ಅರ್ಹರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲು ಶಾಸಕ ಲಮಾಣಿ ಸೂಚನೆ

| Published : May 05 2025, 12:48 AM IST

ಅರ್ಹರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲು ಶಾಸಕ ಲಮಾಣಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿಯ ಫಲಾನುಭವಿಗಳಿಗೆ ಸರಕಾರ ನೀಡಿರುವಂತಹ ಹಕ್ಕುಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ೧೫ ದಿನಗಳಲ್ಲಿ ವಿತರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿರಹಟ್ಟಿ: ಶಿರಹಟ್ಟಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿಯ ಫಲಾನುಭವಿಗಳಿಗೆ ಸರಕಾರ ನೀಡಿರುವಂತಹ ಹಕ್ಕುಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ೧೫ ದಿನಗಳಲ್ಲಿ ವಿತರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ಪಟ್ಟಣದ ತಾಲೂಕು ಪಂಚಾಯತ ಕಚೇರಿಯಲ್ಲಿ ಕಂದಾಯ, ಪಿಆರ್‌ಇಡಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಫಲಾನುಭವಿಗಳಿಂದ ಹಣ ಪಡೆಯುವುದಾಗಲಿ, ಅರ್ಹರಲ್ಲದವರನ್ನು ಗುರತಿಸುವಂತಹ ಕೆಲಸ ಅಧಿಕಾರಿಗಳಿಂದ ಆಗಬಾರದು. ಇಂತಹ ಆರೋಪ ನನ್ನ ಗಮನಕ್ಕಕೆ ಬರದಂತೆ ಜವಾಬ್ದಾರಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕರೆ ನಿಡಿದರು. ನಾನು ಕ್ಷೇತ್ರದ ಜನರಿಂದ ಆಶೀರ್ವಾದ ಮಾತ್ರ ಬಯಸುತ್ತೇನೆ. ನಾನೊಬ್ಬ ಸೇವಕನೇ ಹೊರತು ಮಾಲೀಕನಲ್ಲ. ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಹೊಣೆಗಾರಿಕೆ ನನ್ನದು. ಯಾರೊಬ್ಬರೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗಳಿಗೆ ಅಲೆದಾಡುವಂತಾಗಬಾರದು ಎಂದು ಸೂಚನೆ ನೀಡಿದರು.

ಸುಮಾರು ವರ್ಷಗಳಿಂದ ವಿವಿಧ ಹಂತದ ಅಧಿಕಾರಿಗಳ ಬಳಿ ವಿಲೇವಾರಿಯಾಗದೇ ವಿಳಂಬವಾಗುತ್ತಿರುವ ಬಗ್ಗೆ ಗಮನಕ್ಕೆ ಇದೆ. ಗ್ರಾಮೀಣ ಭಾಗದ ಬಡ ಕುಟುಂಬದ ಜನರು ಸರ್ಕಾರಿ ಯೋಜನೆಯಿಂದ ವಂಚಿತರಾಗಬಾರದು. ಅಂತಹ ಬಡ ಕುಟುಂಬಗಳನ್ನು ಪತ್ತೆ ಮಾಡಿ ಹಕ್ಕುಪತ್ರ ನೀಡಬೇಕು ಎಂದರು. ಬಹಳ ವರ್ಷಗಳಿಂದ ನೆನಗುದಿಗೆ ಬಿದ್ದಿರುವಂತಹ ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಲ್ಲಿ ಈಗಾಗಲೇ ಸರಕಾರ ಖರೀದಿಸಿರುವಂತಹ ಜಮೀನುಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮುಂಬರುವ ೧೫ ದಿನಗಳಲ್ಲಿ ಹಕ್ಕು ಪತ್ರ ವಿತರಿಸಲು ಕ್ರಮ ಕೈಕೊಳ್ಳಬೇಕೆಂದು ತಾಕೀತು ಮಾಡಿದರು. ತಾಲೂಕಿನ ಛಬ್ಬಿ ಗ್ರಾಮ ಪಂಚಾಯತ ವ್ಯಾಪ್ತಿಯ ಛಬ್ಬಿ ಗ್ರಾಮದಲ್ಲಿ ೨೧೮, ಗುಡ್ಡದಪೂರ ಗ್ರಾಮದಲ್ಲಿ ೧೧೬, ವಡವಿ ಗ್ರಾಮ ಪಂಚಾಯತಿಯ ಬೆಳಗಟ್ಟಿ ಗ್ರಾಮದಲ್ಲಿ ೯೭, ಕೊಂಚಿಗೇರಿ ಗ್ರಾಮದ ೧೩೨, ಮಜ್ಜೂರ ಗ್ರಾಮದ ೧೦೪, ಪರಸಾಪೂರ ಗ್ರಾಮದ ೧೧೯ ಅರ್ಹ ಫಲಾನುಭವಿಗಳಿಗೆ ಸರಕಾರ ಕೊಡ ಮಾಡುವಂತಹ ಹಕ್ಕುಪತ್ರಗಳನ್ನು ಶೀಘ್ರ ವಿತರಿಸಬೇಕು. ಇದಕ್ಕೆ ಯಾವುದೇ ತಾಂತ್ರಿಕ ಕಾರಣಗಳನ್ನು ನೀಡದೇ ಫಲಾನುಭವಿಗಳಿಗೆ ನಿಯಮಾನುಸಾರ ಹಕ್ಕುಪತ್ರ ತಲುಪಿಸುವ ಕೆಲಸವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸವನ್ನು ಪೂರ್ಣಗೊಳಿಸಬೇಕು. ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಪಿಡಿಓಗಳು ಶೀಘ್ರದಲ್ಲಿಯೇ ಹಕ್ಕುಪತ್ರ ಪಡೆಯುವ ಫಲಾನುಭವಿಗಳ ಆಯ್ಕೆಪಟ್ಟಿಯನ್ನು ತಾಲೂಕು ಪಂಚಾಯಿತಿಗೆ ತಲುಪಿಸಬೇಕು. ಇದರಲ್ಲಿ ಯಾವುದೇ ಲೋಪದೋಷವಾದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು. ತಹಸೀಲ್ದಾರ್ ಅನಿಲ ಬಡಿಗೇರ, ತಾಪಂ ಇಓ ಆರ್.ವಿ. ದೊಡ್ಡಮನಿ, ಪಿಡಿಓಗಳು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.