ಆಗಸ್ಟ್‌ನಿಂದ ಕಾನೂನು ಕಾಲೇಜು ಆರಂಭ: ಪುಟ್ಟರಂಗಶೆಟ್ಟಿ

| Published : Jun 06 2025, 12:43 AM IST

ಆಗಸ್ಟ್‌ನಿಂದ ಕಾನೂನು ಕಾಲೇಜು ಆರಂಭ: ಪುಟ್ಟರಂಗಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಕಾನೂನು ಕಾಲೇಜು ಪ್ರಾರಂಭಿಸಲು ಅಧಿಕೃತ ಅನುಮತಿ ಸಿಕ್ಕಿದ್ದು, ಈ ಶೈಕ್ಷಣಿಕ ವರ್ಷ ಆಗಸ್ಟ್‌ನಿಂದಲೇ ಕಾಲೇಜು ಪ್ರಾರಂಭವಾಗಲಿದೆ ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಲೇಜಿಗೆ ಮೂಲ ಕಾರಣರಾದವರು ದಿ.ಆರ್.ಧ್ರುವನಾರಾಯಣ ಅವರು ಎಂದರು. ೨೦೧೭-೧೮ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಲೇಜಿಗೆ ಅನುಮತಿ ಸಿಕ್ಕಿತು. ಈಗ ಅವರ ಅವಧಿಯಲ್ಲೇ ಕಾನೂನು ಕಾಲೇಜು ಪ್ರಾರಂಭವಾಗುತ್ತಿರುವುದು ಸಂತಸದ ವಿಷಯ, ಹಾಗೆಯೇ ಹಾಲಿ ಸಂಸದ ಸುನೀಲ್‌ಬೋಸ್ ಅವರು ಸಹ ಕಾರಣರಾಗಿದ್ದು, ದೆಹಲಿ ವಕೀಲ ಪರಿಷತ್ತಿನ ಮಂಡಳಿಗೆ ಅರ್ಜಿ ನೀಡಿ ಮನವಿ ಮಾಡಿಕೊಂಡಿದ್ದರು. ೨೦೧೯ರಲ್ಲೇ ಪ್ರಾರಂಭವಾಗಬೇಕಿತ್ತು, ಕೇಂದ್ರದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತಂಡ ಹಾಗೂ ಹುಬ್ಬಳ್ಳಿಯ ರಾಜ್ಯ ಬಾರ್ ಕೌನ್ಸಿಲ್ ಸಮಿತಿ ಬಂದು ಪರಿಶೀಲಿಸಿ ಮೂಲಭೂತ ಕೊರತೆಯಿದೆ ಎಂದು ಹೇಳಿದ್ದರಿಂದ ವಿಳಂಬವಾಗಿತ್ತು ಎಂದರು.

