ಸಾರಾಂಶ
ವೈದ್ಯರು ಬರುವಷ್ಟರಲ್ಲಿ ಎರಡು ನಾಟಿ ಹಸುಗಳು ಮತ್ತು ಒಂದು ಸೀಮೆ ಹಸು ಮೃತಪಟ್ಟರೆ ಮತ್ತೊಂದು ಸೀಮೆ ಹಸು ವೈದ್ಯರ ಸಕಾಲಿಕ ಚಿಕಿತ್ಸೆಯಿಂದ ಬದುಕುಳಿದಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಿಂಡಿ ತಿಂದ ಹತ್ತೇ ನಿಮಿಷದಲ್ಲಿ ಎರಡು ನಾಟಿ ಹಸುಗಳು, ಒಂದು ಸೀಮೆ ಹಸು ಸಾವನಪ್ಪಿರುವ ಘಟನೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಜರುಗಿದೆ. ಗ್ರಾಮದ ದೊಡ್ಡೇಗೌಡರ ಪುತ್ರ ರಾಮಕೃಷ್ಣೇಗೌಡರಿಗೆ ಸೇರಿದ ಸುಮಾರು 1 ಲಕ್ಷ, 20 ಸಾವಿರ ರು. ಬೆಲೆ ಬಾಳುವ ಒಂದು ಜೊತೆ ನಾಟಿ ಹಸುಗಳು ಮತ್ತು 1 ಲಕ್ಷ, 10 ಸಾವಿರ ರು. ಬೆಲೆ ಬಾಳುವ ಸೀಮೆ ಹಸು ಸಾವಿಗೀಡಾಗಿವೆ. ಮತ್ತೊಂದು ಬೆಲೆ ಬಾಳುವ ಸೀಮೆ ಹಸು ವೈದ್ಯರ ಸಕಾಲಿಕ ಚಿಕಿತ್ಸೆಯಿಂದ ಬದುಕುಳಿದಿದೆ. ರಾಸುಗಳ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ರೈತ ರಾಮಕೃಷ್ಣೇಗೌಡ ಸೋಮವಾರ ಮಧ್ಯಾಹ್ನ ಕೆ.ಆರ್.ಪೇಟೆ ಪಟ್ಟಣದ ತಮ್ಮ ಪರಿಚಿತ ವ್ಯಾಪಾರಿ ಅಂಗಡಿಯಿಂದ ಹಿಂಡಿ ತಂದು ಅದನ್ನು ನೆನೆದು ಹಾಕಿ ತಮ್ಮ ಮನೆಯ ಸಾಕು ರಾಸುಗಳಿಗೆ ನೀಡಿದ್ದಾರೆ.ಹಿಂಡಿ ತಿಂದ ಕೇವಲ ಹತ್ತು ನಿಮಿಷಕ್ಕೆ ಜಮೀನು ಉಳುಮೆಗೆ ಬಳಕೆ ಮಾಡುತ್ತಿದ್ದ ಒಂದು ಜೊತೆ ನಾಟಿ ಹಸು ಮತ್ತು ಎರಡು ಸೀಮೆ ಹಸುಗಳು ಅಸ್ವಸ್ಥಗೊಂಡಿವೆ. ವೈದ್ಯರು ಬರುವಷ್ಟರಲ್ಲಿ ಎರಡು ನಾಟಿ ಹಸುಗಳು ಮತ್ತು ಒಂದು ಸೀಮೆ ಹಸು ಮೃತಪಟ್ಟರೆ ಮತ್ತೊಂದು ಸೀಮೆ ಹಸು ವೈದ್ಯರ ಸಕಾಲಿಕ ಚಿಕಿತ್ಸೆಯಿಂದ ಬದುಕುಳಿದಿದೆ.
ರಾಸುಗಳ ಅಸ್ವಸ್ಥ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ಪಶು ವೈದ್ಯಾಧಿಕಾರಿ ಡಾ.ದೇವರಾಜು ಸ್ಥಳಕ್ಕೆ ಆಗಮಿಸಿದರು. ರಾಸುಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಕಾರಣ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.ರಾಸುಗಳ ಅಕಾಲಿಕ ಸಾವಿನ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.