ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉತ್ತರ ಕರ್ನಾಟಕದ ಭಾಗದಲ್ಲಿ ಮುಂಗಾರು ಮಳೆ ಕೊರೆತೆಯಾದ ಹಿನ್ನೆಲೆ ಹಾವೇರಿ ಜಿಲ್ಲೆಯಲ್ಲಿ 3 ದಿನಗಳ ಮೋಡ ಬಿತ್ತನೆ ಕಾರ್ಯಕ್ಕೆ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.

ಹಾವೇರಿ ಜಿಲ್ಲೆಯ 6 ಶಾಸಕರು ಸೇರಿ 8 ತಾಲೂಕುಗಳಲ್ಲಿ 3 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದು, 1 ಗಂಟೆ ಕಾರ್ಯಾಚರಣೆಗೆ ₹15 ಲಕ್ಷ ವೆಚ್ಚವಾಗಲಿದೆ. ಈ ಸಂಪೂರ್ಣ ವೆಚ್ಚವನ್ನು ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳೇ ಭರಿಸಲಿದ್ದಾರೆ.

ಮೊದಲ ದಿನ ಸವಣೂರು ಹಾಗೂ ಶಿಗ್ಗಾಂವಿ ಭಾಗದಲ್ಲಿ ಮೋಡ ಬಿತ್ತನೆ ಮಾಡಲಾಗಿದ್ದು, ಹಾವೇರಿ ಜಿಲ್ಲೆಯ ಉಳಿದ ಭಾಗದಲ್ಲಿ ಅಗತ್ಯ ಎನಿಸಿದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಮೋಡ ಬಿತ್ತನೆ ಕಾರ್ಯಕ್ಕಾಗಿಯೇ ಅಮೆರಿಕದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ವಿಮಾನವನ್ನು ಬಳಸಲಾಗುತ್ತಿದ್ದು, ಪೈಲಟ್‌ಗಳಿಗೆ ವಿಶೇಷ ತರಬೇತಿ ಸಹ ನೀಡಲಾಗಿದೆ. ಮಳೆ ತರುವ ಮೋಡಗಳು ಸೂಕ್ತ ಪ್ರಮಾಣದಲ್ಲಿದ್ದಾಗ ಮಾತ್ರ ಬಿತ್ತನೆ ಪ್ರಕ್ರಿಯೆ ಯಶಸ್ವಿಯಾಗುವುದರಿಂದ, ಹವಾಮಾನದ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಲು ತಂಡ ಸಜ್ಜಾಗಿದೆ.

ಸರ್ಕಾರವೇ ಬಿತ್ತನೆ ಮಾಡಲಿ:


ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರವೇ ಮೋಡ ಬಿತ್ತನೆ ಮಾಡಬೇಕು. ಈ ಕುರಿತು ಸಿಎಂ ಗಮನಕ್ಕೆ ತರಲಾಗುವುದು ಎಂದು ಧಾರವಾಡ-ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಮೋಡ ಬಿತ್ತನೆ ಕಾರ್ಯಕ್ರಮದ ನೇತೃತ್ವ ವಹಿಸಿದ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಸವಣೂರು, ಶಿಗ್ಗಾಂವಿಯಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಿದ್ದು ವಿಶೇಷ ವಿಮಾನ ಒಂದು ತಿಂಗಳು ಹುಬ್ಬಳ್ಳಿಯಲ್ಲೇ ಇರಲಿದೆ ಎಂದರು.

ಈ ವೇಳೆ ಶಾಸಕರಾದ ಎಚ್‌.ಕೆ.ಪಾಟೀಲ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಯು.ಬಿ.ಬಣಕಾರ, ಯಾಸೀರ ಖಾನ್ ಪಠಾಣ, ಎನ್.ಎಚ್.ಕೋನರಡ್ಡಿ, ಎಫ್.ಎಚ್.ಜಕ್ಕಪ್ಪನವರ ಹಲವರಿದ್ದರು.ಈ ಹಿಂದೆಯೂ ಹಲವು ಬಾರಿ ಮೋಡ ಬಿತ್ತನೆ:ಉತ್ತರ ಕರ್ನಾಟಕ ಭಾಗದಲ್ಲಿ ಈ ಹಿಂದೆಯೂ ಹಲವು ಬಾರಿ ಮೋಡ ಬಿತ್ತನೆ ಮಾಡಲಾಗಿದೆ. 2001, 2003, 2017, 2019, 2023ರಲ್ಲಿ ಮೋಡ ಬಿತ್ತನೆ ಮಾಡಿದಾಗ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷವೂ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ.