ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ

| Published : Nov 13 2025, 01:30 AM IST

ಸಾರಾಂಶ

ವಾತಾವರಣದಲ್ಲಿನ ವ್ಯತ್ಯಾಸ ಹಾಗೂ ಧೂಳಿನಿಂದ ಸಾಂಕ್ರಾಮಿಕ ರೋಗ ಹಾಗೂ ಕೆಎಫ್‌ಡಿ ರೋಗದ ಲಕ್ಷಣ ಕಂಡುಬರುವ ಸಾಧ್ಯತೆಯಿದ್ದು, ಧೂಳಿನಿಂದ ರಕ್ಷಣೆಗೆ ಮಾಸ್ಕ್‌ ಧರಿಸುವುದು ಕಡ್ಡಾಯ. ರೈತರು ಕಾಡಿಗೆ ತೆರಳುವ ಮುನ್ನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.

ಸಾಂಕ್ರಾಮಿಕ ರೋಗ, ಕೆಎಫ್‌ಡಿ ರೋಗದ ಲಕ್ಷಣ ಕಂಡುಬರುವ ಸಾಧ್ಯತೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕರ

ಕನ್ನಡಪ್ರಭ ವಾರ್ತೆ ಶಿರಸಿ

ವಾತಾವರಣದಲ್ಲಿನ ವ್ಯತ್ಯಾಸ ಹಾಗೂ ಧೂಳಿನಿಂದ ಸಾಂಕ್ರಾಮಿಕ ರೋಗ ಹಾಗೂ ಕೆಎಫ್‌ಡಿ ರೋಗದ ಲಕ್ಷಣ ಕಂಡುಬರುವ ಸಾಧ್ಯತೆಯಿದ್ದು, ಧೂಳಿನಿಂದ ರಕ್ಷಣೆಗೆ ಮಾಸ್ಕ್‌ ಧರಿಸುವುದು ಕಡ್ಡಾಯ. ರೈತರು ಕಾಡಿಗೆ ತೆರಳುವ ಮುನ್ನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕರ ಹೇಳಿದರು.ಮಂಗಳವಾರ ನಗರದ ತಾಪಂ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಕುರಿತು ಮಾಹಿತಿ ನೀಡಿದರು.ಕಳೆದ ಬಾರಿ ಶಿರಸಿ-ಸಿದ್ದಾಪುರ ಗಡಿ ರೇವಣಕಟ್ಟಾ ಭಾಗದಲ್ಲಿ ಕೆಎಫ್‌ಡಿ ಕಂಡುಬಂದಿತ್ತು. ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಿ, ಡೇಫಾ ತೈಲ ಪೂರೈಸಲಾಗಿದ್ದು, ಉಣ್ಣೆ ಕಚ್ಚದಂತೆ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ತೈಲ ಹಚ್ಚಿಕೊಂಡು ಕಾಡಿಗೆ ತೆರಳಬೇಕು. ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗ ಕೊರತೆಯಿಂದ ಜನೌಷಧಿ ಕೇಂದ್ರ ಸ್ಥಗಿತಗೊಂಡಿತ್ತು. ಹೊಸ ಕಟ್ಟಡಕ್ಕೆ ವರ್ಗಾವಣೆಯಾದ ಬಳಿಕೆ ಪುನಃ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಲಾಗುತ್ತದೆ.‌ ಬನವಾಸಿಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಓಡಾಡಲು ಭಯಪಡುತ್ತಿದ್ದಾರೆ. ನಾಯಿಗಳ ನಿಯಂತ್ರಣಕ್ಕೆ ತಾಪಂನಿಂದ ಕ್ರಮ ತೆಗೆದುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ. ಆಸ್ಪತ್ರೆಯಿಂದ ಸ್ಥಳೀಯ ಗ್ರಾಪಂಗೂ ಪತ್ರ ಬರೆಯಲಾಗಿದೆ. ಕೆಎಸ್ಆರ್ಟಿಸಿಯು ನಮ್ಮ ಕ್ಲಿನಿಕ್ ಆರಂಭಿಸಲು ಬಸ್‌ ನಿಲ್ದಾಣದಲ್ಲಿ ಜಾಗ ನೀಡಿದರೆ ಅನುಕೂಲವಾಗುತ್ತದೆ ಎಂದರು.ಇದಕ್ಕೆ ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಪ್ರತಿಕ್ರಿಯಿಸಿ, ಬನವಾಸಿ ಆಸ್ಪತ್ರೆಯ ಆವಾರದಲ್ಲಿ ಬೀದಿ ನಾಯಿ ನಿಯಂತ್ರಣಕ್ಕೆ ಸ್ಥಳೀಯ ಗ್ರಾಪಂನಿಂದ ಕ್ರಮ ವಹಿಸಲು ತಾಪಂನಿಂದ ಪತ್ರ ಬರೆಯಲಾಗುತ್ತದೆ ಎಂದರು.