ಸಾರಾಂಶ
ಅನುಗೊಂಡಹಳ್ಳಿ ಹೋಬಳಿಯ ಮತ್ಸಂದ್ರ ಗ್ರಾಪಂ ವ್ಯಾಪ್ತಿಯ ಕೋಟೂರಿನ ಬಸವೇಶ್ವರ, ವೇಣುಗೋಪಾಲ, ಆಂಜನೇಯ, ಓಂಶಕ್ತಿ ದೇವರಿಗೆ ಬೆಲ್ಲದ ದೀಪೋತ್ಸವ, ಅಣ್ಣಮ್ಮದೇವಿ, ಕಾವೇರಮ್ಮ, ಸಪಲಮ್ಮ, ಕಾಳಮ್ಮ, ಮಾರಮ್ಮ, ಮುನೇಶ್ವರಸ್ವಾಮಿ ದೇವರಿಗೆ ದೀಪೋತ್ಸವ, ಪಲ್ಲಕ್ಕಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸುಮಾರು 13 ವರ್ಷಗಳ ಹಿಂದೆ ನಿಂತಿದ್ದ ಕೋಟೂರು ಗ್ರಾಮ ದೇವತೆಗಳ ಊರಹಬ್ಬವನ್ನು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು.ತಾಲೂಕಿನ ಅನುಗೊಂಡಹಳ್ಳಿ ಹೋಬಳಿಯ ಮತ್ಸಂದ್ರ ಗ್ರಾಪಂ ವ್ಯಾಪ್ತಿಯ ಕೋಟೂರಿನ ಬಸವೇಶ್ವರ, ವೇಣುಗೋಪಾಲ, ಆಂಜನೇಯ, ಓಂಶಕ್ತಿ ದೇವರಿಗೆ ಬೆಲ್ಲದ ದೀಪೋತ್ಸವ, ಅಣ್ಣಮ್ಮದೇವಿ, ಕಾವೇರಮ್ಮ, ಸಪಲಮ್ಮ, ಕಾಳಮ್ಮ, ಮಾರಮ್ಮ, ಮುನೇಶ್ವರಸ್ವಾಮಿ ದೇವರಿಗೆ ದೀಪೋತ್ಸವ, ಪಲ್ಲಕ್ಕಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಮೂರು ದಿನಗಳ ಕಾಲ ಹಲವು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಗ್ರಾಮ ದೇವತೆಗಳಾದ ಕಾಳಮ್ಮ, ಕಾವೇರಮ್ಮ ಹಾಗೂ ಮುನೇಶ್ವರ ದೇವರಿಗೆ ದೀಪೋತ್ಸವದ ಆರತಿ ಬೆಳಗಿ ದೇವರ ದರ್ಶನ ಪಡೆದರು. ಗ್ರಾಪಂ ಸದಸ್ಯ ಪೂಜಪ್ಪ ಮಾತನಾಡಿ, ಈ ಗ್ರಾಮ ದೇವತೆಗಳ ಹಬ್ಬವನ್ನು ಕಳೆದ 13 ವರ್ಷಗಳಿಂದ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಪಕ್ಷಾತೀತವಾಗಿ, ಜಾತ್ಯತೀತವಾಗಿ ಗ್ರಾಮಸ್ಥರೆಲ್ಲ ಒಟ್ಟು ಗೂಡಿ ಆಚರಣೆ ಮಾಡುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರ ಜಿಲ್ಲೆ ಸೇರಿ ಮೈಸೂರು ಭಾಗಗಳಿಂದ ಸುಮಾರು 1ಲಕ್ಷಕ್ಕೂ ಹೆಚ್ಚಿನ ಜನರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ ಎಂದರು.ಕೋಟೂರು ಮುಖಂಡರಾದ ವೇಣುಗೋಪಾಲ್, ಅರುಣ್ ಕುಮಾರ್, ಪವನ್ ಹಾಜರಿದ್ದರು.