ಈಗ ಕಾಲೇಜು ಹಳೆಯ ಕೆವಿಕೆ ಕೇಂದ್ರದಲ್ಲಿ ದುರಸ್ತಿಗೊಂಡಿದ್ದು, ಆಗಸ್ಟ್‌ನಿಂದ ಪ್ರಾರಂಭವಾಗಲಿದ್ದು, ಹೊಸ ಕಟ್ಟಡಕ್ಕೆ ಯಡಬೆಟ್ಟದ ಬಳಿ ಸರ್ವೆ ನಂ. ೧೧೨ರಲ್ಲಿ ೪ ಎಕರೆ ಜಾಗ ಗುರುತಿಸಲಾಗಿದೆ ಎಂದರು. ಕಾಲೇಜಿನಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿದ್ದು, ನಾನು ದೆಹಲಿವರೆಗೆ ಹೋಗಿ ವಕೀಲ ಪರಿಷತ್ತಿನಲ್ಲಿ ಮನವಿ ಸಲ್ಲಿಸಿ ಬಂದ ಮೇಲೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮತಿ ಸಿಕ್ಕಿದೆ ಎಂದರು. ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರಿಗೆ ಎಲ್ಲ ಮಾಹಿತಿ ನೀಡಿದ್ದು ಅನುದಾನಕ್ಕೆ ಮನವಿ ಮಾಡಲಾಗಿದೆ, ಎಂಎಸ್‌ಐಎಲ್‌ನಿಂದ ೧೩ವರೆಗೆ ಲಕ್ಷ ನೀಡಿದ್ದು, ಕಾಲೇಜು ಪ್ರಾರಂಭಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಪ್ರಾಂಶುಪಾಲರು, ೫ ಮಂದಿ ಕಾನೂನು ಉಪನ್ಯಾಸಕರು ೨೦೧೯ರಿಂದಲೇ ನೇಮಕಗೊಂಡಿದ್ದಾರೆ. ೨೦೦೮ರಿಂದ ಶಾಸಕನಾದ ನಾನು ಜಿಲ್ಲಾ ಕೇಂದ್ರಕ್ಕೆ ಎಲ್ಲ ರೀತಿಯ ಕಾಲೇಜುಗಳನ್ನು ತಂದಿದ್ದೇನೆ. ಅರಣ್ಯ ಕಾಲೇಜಿಗೂ ಮನವಿ ಮಾಡಲಾಗುವುದು ಎಂದರು. ೨೦೦೮ರ ಬಳಿಕ ಜಿಲ್ಲಾ ಕೇಂದ್ರ ಮೂರು ಪಟ್ಟು ಬೆಳೆದಿದೆ. ಪೋಲಿಸ್ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು. ೩.೨೦ ಎಕರೆ ರೇಷ್ಮೆ ಇಲಾಖೆ ಜಾಗ ಕೆಎಸ್‌ಆರ್‌ಟಿಸಿಗೆ ಜಾಗ ಮಂಜೂರಾಗಿದ್ದು, ನೂತನ ಬಸ್‌ ನಿಲ್ದಾಣ ನಿರ್ಮಾಣಕ್ಕೆ ೪೩ ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ, ಹಾಗೆಯೇ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ ತೆರೆಯಲು ಕ್ರಮ ವಹಿಸಲಾಗುವುದು ಎಂದರು.

ಕಾಲ್ತುಳಿತಕ್ಕೆ ಸಂತಾಪ:

ಬೆಂಗಳೂರಿನಲ್ಲಿ ಕಾಲ್ತುಳಿತ ನಡೆದದ್ದು, ತನಿಖೆಗೆ ಆದೇಶ ಮಾಡಲಾಗಿದೆ. ಇದಕ್ಕೆ ಸರ್ಕಾರ ಹೊಣೆ ಇಲ್ಲ, ಇದಕ್ಕಾಗಿ ಸಂತಾಪ ವ್ಯಕ್ತಪಡಿಸುತ್ತೇನೆ ಎಂದರು.ಪ್ರಾಂಶುಪಾಲರಾದ ಕೆ.ಎಸ್. ಲಲಿತಾ ಮಾತನಾಡಿ, ಈ ಕಾಲೇಜು, ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಡಲಿದ್ದು, ಈಗ ಯಾವುದೆ ಪದವಿಯಲ್ಲಿ ಶೇ.೪೫ಕ್ಕೂ ಹೆಚ್ಚು ಅಂಕಗಳಿಸಿರುವ ೫೦ರಿಂದ ೬೦ ವಿದ್ಯಾರ್ಥಿಗಳು ನೋಂದಾವಣಿ ಮಾಡಿಕೊಂಡು ಮೂರು ವರ್ಷದ ಕಾನೂನು ಪದವಿ ಪ್ರಾರಂಭಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಿ.ಕೆ. ರವಿಕುಮಾರ್, ಮಹಮದ್ ಅಸ್ಗರ್ ಮುನ್ನಾ, ಉಮೇಶ್, ನಲ್ಲೂರು ಸೋಮೇಶ್ವರ, ಸ್ವಾಮಿ ಇದ್ದರು.