ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ
ಪುರಾಣ ಪ್ರಸಿದ್ಧ ದೇವಾಲಯಗಳ ಬೀಡು ಎನಿಸಿರುವ "ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರ ಹೋಬಳಿ ಕೇರಳಾಪುರ ಗ್ರಾಮದ ಶ್ರೀ ಪ್ರಸನ್ನ ವೀರಭದ್ರೇಶ್ವರ ಸ್ವಾಮಿ ಮಹಾರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಅದ್ಧೂರಿಯಾಗಿ ನೆರವೇರಿತು.ರಥೋತ್ಸವದ ಅಂಗವಾಗಿ ದೇಗುಲವು ವಿವಿಧ ರೀತಿಯ ಹೂಗಳಿಂದ ಅಲಂಕೃತಗೊಂಡಿತ್ತು. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶ್ರೀ ವೀರಭದ್ರೇಶ್ವರಸ್ವಾಮಿ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿ ವಿವಿಧ ಪುಷ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 40 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು.
ಛತ್ರಿಚಾಮರ, ಮಂಗಳವಾದ್ಯಗಳೊಂದಿಗೆ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಭಕ್ತರ ಸಮಯದಲ್ಲಿ ಹರ್ಷೋದ್ಗಾರದೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥದ ಬೀದಿಯಲ್ಲಿ ತೆರಳಿ ರಾಜಬೀದಿಯಲ್ಲಿ ಹಾಗೂ ಅಲ್ಲಿಂದ ಮತ್ತೆ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ನಿಲ್ಲಿಸಿದರು.ಈ ಸಂದರ್ಭದಲ್ಲಿ ಅಬಕಾರಿ ಜಂಟಿ ಆಯುಕ್ತರು ಬೆಂಗಳೂರು ಈರಪ್ಪ, ವಿ. ಬಸವರಾಜು, ತಹಸೀಲ್ದಾರ್ ಮಲ್ಲಿಕಾರ್ಜುನ, ಲೆಕ್ಕಪರಿಶೋಧಕರು ಅರ್.ಐ. ಸ್ವಾಮಿ, ನಾಡಕಚೇರಿ ಆರ್.ಐ. ರವಿ, ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಪರಮೇಶ್ವರಯ್ಯ, ಕಾರ್ಯದರ್ಶಿ ಈರಪ್ಪ, ಶಾಂತವೀರಯ್ಯ, ಕೆ.ಎಸ್. ಮಹದೇವ್, ನಾಗೇಶ್, ಕೆ.ಎಸ್. ಮಧು, ಪ್ರಭಾಕರ್, ಕೆ.ಪಿ. ರವಿ, ದೇವಾಲಯ ಸಮಿತಿ ಸದಸ್ಯರಾದ ಕೆ.ಎಲ್. ಗೋವಿಂದ, ಕೆ.ಪಿ. ಮಂಜುನಾಥ್, ಜಯರಾಮ್, ಭೀಮಶೆಟ್ಟಿ, ಅರ್ಚಕರಾದ ಮಹದೇವ್, ರವಿ, ಮಂಜು, ಭರತ್ ಮುಂತಾದವರು ಭಾಗವಹಿಸಿದ್ದರು.* ಬಾಕ್ಸ್: ಮಹಿಳೆಯರ ಚಿನ್ನ ಕಳವು:
ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಒಡೆವೆಗಳನ್ನು ಕಳ್ಳರು ಅಪಹರಿಸಿದ್ದಾರೆ. ಕೇರಳಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗಾಯತ್ರಿಕುಮಾರ್ ಸೇರಿದಂತೆ 4 ಜನರು ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ. ಕೊಣನೂರು ಠಾಣೆ ಪೋಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.