ಶಾಲೆ ಮುಚ್ಚುವ ಬದಲು ಅಲ್ಲಿನ ಲೋಪ ಸರಿಪಡಿಸಿ

| Published : May 29 2025, 01:53 AM IST

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟು ಬಡವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಾಯ್ದಿರಿಸಿರುವುದು ಆಶಾದಾಯಕ ನಡೆ. ಆದರೂ ಈ ಕಾಯ್ದೆ ಅಡಿಯಲ್ಲಿಯೂ ಇಂಗ್ಲಿಷ್ ಶಾಲೆಗಳಿಗೇ ನೂಕುನುಗ್ಗಲು ಎಂಬ ಕರಾಳ ಸತ್ಯವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತವನ್ನೇ ನೆಪ ಮಾಡಿಕೊಂಡು ಅಂಥ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಸರ್ಕಾರ ಮುಂದಾಗುತ್ತಿದೆ. ಬದಲಿಗೆ ಅಲ್ಲಿರುವ ಲೋಪಗಳನ್ನು ಸರಿಪಡಿಸುವತ್ತ ಗಮನ ಹರಿಸುವ ಮೂಲಕ ಅಂತಹ ಶಾಲೆಗಳನ್ನು ಪುನಃಶ್ವೇತನಗೊಳಿಸುವುದು ಬಹಳ ಮುಖ್ಯ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ನಗರದ ನೂತನ ಕನ್ನಡಭವನದಲ್ಲಿ ನಡೆದ 10 ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಬುಧವಾರ ಗೋಷ್ಠಿಗಳ ಅಧ್ಯಕ್ಷ ಭಾಷಣ ಮಾಡಿದ ಅವರು, ಹಳ್ಳಿಗಳ ಬದಿ ಹಾದುಹೋಗುವ ಮುಖ್ಯರಸ್ತೆಯ ಕ್ರಾಸ್‌ಗಳಲ್ಲಿ ಖಾಸಗಿ ಇಂಗ್ಲಿಷ್ ಕಾನ್ವೆಂಟ್‌ಗಳನ್ನು ಪ್ರಾರಂಭಿಸಿ ಹಳ್ಳಿಮಕ್ಕಳಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಹಣ ಗಳಿಕೆಯ ದಂದೆಗಿಳಿದಿದ್ದಾರೆ. ಹೀಗಾಗಿ ಸರ್ಕಾರ ನಡೆಸುವ ಹಳ್ಳಿ ಶಾಲೆಗಳಲ್ಲಿ ದಿನೇದಿನೇ ಮಕ್ಕಳ ಹಾಜರಾತಿ ಕುಸಿಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂಗ್ಲಿಷ್ ಶಾಲೆಗಳಿಗೇ ಆದ್ಯತೆ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟು ಬಡವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಾಯ್ದಿರಿಸಿರುವುದು ಆಶಾದಾಯಕ ನಡೆ. ಆದರೂ ಈ ಕಾಯ್ದೆ ಅಡಿಯಲ್ಲಿಯೂ ಇಂಗ್ಲಿಷ್ ಶಾಲೆಗಳಿಗೇ ನೂಕುನುಗ್ಗಲು ಎಂಬ ಕರಾಳ ಸತ್ಯವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

ಕನ್ನಡ ಓದುಗರಿಗೂ ಬರ ಇತ್ತೀಚೆಗೆ ಕನ್ನಡ ಓದುವವರ, ಜೊತೆಗೆ ಬರೆಯುವವರಿಗೂ ಬರ ಬಂದುಬಿಟ್ಟಿದೆ. ಒಂದಷ್ಟು ಹಳಬರನ್ನೂ ಬಿಟ್ಟರೆ ಹೊಸ ತಲೆಮಾರಿನ ಲೇಖಕರು ಕಾಣಸಿಗುತ್ತಲೇ ಇಲ್ಲ. ಬಹುಷಃ ಇಂದಿನ ಅಂತರ್ಜಾಲ, ದೂರದರ್ಶನ ಮತ್ತು ಐಟಿ-ಬಿಟಿಗಳ ನಾಗಾಲೋಟದಲ್ಲಿ ಮೆದುಳಿಗೆ ವಿಶ್ರಾಂತಿಯ ಕೊರತೆ. ಮನಸ್ಸಿನಾಳದಲ್ಲಿ ಸೃಜನಾಶೀಲತೆ ಸೃಜಿಸಲು ಸಮಯಾವಕಾಶವೇ ಇಲ್ಲದಿದ್ದರೆ ಅಕ್ಷರಕೃಷಿ ಹೇಗೆನಡೆದೀತು. ಹೀಗೆಯೇ ಮುಂದುವರೆದಲ್ಲಿ ಮುಂದೊಂದುದಿನ ಕನ್ನಡದಲ್ಲಿ ಬರೆಯುವವರಿಗೇನೇ ಬರ ಬಂದೀತು ಎಂದು ಅವರು ಎಚ್ಚರಿಸಿದರು.

