ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಸ್ವೀಕರಿಸಿರುವುದಾಗಿ ಅಂದಾಜಿಸಲಾಗಿದೆ.


ಭಾನುವಾರ ಬೆಳಗ್ಗೆ 7.30ರಿಂದ 10 ಗಂಟೆ ತನಕ ಭಕ್ತರಿಗೆ ಫಲಹಾರ ವಿತರಿಸಲಾಯಿತು. ಬಳಿಕ 10.30ರಿಂದ ಸಂಜೆ 4 ಗಂಟೆ ತನಕ ನಿರಂತರ ಭೋಜನ ನೀಡಲಾಯಿತು. ಷಣ್ಮುಖ ಪ್ರಸಾದ ಬೋಜನ ಶಾಲೆ, ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪ, ಶೃಂಗೇರಿ ಮಠ ಹಾಗೂ ಭಕ್ತರ ಬಿಡಾರದಲ್ಲಿ ಮಧ್ಯಾಹ್ನ ಭೋಜನ ಭಕ್ತರು ಸ್ವೀಕರಿಸಿದರು. ರಾತ್ರಿ 7.30ರಿಂದ 11 ಗಂಟೆಯ ತನಕ ನಿರಂತರವಾಗಿ ಷಣ್ಮುಖ ಪ್ರಸಾದ ಭೋಜನಶಾಲೆಯಲ್ಲಿ ಭಕ್ತರು ರಾತ್ರಿಯ ಪ್ರಸಾದ ಭೋಜನ ಸ್ವೀಕರಿಸಿದರು.

ಭಾನುವಾರ ಮುಂಜಾನೆಯಿಂದಲೇ ಶ್ರೀ ದೇವಳದತ್ತ ಭಕ್ತ ಸಂದೋಹ ಹರಿದು ಬಂತು. ರಥಬೀದಿಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಸಾಗಿ ಬಂದರು. ಎಣಿಕೆಗೂ ಮೀರಿ ಬಂದ ಭಕ್ತ ಸಂದೋಹಕ್ಕೆ ಶ್ರೀ ದೇವಳದ ಆಡಳಿತ ಮತ್ತು ಸಿಬ್ಬಂದಿ ವರ್ಗ ಸೂಕ್ತ ವ್ಯವಸ್ಥೆ ಮಾಡಿತ್ತು. ಶ್ರೀ ದೇವಳದ ರಥಬೀದಿ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯದಲ್ಲಿ ಭಕ್ತರು ತುಂಬಿದ್ದರು. ಪ್ರಮುಖ ಸೇವೆಗಳಾದ ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ, ಶೇಷಸೇವೆ, ಕಾರ್ತಿಕಪೂಜೆ, ಮಹಾಭಿಷೇಕ ಮೊದಲಾದ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು.ದೇವಳದ ವಸತಿ ಗೃಹಗಳು ಹಾಗೂ ಖಾಸಗಿ ವಸತಿ ಗೃಹಗಳು ಭರ್ತಿಯಾಗಿತ್ತು. ಕುಕ್ಕೆಯ ಬಸ್ ನಿಲ್ದಾಣವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಭಕ್ತರನ್ನು ಕರೆದುಕೊಂಡು ಬಂದ ವಾಹನಗಳ ಸಂಖ್ಯೆಯೂ ಅಧಿಕವಿದ್ದ ಕಾರಣ ದೇವಳದ ಪಾರ್ಕಿಂಗ್ ಸ್ಥಳಗಳು ತುಂಬಿದ್ದವು.