ಹೊಸಪೇಟೆ: ಬೆಳಗಾವಿ ಮಹಿಳಾ ವಕೀಲೆ ಪೂಜಾ ಕಾಕಟಕರ್ ಅವರ ಮನೆಯ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ನಗರದಲ್ಲಿ ಮಂಗಳವಾರ ಅಖಿಲ ಭಾರತ ವಕೀಲರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್‌ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಕೀಲರ ಒಕ್ಕೂಟದ ರಾಜ್ಯ ಮುಖಂಡ ಎ. ಕರುಣಾನಿಧಿ ಮಾತನಾಡಿ, ಪ್ರಕರಣ ರಾಜ್ಯದ ವಕೀಲರನ್ನು ಬೆಚ್ಚಿ ಬೀಳಿಸಿದೆ. ಮಹಿಳಾ ವಕೀಲರ ಮೇಲೆ ಗುಂಡಿನ ದಾಳಿ ರಾಜ್ಯದಲ್ಲಿ ಮೊದಲ ಪ್ರಕರಣವಾಗಿದೆ. ಮಹಿಳೆಯರು ವಕೀಲಿ ವೃತ್ತಿಗೆ ಬರುವುದೇ ಅಪರೂಪ. ಆದರೆ, ಇಂತಹ ಪ್ರಕರಣಗಳಿಂದಾಗಿ ಆತಂಕ ಪಡುವ ಅಗತ್ಯವಿಲ್ಲ. ವಕೀಲರ ಒಕ್ಕೂಟ ವಕೀಲರ ಕಷ್ಟಗಳಿಗೆ ನೆರಳಾಗಿ ಸದಾ ನಿಲ್ಲುತ್ತದೆ ಎಂದು ಅವರು ಹೇಳಿದರು.

ವಕೀಲರಾದ ಪುಷ್ಪಲತಾ ಮಾತನಾಡಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ವಕೀಲರ ಮೇಲಿನ ದಾಳಿಯು ಕಾನೂನಿನ ಮೇಲಿನ ದಾಳಿಗೆ ಸಮ ಎಂದರು. ವಕೀಲೆ ಕರಿಬಸಮ್ಮ ಮಾತನಾಡಿ, ಮಹಿಳೆಯರ ಕುರಿತಾದ ಕೇಂದ್ರ ಸರ್ಕಾರದ ಭೇಟಿ ಬಚಾವ್ ಭೇಟಿ ಪಡಾವ್ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.

ಯುವ ವಕೀಲ ಹರಪನಹಳ್ಳಿ ಮಂಜುನಾಥ ಮಾತನಾಡಿ, ಸರ್ಕಾರ ಘಟನೆ ಕುರಿತು ನಿರ್ದಿಷ್ಟ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಘಟನೆಗೆ ಕಾರಣರಾದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಘಟನೆಯನ್ನು ನ್ಯಾಯಾಂಗಿಕ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕು. ವಕೀಲರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ವಕೀಲರ ಸಂರಕ್ಷಣಾ ಕಾಯ್ದೆಗೆ ತಕ್ಷಣವೇ ತಿದ್ದುಪಡಿ ಮಾಡಿ ಕಾಯ್ದೆಯಲ್ಲಿನ ಅಪರಾಧಗಳನ್ನು ಜಾಮೀನು ರಹಿತ ಅಪರಾಧಗಳನ್ನಾಗಿ ಪರಿಗಣಿಸಬೇಕು ಎಂದು ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.


ವಕೀಲರಾದ ವೇಣುಗೋಪಾಲ್, ಮರಿಯಪ್ಪ, ಮದನ್, ಕಟಿಗಿ ಜಂಬಯ್ಯನಾಯಕ, ತಾರಿಹಳ್ಳಿ ಗೋಪಾಲ್, ದೇವೇಂದ್ರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.