ಮೋಹನ್ ರಾಜ್

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಚುರುಕುಗೊಂಡಿರುವ ವಿಶೇಷ ಮತದಾರರ ಸಂಕ್ಷಿಪ್ತ ಪರಿಷ್ಕರಣೆ -ಎಸ್‌ಐಆರ್‌ ಅರ್ಜಿ ವಿತರಣಾ ಕಾರ್ಯದಲ್ಲಿ ಅಧಿಕಾರಿಗಳ ಜೊತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.ಜಿಲ್ಲಾಡಳಿತವು ಮನೆ-ಮನೆಗೆ ತೆರಳಿ ಮತದಾರರ ಪಟ್ಟಿ ಪರಿಶೀಲನೆ ಮತ್ತು ಅರ್ಜಿ ವಿತರಣೆ ಮಾಡುತ್ತಿದ್ದರೂ, ಹಲವು ಕಡೆಗಳಲ್ಲಿ ಗ್ರಾಪಂ, ತಾಪಂ ಸದಸ್ಯರಾಗಿದ್ದವರು ಹಾಗೂ ಪಕ್ಷದ ಕಾರ್ಯಕರ್ತರು ಅಧಿಕಾರಿಗಳ ಜೊತೆಗೇ ಓಡಾಡುತ್ತಿರುವುದು ಕಂಡುಬಂದಿದೆ.ಸಾರ್ವಜನಿಕರ ದೂರು ಏನು?:

ಪಕ್ಷಪಾತದ ಆರೋಪ: ಕೆಲವು ಕಡೆ ನಿರ್ದಿಷ್ಟ ಪಕ್ಷಕ್ಕೆ ಸೇರಿದವರಿಗೆ ಮಾತ್ರ ಮೊದಲು ಅರ್ಜಿ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ.

ಜತೆಗೆ ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ‘ಯಾರ ಮೂಲಕ ಅರ್ಜಿ ಕೊಡಬೇಕು’ ಎಂಬ ಗೊಂದಲವಿದೆ. ಅರ್ಜಿ ಪರಿಶೀಲನೆ ವೇಳೆ ಪಕ್ಷದ ಮುಖಂಡರು ಮಧ್ಯಪ್ರವೇಶಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ವಾಜನಿಕರು, ಇದು ಸರ್ಕಾರಿ ಕೆಲಸ. ಅಧಿಕಾರಿಗಳೇ ಬಂದು ಮಾಡಬೇಕು. ಪಕ್ಷದವರು ಯಾಕೆ ಜೊತೆ ಬರ್ತಾ ಇದ್ದಾರೆ ಎಂದು ಪ್ರಶ್ನಿಸಿದ್ದಾರಲ್ಲದೆ. ಎಲ್ಲರ ಓಡಾಟದಿಂದ ನಮಗೆ ಈಗಾಗಲೇ ಗೊಂದಲವಾಗಿದೆ ಎಂದಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ. ಮತದಾರರಿಗೆ ಸಹಾಯಕ್ಕಾಗಿ ಸ್ಥಳೀಯ ಪ್ರತಿನಿಧಿಗಳನ್ನು ಕರೆದೊಯ್ಯಲಾಗಿದೆ. ಯಾವುದೇ ಪಕ್ಷಪಾತ ಇಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದರೂ ಸಾರ್ವಜನಿಕರಲ್ಲಿ ಈಗಾಗಲೇ ಅನುಮಾನ ಮೂಡಿದೆ. ಚುನಾವಣಾ ಆಯೋಗವು ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸಬೇಕಂಬ ಒತ್ತಾಯ ಕೇಳಿಬಂದಿದೆ. ಬಿಎಲ್‌ಒಗಳೇ ಅಧಿಕೃತ:


ಎಸ್‌ಐಆರ್‌ ಮತದಾರರ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ರಾಜಕೀಯ ಮುಖಂಡರ ಹಸ್ತಕ್ಷೇಪದ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.ಈ ಪ್ರಕ್ರಿಯೆಯಲ್ಲಿ ಆಯಾ ಗ್ರಾಮದ ಬಿಎಲ್‌ಒಗಳೇ ಖುದ್ದು ಮನೆ-ಮನೆಗೆ ತೆರಳಿ ಮತದಾರರ ಪರಿಷ್ಕರಣೆ ಅರ್ಜಿಯನ್ನು ವಿತರಿಸಿ ಮನೆ ಬಾಗಿಲಿಗೆ ಸ್ಟಿಕರ್ ಅಂಟಿಸಬೇಕು. ಕೆಲ ದಿನಗಳ ಬಳಿಕ ಅದೇ ಅರ್ಜಿಗಳನ್ನು ಭರ್ತಿ ಮಾಡಿ, ಫೋಟೋ ಸಹಿತ ವಾಪಸ್ ಪಡೆದುಕೊಂಡು ಮತ್ತೊಂದು ಸ್ಟಿಕರ್ ಅಂಟಿಸಲು ಸೂಚಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.ಎಸ್‌ಐಆರ್‌ ಅರ್ಜಿ ವಿತರಣಾ ಸಂದರ್ಭದಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು, ಮುಖಂಡರಿಗೆ ಮಧ್ಯಪ್ರವೇಶಿಸಲು ಅಥವಾ ಅರ್ಜಿ ವಿತರಿಸಲು ಅವಕಾಶವಿಲ್ಲ. ಅನಧಿಕೃತವಾಗಿ ಯಾರಾದರೂ ಪಾಲ್ಗೊಂಡರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು -ಸೋಮಶೇಖರ್ ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆ

ಚುನಾವಣಾ ಆಯೋಗದ ಆದೇಶದ ಮೇರೆಗೆ ಬಿಎಲ್‌ಒಗಳನ್ನು ಮಾತ್ರ ನೇಮಕ ಮಾಡಲಾಗಿದೆ. ಅವರು ಮಾತ್ರ ಅರ್ಜಿ ವಿತರಿಸುವುದು ಹಾಗೂ ಹಿಂಪಡೆದುಕೊಳ್ಳಬೇಕು. ರಾಜಕೀಯ, ಪಕ್ಷಗಳ ಪ್ರಮುಖರು ಅರ್ಜಿ ಸಲ್ಲಿಸಿ, ವಿತರಿಸಲು ಅಥವಾ ಫೋಟೋ ತೆಗೆದುಕೊಳ್ಳಲು ಅವಕಾಶವಿಲ್ಲ. ಎಲ್ಲಿಯಾದರೂ ಇಂತಹ ಪ್ರಸಂಗ ಕಂಡುಬಂದರೆ ಆಧಾರ ಸಹಿತ ಮಾಹಿತಿ ನೀಡಿ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. -ಅನಿಲ್ ಕುಮಾರ್, ಆರ್‌ಐ ಉಪ ತಹಸೀಲ್ದಾರ್ ಅಮ್ಮತ್ತಿ