ಸಾಧನೆಗಳನ್ನು ಪಟ್ಟಿಮಾಡುತ್ತ ಭೂತ ಮತ್ತು ವರ್ತಮಾನದ ಬೆನ್ನಿಗೆ ಬಿದ್ದ ನಾವು ಭವಿಷ್ಯದ ದಾರಿಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈಗೀಗ ಕನ್ನಡ ಮಾತನಾಡುವ, ಓದುವ ಮತ್ತು ಬರೆಯುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಡ ಭಾಷೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ಸಂಕಟದ ಮಾತು ಇದು ಎಂದರು.

ಯುವಜನತೆಯಲ್ಲಿ ಸೃಜನಶೀಲತೆ ಮಾಯ

ನಮ್ಮಮಧ್ಯೆ ಇರುವ ತಂದೆ, ಮಗ, ಮೊಮ್ಮಗ ಈ ಮೂರು ತಲೆಮಾರುಗಳ ಪೀಳಿಗೆಯಲ್ಲಿ ಈ ಆರೋಪ ಬಹಳಷ್ಟು ಅನ್ವಯಿಸುವುದು ಮೊಮ್ಮಗನಿಗೆ. ಅಂದರೆ ಈಗಿನ ಯುವಪೀಳಿಗೆಗೆ. ಈಗ ಚಾಲ್ತಿಯಲ್ಲಿರುವ ಲಿಬರಲೈಜೇಷನ್‌, ಪ್ರೈವೇಟೈಜೇಷನ್ ಮತ್ತು ಗ್ಲೋಬಲೈಜೇಷನ್ ಬರಾಟೆಯಲ್ಲಿ ಐಟಿ-ಬಿಟಿಯ ಆಕರ್ಷಕ ಜಾಲದಲ್ಲಿ ಸೃಜನಶೀಲತೆ ಮಾಯವಾಗುತ್ತಿದೆ. ಅವರಿಗೆ ಹೆಚ್ಚು ಗುರಿಗಳಿಲ್ಲ. ಇರುವುದೊಂದೇ ಗುರಿ. ಯಾವುದಾದರೂ ಐ.ಟಿ, ಬಿ.ಟಿ ಕ್ಷೇತ್ರದಲ್ಲಿ ಉದ್ಯೋಗ ಗಳಿಸುವುದು. ದುರಂತವೆಂದರೆ ಇವರ ಬೆನ್ನಹಿಂದೆ ಪೋಷಕರ ಒತ್ತಾಸೆಯೂ ಇದೆ ಎಂದ ಬೇಸರ ವ್ಯಕ್ತಪಡಿಸಿದರು.

ಮೂರಾಲ್ಕು ದಶಕಗಳ ಹಿಂದೆ ಈ ರೀತಿಯ ಹವಣಿಕೆ, ಜಾಣತನ, ಪಟ್ಟಣ ಮತ್ತು ನಗರಗಳಲ್ಲಿ ಮಾತ್ರ ಕಾಣಸಿಗುತ್ತಿದ್ದಿತು. ಆದರೆ ಈಗೀಗ ಪ್ರತಿ ಹಳ್ಳಿಗೂ ಇಂಥ ವ್ಯಾಮೋಹ ಅಂಟುಜಾಡ್ಯದ ರೂಪದಲ್ಲಿ ಆವರಿಸಿಕೊಂಡುಬಿಟ್ಟಿದೆ. ಹಳ್ಳಿಮಕ್ಕಳು ಕೂಡ ಬೆಳಗಾಗುತ್ತಲೇ ಶೂ ಮತ್ತು ಟೈಧರಿಸಿ ಬಲುಶಿಸ್ತಿನಿಂದ ಆಂಗ್ಲಶಾಲೆಗಳಲ್ಲಿ ಎಬಿಸಿಡಿ ಕಲಿಯಲು ಶಾಲೆಯ ಬಸ್ಸುಗಳನ್ನು ಏರುತ್ತಾರೆ ಎಂದರು.

ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ಗೌರವ ಕಾರ್ಯದರ್ಶಿ ಅಮೃತ್ ಕುಮಾರ್, ಲೇಕಕ ಹಾಗೂ ಚಿಂತಕ ಕೆ.ರಾಜ್ ಕುಮಾರ್, ಶಿಕ್ಷಣ ಮಹಾವಿದ್ಯಾಲಯದ ಪ್ರಾಶುಪಾಲ ಬಾಹುಬಲಿ ಮತ್ತಿತರರು ಇದ್ದರು.