ಕನ್ನಡಪ್ರಭ ವಾರ್ತೆ ಸವದತ್ತಿ

ತಾಲೂಕಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ವಿಶಿಷ್ಟ ಸಾಧನೆ ಮಾಡುತ್ತಿದ್ದು, ಈ ಬಾರಿಯೂ ಜಿಲ್ಲೆಗೆ ಸವದತ್ತಿ ತಾಲೂಕು ೩ನೇ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ವಿಶ್ವಾಸ ವೈದ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಶಾಸಕರು ತಮ್ಮ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು. ತಾಲೂಕಿನಾದ್ಯಂತ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದುಕೊಂಡಿದ್ದಾರೆ. ಈ ಬಾರಿ ಶೇ.೯೫.೭೭ರಷ್ಟು ಫಲಿತಾಂಶ ಬಂದಿರುವುದು ಖುಷಿಯ ವಿಷಯ. ಮುಂದಿನ ವರ್ಷಗಳಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರುವಂತೆ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, ಒಟ್ಟು ಪರೀಕ್ಷೆ ಬರೆದ ೫೦೬೩ ವಿದ್ಯಾರ್ಥಿಗಳಲ್ಲಿ ೪೮೪೯ ವಿದ್ಯಾರ್ಥಿಗಳು ಉತೀರ್ಣರಾಗಿದ್ದು, ಜಿಲ್ಲಾ ಹಂತದಲ್ಲಿ ಸವದತ್ತಿ ತಾಲೂಕು ಮೂರನೇ ಸ್ಥಾನದಲ್ಲಿದೆ. ೪೪೯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೮೮೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೯೩೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ೨೫೭೮ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ೭೮ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ ಎಂದರು.೬೧೯(ಶೇ.೯೯.೦೪) ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕಿಟದಾಳ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಅಡವೇಶ ಬೈಲವಾಡ, ೬೧೮(ಶೇ.೯೮.೮೮) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಸವದತ್ತಿಯ ಕುಮಾರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅಮೋಘ ಫಕೀರಪ್ಪ ನವಲಗುಂದ, ೬೧೭ (ಶೇ.೯೮.೭೨) ಅಂಕ ಪಡೆದ ಹೊಸೂರು ಗ್ರಾಮದ ಎಸ್.ಎಸ್.ವಿ.ವಿ.ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಾ ಮಡಿವಾಳಪ್ಪ ಹೊಂಗಲ ಹಾಗೂ ಶಿವಾಪೂರ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿನಿ ರೇಣುಕಾ ಪ್ರವೀಣ ನರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ತಾಪಂ ಇಒ ಆನಂದ ಬಡಕುಂದ್ರಿ, ಪ್ರಶಾಂತ ಹಂಪಣ್ಣವರ, ಕಿರಣ ಕುರಿ, ಗಿರೀಶ ಮುನವಳ್ಳಿ, ಬಿಇಒ ಎ.ಎ.ಖಾಜಿ, ರವಿ ನಲವಡೆ, ಎಂ.ಬಿ.ಚುಂಚನೂರ, ಅಶ್ವತ ವೈದ್ಯ, ಸುರೇಶ ತುಪ್ಪದ, ಸುಧೀರ ವಾಘೇರಿ, ಎಫ್.ಜಿ.ನವಲಗುಂದ, ಸುರೇಶ ಬೆಟಗೇರಿ, ಪ್ರಕಾಶ ಹೆಮ್ಮರಡಿ, ರಾಮಣ್ಣ ಗುಡಗಾರ, ನಾಗರಾಜ ಚಂದರಗಿ ಇತರರು ಉಪಸ್ಥಿತರಿದ್ದರು.