ತೋಟಗಾರಿಕಾ ಇಲಾಯ ಸತೀಶ ಹೆಗಡೆ ಮಾತನಾಡಿ, ಕ್ಲಸ್ಟರ್ ಡೆವಲಪ್ಮೆಂಟ್ ಪ್ರೊಗ್ರಾಮ್ ನಲ್ಲಿ ಕಾಳುಮೆಣಸು ಹಾಗೂ ಶುಂಠಿ ಬೆಳೆ ಪ್ರೋತ್ಸಾಹಿಸಲಾಗುತ್ತದೆ. ಅನುದಾನದ ನಿರ್ಬಂಧವಿಲ್ಲ. ₹೨೫ ಕೋಟಿ ಮೇಲ್ಪಟ್ಟು ವಹಿವಾಟು ಇದ್ದರೆ ಪ್ರಾಜೆಕ್ಟ್ ಅನುಮೊದನೆಯಾಗಲಿದೆ.ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ದಿನೇಶ ಮಾತನಾಡಿ, ತಾಲೂಕಿನ 41500 ಜಾನುವಾರುಗಳಿಗೆ ಕಾಲುಬಾಯಿ ಪ್ರತಿಬಂಧಕ ಲಸಿಕಾ ಹಾಕಲಾಗುತ್ತದೆ. 42 ಲಸಿಕಾರಾರನ್ನು ನೇಮಕ ಮಾಡಲಾಗಿದೆ. ಶಾಲಾ-ಕಾಲೇಜುಗಲ್ಲಿ ಶಿಬಿರ ಏರ್ಪಡಿಸಿ, ರೇಬಿಸ್ ರೋಗದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಕೃಷಿ ಇಲಾಖೆಯ ಮಧುಕರ ನಾಯ್ಕ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 3381 ಮಿ.ಮೀ ಮಳೆಯಾಗಿ ಶೇ.೪೫ ರಷ್ಟು ಅಧಿಕ ಮಳೆಯಾಗಿದೆ. ರಸಗೊಬ್ಬರ ದಾಸ್ತಾನಿಗೆ ವಿಶೇಷ ಕ್ರಮ ವಹಿಸಲಾಗಿದೆ. ಭತ್ತದ ಕಟಾವು ಪ್ರಾರಂಭಗೊಂಡಿದ್ದು, ಅಕಾಲಿಕ ಮಳೆಯಿಂದ ಹಾನಿ ಪ್ರಮಾಣ ಕಡಿಮೆ ಇದೆ ಎಂದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ ಮಾತನಾಡಿ, ಕಳೆದ 2 ತಿಂಗಳ ಮಾತ್ರ ಗೃಹಲಕ್ಷ್ಮೀ ಹಣ ಬಾಕಿ ಇದೆ. ಶಿಕ್ಷಣ ಇಲಾಖೆಯ ಜಾಗದಲ್ಲಿ 14 ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.ವಸತಿ ನಿಲಯಗಳಲ್ಲಿ ಬಾಲಕಿಯರ ಒತ್ತಡ ಹೆಚ್ಚಿದ್ದು, ಹೊಸ ಕಟ್ಟಡಕ್ಕೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿರಸಿ, ಬನವಾಸಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಣೆಯಾಗುತ್ತಿದ್ದು, ಅಲ್ಲಿ ಮೂಲಸೌಕರ್ಯ ಒದಗಿಸಲು ಸಮಸ್ಯೆಯಾಗುತ್ತಿದೆ. ಕೆಎಎಸ್, ಐಎಎಸ್ ಕೊಚಿಂಗ್ ಸೆಂಟರ್‌ಗೆ ಅರ್ಜಿ ಸಲ್ಲಿಸಲು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದೇವೆ. ವಸತಿ ನಿಲಯ ವಂಚಿತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಲ್ಲಿ ಅನುಕೂಲ ಮಾಡಿದ್ದೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಸಾದ ಆಲದಕಟ್ಟಿ ಮಾಹಿತಿ ನೀಡಿದರು.

ಸರ್ಕಾರದ ಮಾರ್ಗಸೂಚಿಯಂತೆ 570 ಬಿಪಿಎಲ್‌ ಕಾರ್ಡ್‌ ಎಪಿಎಲ್‌ ಕಾರ್ಡ್‌ಗಳಾಗಿವೆ. ಆದಾಯಕ್ಕಿಂತ ಹೆಚ್ಚಿರುವವರು ಸ್ವಯಂ ಆಗಿ ಇಲಾಖೆಗೆ ಆಗಮಿಸಿ, ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿ ತಿಳಿಸಿದರು.ಆಯುಷ್‌, ಅರಣ್ಯ, ಆರ್‌ಡಿಪಿಆರ್, ಸಣ್ಣನೀರಾವರಿ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ನಿಗಮ, ಅಗ್ನಿಶಾಮಕ, ಪೊಲೀಸ್‌, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ತಮ್ಮ ವರದಿ ಮಂಡಿಸಿದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಇದ್ದರು.