ಕನ್ನಡಪ್ರಭ ವಾರ್ತೆಚಳ್ಳಕೆರೆ

ಗ್ರಾಮೀಣ ಮಟ್ಟದಿಂದ ಭಾರತೀಯ ಜನತಾ ಪಕ್ಷವನ್ನು ಸಂಘಟಿಸಲು ಪಕ್ಷದ ಎಲ್ಲಾ ಪ್ರಮುಖರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಶಿಕ್ಷಣ ಸಭೆ ಹಾಗೂ ಬಿಜೆಪಿ ಸಂಸ್ಥಾಪನಾ ದಿನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮತದಾರರು ಇದ್ದಾರೆ. ಅವರನ್ನು ಹೆಚ್ಚು ಭೇಟಿ ಮಾಡಬೇಕು. ಚುನಾವಣೆ ಸಮಯದಲ್ಲಿ ಮಾತ್ರ ಸಭೆ ಸಮಾರಂಭಗಳನ್ನು ಆಯೋಜಿಸುವುದರಿಂದ ಪ್ರಯೋಜನವಿಲ್ಲ. ನಿರಂತರವಾಗಿ ಜನರ ಸಂಪರ್ಕವನ್ನು ಮುಖಂಡರನ್ನು ಇಟ್ಟುಕೊಂಡಾಗ ಮಾತ್ರ ಪಕ್ಷ ಕಟ್ಟಲು ಅನುಕೂಲವಾಗುತ್ತದೆ ಎಂದರು.

ಶೀಘ್ರ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗುತ್ತವೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪ್ರಾಬಲ್ಯ ಮೆರೆಯಲೇಬೇಕು. ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಸದೃಡವಾಗಿ ಕಟ್ಟಲು ಈ ಚುನಾವಣೆಗಳು ಸಹಕಾರಿಯಾಗುತ್ತವೆ. ಪಕ್ಷದ ಕಾರ್ಯಕರ್ತರು ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಬೇಕೆಂದು ಮಂಜುನಾಥ್ ಮನವಿ ಮಾಡಿದರು.

ಚಳ್ಳಕೆರೆ ವಿಧಾನಸಭಾ ಉಸ್ತುವಾರಿ ಬಿಜೆಪಿ ಪಕ್ಷದ ಕಾರ್ಯಕಾರಿ ಸದಸ್ಯರಾದ ಬಾಳೆಕಾಯಿ ರಾಮ್ ದಾಸ್ ಮಾತನಾಡಿ, ಎಲ್ಲಾ ಜನವರ್ಗಗಳಿಗೂ ಭಾರತೀಯ ಜನತಾ ಪಕ್ಷ ಪ್ರಾತಿನಿಧ್ಯ ನೀಡಿದೆ. ಸ್ವಾತಂತ್ರ್ಯ ಬಂದು ಐವತ್ತು ವರ್ಷ ಆಡಳಿತ ನಡೆಸಿದವರು ಇನ್ನೂ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷ ಸಣ್ಣ ಸಮುದಾಯಗಳಿಗೂ ಸೂಕ್ತ ನ್ಯಾಯ ಒದಗಿಸಿದ ಕೀರ್ತಿಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.


ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಬಿ.ಎಂ.ಸುರೇಶ್ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಎಸ್.ಆರ್.ಗಿರೀಸ್, ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಿ.ಎಚ್ ಮೋಹನ್ ಕುಮಾರ್ , ಜಿಲ್ಲಾ ಕಾರ್ಯದರ್ಶಿ ಕಾಲುವೆಹಳ್ಳಿ ಪಾಲಯ್ಯ, ಮಂಡಲ ಉಪಾಧ್ಯಕ್ಷ ಮಂಜುನಾಥ್ ರೆಡ್ಡಿ, ಬಿಜೆಪಿ ವಿಧಾನ ಸಭಾ ಕ್ಷೇತ್ರದ ಬಿಎಲ್ಓ ದಯಾನಂದ, ರುದ್ರಮುನಿ, ಸಿದ್ದೇಶ್, ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಮೀರಾಸಾಬಿಹಳ್ಳಿ ಸುರೇಶ್, ಓಬಳೇಶ್, ಖಜಾಂಚಿ ಬಿ.ಎಂ ಶ್ರೀನಿವಾಸ್, ಅಂಬಿಕಾ, ಅಶೋಕ್, ನಗರ ಘಟಕದ ಅಧ್ಯಕ್ಷ ಕೃಷ್ಣಪ್ಪ, ಡಾ.ರಾಮರಾಜು, ಎಸ್ಸಿ ಮೋರ್ಚಾ ಅಧ್ಯಕ್ಷ, ವೀರಭದ್ರಪ್ಪ, ಎಸ್ಟಿ ಮೋರ್ಚಾ ಅಧ್ಯಕ್ಷ ದೊರೆ ನಾಗರಾಜು, ನಾಗರಾಜು, ಮಲ್ಲಿಕಾರ್ಜುನ, ಜಗದಾಂಭ, ಸಹನಾ, ಹಿಂದುಳಿದ ಮೋರ್ಚಾ ಅಧ್ಯಕ್ಷ ಶಶ್ರೀನಿವಾಸ್, ಮುಖಂಡರಾದ ಕಾಟಯ್ಯ, ಶೋಭರಾಜ್, ಶಾಂತಣ್ಣ, ತಿಪ್ಪೇಸ್ವಾಮಿ, ಹರೀಶ್ ಇದ್ದರು.