ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಂಗೀತ ಅಭ್ಯಾಸ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಗೀತ ಕಲಿಕೆ ಶಿಕ್ಷಣಕ್ಕೆ ಪೂರಕವಾಗುತ್ತದೆಯೇ ವಿನಃ ಯಾವುದೇ ರೀತಿಯಲ್ಲೂ ಅಡ್ಡಿಯಾಗದು ಎಂದು ಖ್ಯಾತ ಮೃದಂಗ ವಾದಕ ಶೃಂಗೇರಿಯ ವಿದ್ವಾನ್ ನೈಬಿ ಪ್ರಭಾಕರ್ ಅಭಿಪ್ರಾಯಪಟ್ಟರು.ಮಂಗಳೂರಿನ ಸ್ವರಾಲಯ ಸಾಧನ ಫೌಂಡೇಶನ್ ಹಾಗೂ ಕಲಾ ಶಾಲೆ ವತಿಯಿಂದ ಮಂಗಳೂರಿನ ಪಾಲೆಮಾರ್ ಗಾರ್ಡನ್ನಲ್ಲಿ ನಡೆದ ಸ್ವರಾಲಯ ಸಾಧನಾ ಶಿಬಿರದಲ್ಲಿ ‘ಕಲಾವಿದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳು 9ನೇ ತರಗತಿ ವರೆಗೆ ನಿಷ್ಠೆಯಿಂದ ಸಂಗೀತ ಅಭ್ಯಾಸವನ್ನು ಮಾಡಿಸುತ್ತಾರೆ. ಆದರೆ ಎಸ್ಎಸ್ಎಲ್ಸಿಗೆ ಬಂದ ಕೂಡಲೇ ಸಂಗೀತ ಕಲಿಕೆ ತಮ್ಮ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸಂಗೀತ ಅಭ್ಯಾಸದಿಂದ ದೂರ ಮಾಡುತ್ತಾರೆ. ಇದೊಂದು ತಪ್ಪು ತಿಳಿವಳಿಕೆ ಹಾಗೂ ತಪ್ಪು ನಡೆಯಾಗಿದೆ. ಯಾವತ್ತೂ ಮಕ್ಕಳನ್ನು ಸಂಗೀತ ಕಲಿಕೆಯಿಂದ ದೂರ ಮಾಡಬೇಡಿ ಎಂದು ಅವರು ಹೇಳಿದರು.ನೈಬಿ ಪ್ರಭಾಕರ್ ಅವರ ಪತ್ನಿ ವಿದುಷಿ ಸಾವಿತ್ರಿ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕು ಎಂಬ ಛಯ ಇದ್ದಂತೆ, ಸಂಗೀತದಲ್ಲೂ ಅಂತಹ ಛಲ ಇರಲೇಬೇಕು. ಹಾಗಿದ್ದರೆ ಮಾತ್ರ ಸಂಗೀತದಲ್ಲಿ ಏಳಿಗೆ ಕಾಣಲು ಸಾಧ್ಯ. ಮುಖ್ಯವಾಗಿ ಸಂಗೀತದಲ್ಲಿ ಗುರು ಹಾಗೂ ಗುರಿ ಇರಬೇಕು. ಒಂದು ಬಾರಿ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ ಬಳಿಕ ಮುಂದಿನ ಬಾರಿ ಇದಕ್ಕಿಂತಲೂ ಉತ್ತಮ ಕಾರ್ಯಕ್ರಮ ನೀಡುವ ಪ್ರಯತ್ನ ಮಾಡಬೇಕು. ಇದಕ್ಕೆ ಪೋಷಕರು ಸದಾ ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಆರ್.ಸಿ.ಭಟ್ ಸಂವಾದ ನಡೆಸಿಕೊಟ್ಟರು.