿಯಲ್ಲಿ ಮಾದಿಗ ಸಂಬಂಧಿಸಿದ ಜಾತಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಕುರಿತಾಗಿ, ಮಾದಿಗ ಜನಾಂಗವು ಸುಮಾರು 30 ವರ್ಷಗಳಿಂದ ಒಳ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದು, ಇದರ ಫಲವಾಗಿ ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಪ್ರತಿಯೊಂದು ರಾಜ್ಯಗಳು ಕೂಡ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಆದೇಶ ಮಾಡಿದ್ದರ ಫಲವಾಗಿ ರಾಜ್ಯ ಸರ್ಕಾರ 6:6:5 ಅನುಪಾತದಲ್ಲಿ ಒಳ ಮೀಸಲಾತಿ ಕಲ್ಪಿಸಿಕೊಟ್ಟು ಈಗ ಇದಕ್ಕೆ ರಾಜ್ಯಪಾಲರ ಅಂಕಿತ ಕೂಡ ಆಗಿದೆ. ಆದರೆ ಇದನ್ನು ಜಾರಿಗೆ ತರಬೇಕಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಅವರ ಸಮಾಜದ ಒಳಿತಿಗಾಗಿ 2013ರ ಆದೇಶದಂತೆ ಶೇಕಡ 15% ಮೀಸಲಾತಿಯ ಉದ್ಯೋಗ ತುಂಬಲು ಡಿ.ಪಿ.ಆರ್‌ ಮಾಡಿಕೊಂಡಿದ್ದು ಇದು ಮಾದಿಗ ಸಮಾಜಕ್ಕೆ ಮರಣ ಶಾಸನವಾಗುತ್ತದೆ. ಆದ್ದರಿಂದ ಸರ್ಕಾರವು ಈ 15% ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿಕೊಟ್ಟು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಇಲ್ಲವಾದಲ್ಲಿ ಸಂಪೂರ್ಣ ಒಳ ಮೀಸಲಾತಿ ಜಾರಿಯಾಗದ ಹೊರತು ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬಬಾರದು ಎಂದು ಈ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಮಾದಿಗ ದಂಡೋರ ಸಮಿತಿ ಜಿಲ್ಲಾ ಉಪಾಧ್ಯಕ್ಷ ವೆಂಕಟಯ್ಯ, ತಾಲೂಕು ಉಪಾಧ್ಯಕ್ಷ ಶಿವಣ್ಣ, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ರತ್ನಮ್ಮ,ಕಾರ್ಯದರ್ಶಿ ವೀರಭದ್ರಯ್ಯ, ಮುಖಂಡರಾದ ಎ.ಟಿ ಲೋಕೇಶ್, ಮಂಜು ಕಾಮತಿ, ಲೋಕೇಶ್, ಕರಿಯಪ್ಪ, ರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು