ಕನ್ನಡಪ್ರಭವಾರ್ತೆ ತಿಪಟೂರು
ಸರ್ಕಾರಗಳು ಜನರ ಸೇವೆಗಾಗಿ ಹಾಗೂ ಅಭಿವೃದ್ಧಿಗಾಗಿ ಮಾಡಬೇಕಾದ ಪ್ರಮುಖ ಯೋಜನೆಗಳು ಹಾಗೂ ಕೆಲಸ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯರೂಪಕ್ಕೆ ತರುತ್ತಿರುವುದು ಸಂತಸಪಡಬೇಕಾದ ವಿಷಯ ಎಂದು ಶಾಸಕ ಕೆ.ಷಡಕ್ಷರಿ ಅಭಿಪ್ರಾಯಪಟ್ಟರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕಿನ ಕರೀಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ೧೭ ಲಕ್ಷ ರು. ವೆಚ್ಚದ ದೊಡ್ಡಕಟ್ಟೆ ಕೆರೆ ಪುನಶ್ಚೇತನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಸರ್ಕಾರದ ವಿವಿಧ ಯೋಜನೆಗಳಿಗೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಶಿಕ್ಷಣ, ರೈತಪರ ಕಾರ್ಯಕ್ರಮಗಳು, ಮದ್ಯವರ್ಜನ ಶಿಬಿರಗಳು, ಬೆಳೆ ವಿಮೆ ಹಾಗೂ ಕೆರೆಗಳ ಪುನಶ್ಚೇತನದಂತಹ ಜನಪರ ಸೇವೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸಂಸ್ಥೆಯು ತಿಪಟೂರು ತಾಲೂಕಿನಲ್ಲಿ ಇದುವರೆಗೆ ೧೬ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದ್ದು, ಕರಿಕೆರೆ ದೊಡ್ಡಕಟ್ಟೆ ಕೆರೆ ೧೭ನೇ ಕೆರೆಯಾಗಿದೆ. ಪ್ರಸ್ತುತ ವರ್ಷದಲ್ಲಿಯೇ ಇನ್ನೂ ಮೂರು ಕೆರೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಕೆರೆ ಹೂಳನ್ನು ರೈತರು ಸಮರ್ಪಕವಾಗಿ ಕೃಷಿಗೆ ಬಳಸಿಕೊಳ್ಳಬೇಕು ಹಾಗೂ ಕೆರೆ ಸುತ್ತಲಿನ ಒತ್ತುವರಿ ಜಾಗವನ್ನು ತೆರವುಗೊಳಿಸಿ ಕೆರೆಯ ಸಂರಕ್ಷಣೆಗೆ ಸಹಕರಿಸಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಬ್ರಹ್ಮಲಿಂಗೇಶ್ವರ ದೇವರ ದರ್ಶನವನ್ನು ಶಾಸಕರು ಪಡೆದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಮಾತನಾಡಿ ಬೆಳೆ ವಿಮೆ ಕುರಿತು ರೈತರಿಗೆ ಮಾಹಿತಿ ನೀಡಿದರು. ರೈತರ ಮನೆಬಾಗಿಲಿಗೆ ಬೆಳೆ ವಿಮೆ ಸೌಲಭ್ಯ ತಲುಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರ ಪಾತ್ರ ಶ್ಲಾಘನೀಯವಾಗಿದೆ ಎಂದರು. ತಾಲೂಕು ಕ್ಷೇತ್ರ ಯೋಜನಾಧಿಕಾರಿ ಉದಯ್ ಕೆ. ಮಾತನಾಡಿ, ತಿಪಟೂರು ತಾಲೂ ಕಿನಲ್ಲಿ ಇದುವರೆಗೆ ೧೭ ಕೆರೆಗಳ ಪುನಶ್ಚೇತನ, ೧೪ ವಾತ್ಸಲ್ಯ ಮನೆಗಳ ನಿರ್ಮಾಣ ಹಾಗೂ ೨೭ ಶುದ್ಧಗಂಗಾ ಘಟಕಗಳ ನಿರ್ವಹಣೆ ಸೇರಿದಂತೆ ಹಲವು ಜನಪರ ಸೇವೆಗಳು ನಡೆಯುತ್ತಿದ್ದು, ಇದು ತಾಲೂಕಿನ ಜನತೆಗೆ ದೊರೆತಿರುವ ಭಾಗ್ಯವಾಗಿದೆ ಎಂದು ತಿಳಿಸಿದರು.ಯೋಜನೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಕರಿಕೆರೆ ಕೆರೆಯ ಪುನಶ್ಚೇತನಕ್ಕೆ ₹೧೭.೧೫ ಲಕ್ಷ ಮಂಜೂರಾತಿ ನೀಡಲಾಯಿತು. ತಹಸೀಲ್ದಾರ್ ಮೋಹನ್ಕುಮಾರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಮ್.ಸುದರ್ಶನ್, ಕೃಷಿಕ ಸಮಾಜದ ನಿರ್ದೇಶಕ ಮಾರನಗೆರೆ ಸಂಗಮೇಶ್, ವಿಶ್ವನಾಥ್, ಬಸವರಾಜು ಹೊಸಳ್ಳಿ, ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ, ಕೆರೆ ಸಮಿತಿ ಅಧ್ಯಕ್ಷ ಕೆ.ಎಚ್.ರಾಜಶೇಖರ್, ತರಕಾರಿ ಗಂಗಾಧರ್, ಹರೀಶ್ಗೌಡ, ಮಲ್ಲಿಗಪ್ಪಾಚಾರ್, ತಾಲೂಕು ಯೋಜನಾಧಿಕಾರಿ ಉದಯ್.ಕೆ., ಕೆರೆ ಅಭಿಯಂತರ ಭರತ್, ಕೃಷಿ ಅಧಿಕಾರಿ ಪ್ರಮೋದ್ಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಸ್.ದಿನೇಶ್, ಉಪಾದ್ಯಕ್ಷ ರಾಜಶೇಖರ್, ತಾ.ಪಂ ಮಾಜಿ ಸದಸ್ಯ ಸುರೇಶ್ಕುಮಾರ್ ಇತರರು ಉಪಸ್ಥಿತರಿದ್ದರು.