ಕನ್ನಡಪ್ರಭ ವಾರ್ತೆ ಮೈಸೂರು

ಸುಸ್ಥಿರ ಪರಿಸರದ ಅಭಿವೃದ್ಧಿಗೆ ಸಂಸ್ಥೆಗಳ ಹಣಕಾಸಿನ ನೆರವು ಅಗತ್ಯ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಎನ್. ನಾಗರಾಜ ಅಭಿಪ್ರಾಯಪಟ್ಟರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವ ಜ್ಯೋತಿ ಸಭಾಂಗಣದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಜೆಎಸ್‌ಎಸ್ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗ್ರೀನ್ ಫೈನಾನ್ಸ್‌ ಮತ್ತು ಸುಸ್ಥಿರ ನಿರ್ವಹಣೆಯಲ್ಲಿನ ಸಂಶೋಧನೆಯ ಹೊಸ ಮಾದರಿಗಳು ಎಂಬ ವಿಷಯ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಸುಸ್ಥಿರ ಪರಿಸರದ ಅಭಿವೃದ್ಧಿಗೆ ಸಂಸ್ಥೆಗಳ ಹಣಕಾಸಿನ ನೆರವು ಅಗತ್ಯ. ಜೊತೆಗೆ ಸಂಪನ್ಮೂಲಗಳನ್ನು ಸಂರಕ್ಷಿಸಲು ಸುಸ್ಥಿರ ಕ್ರಮಗಳು ಅತ್ಯಗತ್ಯವಾಗಿದ್ದು, ಭಾರತದ ಬಂಡವಾಳವು ವಿದೇಶಗಳಿಗೆ ಸೋರಿ ಹೋಗದಂತೆ ದೇಶದ ಒಳಗೆ ಉಳಿಯುವಂತಾಗಬೇಕು ಎಂದರು.

ಪರಿಸರ ಸಂಪನ್ಮೂಲ ರಕ್ಷಿಸಲು ಗಾಳಿ ಮತ್ತು ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವ ಅಗತ್ಯವಿದೆ. ಗ್ರೀನ್ ಫೈನಾನ್ಸ್ ಇಂದು ಕೇವಲ ಭರವಸೆಗಳಿಗಷ್ಟೇ ಸೀಮಿತವಾಗಿಲ್ಲ, ಇದು ಹೂಡಿಕೆಯ ಮೇಲಿನ ಲಾಭ ಮತ್ತು ಇಂಗಾಲದ ಹೊರಸೂಸುವಿಕೆ ಕಡಿತದ ಸ್ಪಷ್ಟ ಫಲಿತಾಂಶಗಳನ್ನು ಆಧರಿಸಿದೆ ಎಂದರು.


ಆಧುನಿಕ ಹಣಕಾಸು ವ್ಯವಸ್ಥೆಯು ಕೇವಲ ಇಂಗಾಲದ ಕಡಿತವನ್ನಷ್ಟೇ ಅಲ್ಲದೆ, ಪ್ರಕೃತಿ-ಪರವಾದ ಅಭಿವೃದ್ಧಿ, ನೈಸರ್ಗಿಕ ಬಂಡವಾಳ ಮತ್ತು ಸುಸ್ಥಿರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡುವ ಮೂಲಕ ಭವಿಷ್ಯದ ಆರ್ಥಿಕತೆಯನ್ನು ಭದ್ರಪಡಿಸುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮೈಸೂರು ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಡಿ.ಎಸ್. ಪ್ರತಿಮಾ ಮಾತನಾಡಿ, ಸುಸ್ಥಿರತೆ ಎಂಬುದು ಇಂದಿನ ಕಾಲಘಟ್ಟದಲ್ಲಿ ಆಯ್ಕೆಯಲ್ಲ, ಬದಲಾಗಿ ಅದೊಂದು ಅನಿವಾರ್ಯತೆಯಾಗಿದೆ ಎಂದರು.

ಅಸ್ತಿತ್ವದಲ್ಲಿರುವ ಪರಿಸರ ಸಮಸ್ಯೆಗಳನ್ನು ತೊಡೆದುಹಾಕಲು ನವೀನ ಪರಿಹಾರ ಕಂಡುಕೊಳ್ಳಬೇಕು. ಪರಿಸರದ ಅಪರೂಪದ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ಜೊತೆಗೆ ಜಾಗತಿಕ ಪರಿಸರ ಬಿಕ್ಕಟ್ಟುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣ ಆಯೋಜಿಸಿದ ಕಾಲೇಜಿನ ಕಾರ್ಯವನ್ನು ಶ್ಲಾಘಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಸ್‌. ಶಿಲ್ಪಾ ಇದ್ದರು.

ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಥಮ ಎಂಕಾಂ ವಿದ್ಯಾರ್ಥಿನಿ ವಿ.ವಿದ್ಯಾ ಪ್ರಾರ್ಥಿಸಿದರು. ಅರ್ಫಾ ಫಾತಿಮಾ, ಸ್ವಾಗತಿಸಿದರು. ಎಂ. ಲೀಲಾಂಬಿಕೆ ವಂದಿಸಿದರು. ಕೀರ್ತನ ಎಸ್. ಅರಸ್ ನಿರೂಪಿಸಿದರು.