ಸಾರಾಂಶ
ದಾವಣಗೆರೆ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನ ಖಂಡಿಸಿ ದೇಶಾದ್ಯಂತ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವ ಎಎಪಿ ಕರೆಯ ಮೇರೆಗೆ ದಾವಣಗೆರೆ ಜಿಲ್ಲಾ ಆಮ್ ಆದ್ಮಿ ಪಕ್ಷದಿಂದ ಭಾನುವಾರ ಜಿಲ್ಲಾಡಳಿತ ಭವನ ಮುಂಭಾಗ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಮಾತನಾಡಿ, ಎಎಪಿಯಿಂದ ದೇಶದಲ್ಲಿ ಮಾತ್ರವಲ್ಲದೇ ಅಮೆರಿಕ, ಕೆನಡಾ ಸೇರಿ ಇತರೆ ದೇಶದಲ್ಲೂ ಕೂಡ ಇಂದು ಕೇಜ್ರಿವಾಲ್ ಬಂಧನ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದು, ಸಾಮಾನ್ಯ ಜನರ ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದರು.
ವಿರೋಧ ಪಕ್ಷದ ನಾಯಕರನ್ನ ಬಂಧಿಸುವ ಮೂಲಕ ನಿಷ್ಪಕ್ಷವಾದ ಚುನಾವಣೆಯನ್ನು ನಡೆಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಜನರ ಆಯ್ಕೆಗಳ ಹೇರಿಕೆಯನ್ನು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಇಡಿ ಸಿಬಿಐ ಐಟಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಕೆಲಸಗಳು ನಡೆಯುತ್ತಿವೆ. ಹಾಗೆಯೇ ಸಂವಿಧಾನ ಆಶಯಗಳನ್ನು ಧಿಕ್ಕರಿಸಿ ತಮ್ಮದೇ ವಿರೋಧ ನೀತಿಗಳ ಮೂಲಕ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.
ದೇಶದ ಯುವಕರಿಗೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಬಡವರಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಯುತ್ತಿದ್ದಾರೆ. ಉದ್ಯೋಗ ಮಾಡುವ ಜನರಿಗೆ ಸರಿಯಾದ ಅವಕಾಶಗಳು ಇಲ್ಲದೆ ಹಲವಾರು ಕೈಗಾರಿಕೆಗಳು ನಷ್ಟದ ಹಾದಿ ಹಿಡಿಯುತ್ತಿದೆ. ಬಡತನ ಹೆಚ್ಚಾಗಿದೆ. ಆದರೂ ಕೂಡ ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಬಂಧಿಸುವಲ್ಲಿ ಮುಳುಗಿದೆ. ಈ ನಿಟ್ಟಿನಲ್ಲಿ ಕೂಡಲೇ ಅರವಿಂದ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಬೇಕು ಹಾಗೂ ನಿಷ್ಪಕ್ಷವಾಗಿ ದೇಶಾದ್ಯಂತ ಚುನಾವಣೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ಅರುಣ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಕೆ. ಆದಿಲ್ ಖಾನ್, ಕಾರ್ಯದರ್ಶಿಗಳಾದ ಕೆ. ರವೀಂದ್ರ, ಸುರೇಶ್, ಎಸ್.ಸಿ.ಸಿಡ್ಲಪ್ಪ, ಲಕ್ಷ್ಮಣ ನಾಯ್ಕ್ ಎಸ್ಟಿ ಘಟಕದ ಅಧ್ಯಕ್ಷ ಧರ್ಮಾ ನಾಯ್ಕ್, ಹರಿಹರ ತಾಲೂಕು ಅಧ್ಯಕ್ಷ ಜಿ.ಹೆಚ್. ಬಸವರಾಜ್, ಮಹಮ್ಮದ್ ಯೂಸೂಫ್, ಮಲ್ಲೇಶ್ ಭಾಗವಹಿಸಿದ್ದರು.
.