ಕೆಎಲ್ಇ ಆಸ್ಪತ್ರೆಗಳು ಜನಸೇವೆಗೆ ಸದಾ ಕಟಿಬದ್ಧ

| Published : Apr 05 2025, 12:46 AM IST

ಸಾರಾಂಶ

ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯದಲ್ಲಿ ಆ್ಯಂಬುಲೆನ್ಸ್‌ ತೊಡಗಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ರಾಮೀಣ ಭಾಗದ ಜನರ ತುರ್ತು ಆರೋಗ್ಯ ಸೇವೆ ಕಲ್ಪಿಸುವಲ್ಲಿ ಆ್ಯಂಬುಲೆನ್ಸ್‌ಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕೆಎಲ್‌ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರಕ್ಕೆ ಯುನಿಯನ್ ಬ್ಯಾಂಕ್‌ ಆಫ್ ಇಂಡಿಯಾ ನೀಡಿದ ನೂತನ ಆ್ಯಂಬುಲೆನ್ಸಗಳಿಗೆ ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ಜನಸೇವೆಗೆ ಅರ್ಪಿಸಿ, ಮಾತನಾಡಿದ ಅವರು, ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯದಲ್ಲಿ ಆ್ಯಂಬುಲೆನ್ಸ್‌ ತೊಡಗಿಕೊಂಡಿದೆ. ಆರೋಗ್ಯ ಸೇವೆ ಎಲ್ಲರಿಗೂ ತಲುಪಿಸಲು ಸಾಕಷ್ಟು ಯೋಜನೆ ರೂಪಿಸಿದರೂ ಕೂಡ ಕೆಲವು ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ ಆಸ್ಪತ್ರೆ ಕಾರ್ಯವನ್ನು ಮಾಡುತ್ತದೆ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಸಂಘ-ಸಂಸ್ಥೆಗಳು ಕೈಜೋಡಿಸುವಂತೆ ಕರೆ ನೀಡಿದರು.

ತುರ್ತು ವೈದ್ಯಕೀಯ ಸೇವೆಗಳನ್ನು ಸುಧಾರಿಸಲು ಯುನಿಯನ್ ಬ್ಯಾಂಕ್‌ ಆಫ್ ಇಂಡಿಯಾ ಕೆಎಲ್‌ಇ ಸಂಸ್ಥೆ ಆಸ್ಪತ್ರೆಗಳಿಗೆ ಸಹಕಾರ ನೀಡುತ್ತಿವೆ. ಈ ಅತ್ಯಾಧುನಿಕ ಆ್ಯಂಬುಲೆನ್ಸ್‌ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದ ಅವರು, ಕೆಎಲ್ಇ ಸಂಸ್ಥೆಯ ಆಸ್ಪತ್ರೆಗಳು ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸಲು ಸದಾ ಕಟಿಬದ್ಧವಾಗಿವೆ. ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಒಂದೇ ಸೂರಿನಡಿ ಸಕಲ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಕ್ಯಾನ್ಸರ್‌ ಆಸ್ಪತ್ರೆಯನ್ನೂ ಕೂಡ ಜನಸೇವೆಗೆ ಅರ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಹೆರನ ಉಪಕುಲಪತಿ ಡಾ.ನಿತಿನ ಗಂಗಾನೆ, ಡಾ.ಎಚ್.ಬಿ.ರಾಜಶೇಖರ, ಡಾ.ವಿ.ಡಿ.ಪಾಟೀಲ, ರಿಜಿಸ್ಟ್ರಾರ್‌ ಎಸ್.ಎಸ್.ಗಣಾಚಾರಿ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ.(ಕರ್ನಲ್) ಎಂ.ದಯಾನಂದ, ಉಪಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಆರಿಫ್ ಮಾಲ್ದಾರ, ಕೆಎಲ್‌ಇ ಸಂಸ್ಥೆ ಬ್ಯಾಂಕಿಂಗ್ ವ್ಯವಹಾರಗಳ ನಿರ್ದೇಶಕ ಬಸವರಾಜ ಜೇವರಗಿಕರ, ಯುನಿಯನ್ ಬ್ಯಾಂಕ್‌ ಪ್ರಾದೇಶಿಕ ಮುಖ್ಯಸ್ಥರಾದ ಆರತಿ ರೌರ್ನಿಯಾರ, ಉಪಮುಖ್ಯಸ್ಥ ಗ್ಯಾನೇಶಕುಮಾರ, ಮನಿಷ ಮೇಘನ್ನವರ, ಮುಖ್ಯ ನಿರ್ವಾಹಕ ನಾಗರಾಜ ಪಾಟೀಲ, ನಿರ್ವಾಹಕ ವೇದಪ್ರಕಾಶ, ನಿಖಿಲ ಭಸ್ಮೆ ಸೇರಿ ಇತರರಿದ್ದರು.