ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ತಾಯಿನಾಡಿಗೆ ಆಗಮಿಸಿದ ಯೋಧ ದಿವಿನ್ ಪಾರ್ಥಿವ ಶರೀರದ ಅಂತಿಮ ನಮನಕ್ಕೆ ಮಂಗಳವಾರ ಕುಶಾಲನಗರದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು.ಬೆಂಗಳೂರಿನಿಂದ ಮೈಸೂರು ಮೂಲಕ ಮಂಗಳವಾರ ತಡರಾತ್ರಿಯಲ್ಲಿ ಕುಶಾಲನಗರಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಗಡಿ ಭಾಗದಲ್ಲಿ ಜಿಲ್ಲಾ ಆಡಳಿತದ ಪರವಾಗಿ ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಮತ್ತು ಡಿ ವೈ ಎಸ್ ಪಿ ಮಹೇಶ್ ಕುಮಾರ್ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಸಾರ್ವಜನಿಕರು ಬರ ಮಾಡಿಕೊಂಡರು. ‘ದಿವಿನ್ ಅಮರ್ ರಹೇ’ ಘೋಷವಾಕ್ಯಗಳು ಮುಗಿಲು ಮುಟ್ಟಿದವು.ನಂತರ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹ ತಂದಿಡಲಾಯಿತು.
ಬುಧವಾರ ಬೆಳಗ್ಗೆ 8 ಗಂಟೆಯಿಂದ 10 ಗಂಟೆ ತನಕ ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಜಿಲ್ಲಾಧಿಕಾರಿ ವೆಂಕಟ ರಾಜ, ಉಪ ವಿಭಾಗಾಧಿಕಾರಿ ನರ್ವಡೆ ವಿನಾಯಕ, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಸೇರಿದಂತೆ ಕುಶಾಲನಗರ ಪುರಸಭೆ ಅಧ್ಯಕ್ಷರು, ಮುಖ್ಯ ಅಧಿಕಾರಿಗಳು, ಸದಸ್ಯರು, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಜನಪ್ರತಿನಿಧಿಗಳು, ಮಾಜಿ ಸೈನಿಕರ ಸಂಘದ ಜಿಲ್ಲೆಯ ಸಂಘಟನೆಗಳ ಹಾಗೂ ಕುಶಾಲನಗರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಕೊಡಗು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪ್ರಮುಖರು, ಶಾಲೆಗಳ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಾರ್ವಜನಿಕರು ಆಗಮಿಸಿ ಹುತಾತ್ಮ ಯೋಧನಿಗೆ ಅಂತಿಮ ವಿದಾಯ ಹೇಳಿದರು.
ತಹಸೀಲ್ದಾರ್ ನೇತೃತ್ವದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್, ಜಿ ಎಮ್ ಪಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಚಂದನ್ ಕುಮಾರ್ ಮತ್ತಿತರರು ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದರು.ನಂತರ ಸೇನಾ ವಾಹನದಲ್ಲಿ ಮೇಜರ್ ನಿಖಿಲ್ ನೇತೃತ್ವದಲ್ಲಿ ಬೆಂಗಳೂರಿನಿಂದ ಆಗಮಿಸಿದ ಸೇನಾ ಸದಸ್ಯರೊಂದಿಗೆ ದಿವಿನ್ ಮೃತ ದೇಹವನ್ನು ಹುಟ್ಟೂರಿಗೆ ಸಾಗಿಸಲಾಯಿತು.