ಕನ್ನಡಪ್ರಭ ವಾರ್ತೆ‌‌‌ ಚಿಕ್ಕಮಗಳೂರು

ಜಾನಪದ ಕಲಾ ಪ್ರಕಾರವಾದ ಕಂಸಾಳೆ ನೃತ್ಯ ಮೈಸೂರು ಭಾಗದಲ್ಲಿ ವಿಶೇಷ ಮನ್ನಣೆ ಪಡೆದಿದ್ದರೆ ನಾಡಿನ ಅನೇಕ ಜಿಲ್ಲೆಗಳಲ್ಲಿ ದೈವರಾಧನೆ, ಭೂತರಾಧನೆ ಪೂಜಾ ಪದ್ಧತಿ ವಿಶೇಷತೆ ಹೊಂದಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಕೀರ್ತಿಕೃಷ್ಣ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ಧ ಮಕ್ಕಳಿಗೆ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ ನಮ್ಮದೇ ಜಿಲ್ಲೆಯವರಾದ ಕೃಷ್ಣಶಾಸ್ತ್ರಿ, ಕುವೆಂಪು ನಾಡು, ನುಡಿಯ ಕೀರ್ತಿ ಹೆಚ್ಚಿಸಿದ್ದಾರೆ. ನಾಡಗೀತೆಯಲ್ಲಿ ಕುವೆಂಪು ರಾಷ್ಟ್ರದ ಸಮಗ್ರ ಇತಿಹಾಸ, ನಾಡಿನ ನದಿಮೂಲಗಳು, ಸರ್ವ ಧರ್ಮದ ಶಾಂತಿತೋಟ ವರ್ಣನೆಯನ್ನು ಸಾಹಿತ್ಯಾತ್ಮಕವಾಗಿ ಅಡಕಗೊಳಿಸಿ ಭಾಷೆ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಕಸಾಪ ಸಾಹಿತ್ಯಾತ್ಮಕ ಚಟುವಟಿಕೆ, ಕಲೆ, ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳ್ಳದೇ ಆರೋಗ್ಯ ಮೇಳ ಆಯೋಜಿಸಿ ಬಡವ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ ಒಂದೇ ಸೂರಿನಡಿ ಹೃದಯ ಸಂಬಂಧಿಸಿದ ಕಾಯಿಲೆಗೆ ತಪಾಸಣೆ ನಡೆಸುವುದು ಉತ್ತಮ ಬೆಳವಣಿಗೆ. ಪಾಲಕರು ಕೂಡಾ ಬಾಲ್ಯದಿಂದಲೇ ಮಕ್ಕಳಿಗೆ ಸಣ್ಣಪುಟ್ಟ ಆರೋಗ್ಯ ನ್ಯೂನ್ಯತೆ ಕಂಡಲ್ಲಿ ಅಕ್ಕಪಕ್ಕದ ಜನರ ಮಾತಿಗೆ ಒಪ್ಪಿಕೊಳ್ಳದೇ ಶೀಘ್ರ ವೈದ್ಯರ ಸಲಹೆ ಪಡೆದಲ್ಲಿ ಮಕ್ಕಳ ಆರೋಗ್ಯ ಭವಿಷ್ಯದಲ್ಲಿ ವೃದ್ಧಿಯಾಗಲಿದೆ ಎಂದರು.


ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಮಕ್ಕಳು ನೋವು ಅನುಭವಿಸಿದರೆ ಇಡೀ ಕುಟುಂಬವೇ ದುಃಖಕ್ಕೆ ಒಳಗಾಗುತ್ತದೆ. ಹೀಗಾಗಿ ತಪಾಸಣೆಯಲ್ಲಿ ಭಾಗಿಯಾದ ಕುಟುಂಬಗಳು ಮಕ್ಕಳಿಗೆ ಸೂಕ್ತ ರೀತಿ ತಪಾಸಣೆ ನಡೆಸಿ ನಿಗಾವಹಿಸುವುದು ಮೂಲ ಕರ್ತವ್ಯ ಎಂದು ಹೇಳಿದರು.

ಸುಮಾರು 88 ಮಕ್ಕಳು ತಪಾಸಣೆಗೆ ಒಳಗಾದರು. ಆಶಾಕಿರಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣಗೌಡ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಆರ್‌ಸಿಎಚ್ ಅಧಿಕಾರಿ ಡಾ.ಮಂಜುನಾಥ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು, ನಗರಸಭೆ ಸದಸ್ಯೆ ಉಮಾದೇವಿ ಕೃಷ್ಣ, ಆಶ್ರಯ ಪೌಂಡೇಷನ್ ಸಂಸ್ಥಾಪಕಿ ಡಾ. ವರ್ಷಾ ಅಭಿಷೇಕ್ ಉಪಸ್ಥಿತರಿದ್ದರು.