ಧಾರವಾಡ:
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿವೃತ್ತರು ಹಾಗೂ ಪಿಂಚಣಿದಾರರ ವೇದಿಕೆಯ 5ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ನಿವೃತ್ತರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ, ಆಧುನಿಕತೆಯ ಭರದಲ್ಲಿ ವಿಶ್ವಕ್ಕೇ ಮಾದರಿಯಾಗಿರುವ ಭಾರತದ ಸಂಸ್ಕೃತಿಯನ್ನು ಮರೆಯಬಾರದು. ಸಮಾಜ ಸೇವೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವೆ ಮಾಡುವ ಮೂಲಕ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ನಿವೃತ್ತರು ತಮ್ಮ ಉಳಿದ ಬದುಕನ್ನು ಸಮಾಜದ ಒಳಿತಿಗೆ ಮೀಸಲಿಡುವಂತೆ ತಿಳಿಸಿದ ಸ್ವಾಮೀಜಿ, ಸದಾ ಚಟುವಟಿಕೆಯಿಂದ ಇರಲು ಕೆಲ ಮಾರ್ಗದರ್ಶನ ನೀಡಿದರು.ಕೇಂದ್ರ ಗಿರಿಜನ ವಿವಿ ಮಾಜಿ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ಮಾತನಾಡಿ, ನಿವೃತ್ತರು ಆರೋಗ್ಯಕರ ಹವ್ಯಾಸ ಬೆಳೆಸಿಕೊಂಡು ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕ ಸೇವೆ ನೀಡಬೇಕು. ಮರಣಾನಂತರದ ಅಂಗಾಂಗ ದಾನದ ಬಗ್ಗೆ ಕುಟುಂಬದವರಲ್ಲಿ ಮೊದಲೇ ಜಾಗೃತಿ ಮೂಡಿಸಿ ಸಾವಿನ ನಂತರ ಪ್ರತಿಯೊಂದು ಉಪಯುಕ್ತ ಅಂಗಾಂಗವೂ ಅವಶ್ಯಕ ರೋಗಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.ನ್ಯಾಯಾಧೀಶ ಎಸ್.ಎಚ್. ಮಿಠ್ಠಲಕೋಡ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ನೈತಿಕ ಹಾಗೂ ಪ್ರಾಮಾಣಿಕ ಸಮಾಜ ನಿರ್ಮಾಣದಲ್ಲಿ ಹಿರಿಯ ನಾಗರಿಕರು ನಿರ್ಣಾಯಕ ಪಾತ್ರ ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪಿಂಚಣಿದಾರರ ವೇದಿಕೆ ಅಧ್ಯಕ್ಷ ಬಿ.ಪಿ. ಪಟ್ಟಣಶೆಟ್ಟಿ ಮಾತನಾಡಿದರು. ಎ.ಜಿ. ಸೂರ್ಯವಂಶಿ, ಎ.ಎನ್. ಜ್ಯೋತೇಪ್ಪನವರ, ಎಸ್.ಜಿ,. ಸೋಮಣ್ಣನವರ, ಕೆ. ಚಂದ್ರಕಾಂತ, ಆರ್.ಬಿ. ಹಂಚಿನಮನಿ, ಬ್ಯಾಂಕಿನ ವಿಶ್ರಾಂತ ಎಜಿಎಂ ಉಲ್ಲಾಸ ಗುನಗಾ ಇದ್ದರು.