ಕನ್ನಡಪ್ರಭ ವಾರ್ತೆ ಮಂಡ್ಯ
ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಯಾರೇ ಆಗಲಿ ಆಡಳಿತದಲ್ಲಿ ಅಸಮತೋಲನವಾಗದಂತೆ, ಆರ್ಥಿಕ ಕುಸಿತ ಕಾಣದ ರೀತಿಯಲ್ಲಿ ಆಡಳಿತ ನಡೆಯಬೇಕಷ್ಟೇ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ನಮ್ಮ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೂ ಎರಡು ವರ್ಷಕ್ಕೆ ಮತ್ತೊಬ್ಬರು ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸದಾನಂದಗೌಡರು ಮುಖ್ಯಮಂತ್ರಿಯಾದರು. ನಂತರ ಬಸವರಾಜ ಬೊಮ್ಮಾಯಿ ಬಂದರು. ರಾಜಕಾರಣದಲ್ಲಿ ಇವೆಲ್ಲವೂ ಸಾಮಾನ್ಯ ಬೆಳವಣಿಗೆ. ಯಾರೇ ಮುಖ್ಯಮಂತ್ರಿಯಾದರೂ ರಾಜ್ಯದ ಆರ್ಥಿಕತೆ ಕುಸಿತ ಕಾಣದ ರೀತಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಇವರೇ ಮುಖ್ಯಮಂತ್ರಿಯಾಗಬೇಕೆಂದು ಅವರವರ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಆಸೆ ಇದ್ದೇ ಇರುತ್ತೆ. ಯಾವುದೇ ಪಕ್ಷದ ಸರ್ಕಾರ ಇದ್ದಾಗಲೂ ಇಂತಹ ಬದಲಾವಣೆಗಳು ಸಾಮಾನ್ಯ. ಮುಖ್ಯಮಂತ್ರಿ ಬದಲಾವಣೆಯಿಂದ ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎನ್ನಲಾಗುವುದಿಲ್ಲ ಎಂದರು.ಇನ್ನೆರಡು ವರ್ಷ ಕಳೆದರೆ ಚುನಾವಣೆ ಬರುತ್ತೆ. ಈಗಿನಿಂದಲೇ ಚುನಾವಣಾ ಕಾರ್ಯಚಟುವಟಿಕೆಗಳನ್ನು ಆರಂಭಿಸಬೇಕು. ರಾಜ್ಯಾದ್ಯಂತ ಸುತ್ತಾಟ ನಡೆಸಲು ಎಲ್ಲಾ ಪಕ್ಷದವರೂ ತಯಾರಿ ನಡೆಸಿದ್ದಾರೆ ಎಂದು ಹೇಳಿದರು.
ಕುಮಾರ ಬಂಗಾರಪ್ಪ ರಾಜಕೀಯದಲ್ಲಿ ಸಕ್ರೀಯವಾಗಿಲ್ಲ ಎಂಬ ಪ್ರಶ್ನೆಗೆ, ಚುನಾವಣೆಯಲ್ಲಿ ಒಂದು ಸಲ ಕಳೆದುಕೊಂಡ ಮೇಲೆ ಅದು ಸಹಜ. ನಮ್ಮ ನಮ್ಮ ಕ್ಷೇತ್ರದಲ್ಲಿ ಓಡಾಡಿಕೊಂಡು ಇದ್ದೇವೆ. ನಮ್ಮ ಪಕ್ಷದಲ್ಲಿ ಆಂತರಿಕ ಬೆಳವಣಿಗೆ ನಡೆಯುತ್ತಿವೆ. ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಬಂದು ಹೋಗಿದ್ದಾರೆ. ಚುನಾವಣೆ ಬಹಳ ದಿನ ಏನಿಲ್ಲ. ಇನ್ನು ಮೇಲೆ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಬಣಗಳ ಒಳಕಿತ್ತಾಟ ವಿಚಾರವಾಗಿ ಕೇಳಿದಾಗ, ಸರಿಕಾಣದ್ದನ್ನು ನಾನು ಆಂತರಿಕವಾಗಿ ಪಕ್ಷದ ನಾಯಕರಿಗೆ ಹೇಳಿದ್ದೇವೆ. ಕೇಂದ್ರ ಅಧಿಕೃತವಾಗಿ ಒಂದು ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ಹಕ್ಕು ಪ್ರತಿಪಾದಿಸುವ ಕೆಲಸ ಮಾಡುತ್ತಿದ್ದೇನೆ. ಕೆಲವರಿಂದ ಹತ್ತಿಕ್ಕುವ ಕೆಲಸವೂ ಆಗುತ್ತಿದೆ. ಹಾಗಂತ ನಮಗೆ ಹಿನ್ನಡೆಯಾಗಿದೆ ಎಂದು ಭಾವಿಸುವುದಿಲ್ಲ ಎಂದು ಹೇಳಿದರು.
ವಕ್ಫ್ ಹೋರಾಟ ಮಾಡಿದ್ದೇವೆ. ನಮ್ಮ ಕೆಲಸಗಳನ್ನು ನಾವು ಕೊಟ್ಟಿದ್ದೇವೆ. ವಾಲ್ಮೀಕಿ ಹಗರಣದ ಹೋರಾಟ ಮಾಡಿದೆವು. ದೊಡ್ಡ ಮಟ್ಟದಲ್ಲಿ ನುಸುಳಿಕೋರರ ವಿರುದ್ದ ಹೋರಾಟ ಮಾಡಿದೆವು. ಕರ್ನಾಟಕದಲ್ಲಿ ೧೬ ಲಕ್ಷ ಜನ ಅಕ್ರಮ ನುಸುಳುಕೋರರಿದ್ದಾರೆ. ಹೆಬ್ಬಾಳ, ಮಹದೇವಪುರದಲ್ಲಿ ನುಸುಳುಕೋರರು ಹೆಚ್ಚಾಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದವರು ಇದ್ದಾರೆ, ಆಫ್ರಿಕಾದವರು ಬೆಂಗಳೂರಿನಲ್ಲಿದ್ದಾರೆ. ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.