ಕನ್ನಡಪ್ರಭ ವಾರ್ತೆ ಮೈಸೂರು

ಮನೆಯಲ್ಲಿ ಯಾರು ಇಲ್ಲದ ವೇಳೆ ಕೀಗಳನ್ನು ಹುಡುಕಿಕೊಂಡು ಪಕ್ಕಾ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಸೂರು ತಾಲೂಕಿನ ಜಯಪುರ ಠಾಣೆ ಪೊಲೀಸರು, 65.20 ಲಕ್ಷ ಮೌಲ್ಯದ 498 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಹಾಸನ ಜಿಲ್ಲೆ ಆಲೂರು ತಾಲೂಕು ಮುದಿಗೆರೆ ಗ್ರಾಮದ ವೆಂಕಟೇಶ್ ಎಂಬವರ ಪುತ್ರ ಎಂ.ವಿ. ರಂಗೇಗೌಡ ಅ. ಸಂತೋಷ (39) ಬಂಧಿತ ಆರೋಪಿ. ಮನೆಗಳ್ಳತನ ಮಾಡುತ್ತಿದ್ದ ಈತನನ್ನು ಪೊಲೀಸರು ಪತ್ತೆ ಹಚ್ಚಿ, ಜಿಲ್ಲಾ ವ್ಯಾಪ್ತಿಯ 8 ಠಾಣೆಗಳಲ್ಲಿನ ಕಳವು ಪ್ರಕರಣ ಪತ್ತೆ ಹಚ್ಚಿದ್ದಾರೆ.ಮೈಸೂರು ತಾಲೂಕಿನ ಮಾರ್ಬಳ್ಳಿಹುಂಡಿ ಗ್ರಾಮದ ಅನಿತಾ ಅವರ ಮನೆಯಲ್ಲಿ ಜೂ.18 ರಂದು 58 ಗ್ರಾಂ ತೂಕದ ಮುತ್ತಿನ ಚಿನ್ನದ ನೆಕ್ಲೆಸ್‌, 10 ಗ್ರಾಂ ತೂಕದ ಓಲೆ, ಜುಮುಕಿ ಕಳುವಾಗಿತ್ತು. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಎಪಿಎಂಸಿ ಸಮೀಪ ಬಂಧಿಸಿ, ವಿಚಾರಣೆ ನಡೆಸಿದಾಗ ಜಿಲ್ಲಾ ವ್ಯಾಪ್ತಿಯಲ್ಲಿ 8 ಕಳವು ಪ್ರಕರಣ ಪತ್ತೆಯಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪೆಟ್ರೋಲ್‌ ಬಂಕ್‌ ಸಿಸಿಟಿವಿಯಲ್ಲಿ ಆರೋಪಿ ಪೆಟ್ರೋಲ್‌ ಹಾಕಿಸಿಕೊಂಡಿರುವುದು ಗೊತ್ತಾಯಿತು. ಆದರೆ ನಂಬರ್‌ ಪ್ಲೇಟ್‌ ಅಸ್ಪಷ್ಟವಾಗಿತ್ತು. ತಂತ್ರಜ್ಞಾನ ಬಳಸಿ ಸ್ಪಷ್ಟ ಮಾಹಿತಿ ಪಡೆದು, ಆರೋಪಿಯನ್ನು ಬಂಧಿಸಿ, 65.20 ಲಕ್ಷ ಮೌಲ್ಯದ 498 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದೇವೆ ಎಂದರು.ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಕಳವಾದ ವಸ್ತುವನ್ನು ಹಾಸನದ ದೊಡ್ಡ ಗಡಿಯಾರ ಬೀದಿಯಲ್ಲಿ ಚಿನ್ನ ಬೆಳ್ಳಿ ಕೆಲಸ ಮಾಡುವ 3- 4 ಜನರಿಗೆ ಮಾರಾಟ ಮಾಡಿ ಹಣ ಪಡೆದಿರುವುದು ಗೊತ್ತಾಗಿದೆ. ಬಂಧಿತನಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಜಯಪುರದ 2, ಹುಣಸೂರು ಗ್ರಾಮಾಂತರ 2, ಇಲವಾಲ, ಮೈಸೂರು ದಕ್ಷಿಣ, ಬನ್ನೂರು, ಸಾಲಿಗ್ರಾಮ ಠಾಣೆಯಲ್ಲಿ ತಲಾ ಒಂದು ಮನೆ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ 17 ಪ್ರಕರಣ ದಾಖಲಾಗಿವೆ ಎಂದು ಅವರು ವಿವರಿಸಿದರು.ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಟಿ.ಬಿ. ರಾಜಣ್ಣ ಮಾರ್ಗದರ್ಶವದಲ್ಲಿ ಸಿಪಿಐ ಡಿ.ಬಿ. ಜಯಪ್ರಕಾಶ್‌, ಜಯಪುರ ಠಾಣೆ ಎಸ್ಐ ಪ್ರಕಾಶ್‌ ಎತ್ತಿನಮನಿ, ಸಿಬ್ಬಂದಿ ಪಚ್ಚೇಗೌಡ, ಕೆ.ಎಸ್. ಆನಂದ, ಜಿ.ಎಸ್. ರವಿ, ಕೆ.ಬಿ. ಗಿರೀಶ್‌ ಕುಮಾರ್‌‌ ಎಂ.ಯು. ದಿಲೀಪ್‌, ಎಂ. ಹರೀಶ, ನಿಂಗಣ್ಣ ಶರಣಪ್ಪ, ಕೆ.ಆರ್. ರಾಜೇಂದ್ರ, ಅರುಣೇಶ್‌, ಮಹದೇವಸ್ವಾಮಿ ಈ ಪತ್ತೆ ಮಾಡಿದ್ದಾರೆ.