ಸಾರಾಂಶ
- ಬಸಪ್ಪನಹಟ್ಟಿಯಲ್ಲಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ತೋಟಗಾರಿಕೆ ಬೆಳೆಗಳಲ್ಲಿ ಮಣ್ಣು ಪರೀಕ್ಷೆ ಆಧಾರದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಮಣ್ಣಿನಲ್ಲಿ ಫಲವತ್ತತೆ ಕಾಪಾಡಲು ಸಹಾಯವಾಗುತ್ತಿದೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.ಜಗಳೂರು ತಾಲೂಕು ಬಸಪ್ಪನಹಟ್ಟಿಯಲ್ಲಿ ಮಂಗಳವಾರ ಪರಿಶಿಷ್ಟ ಪಂಗಡ ಉಪಯೋಜನೆಯಡಿ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ಅವರು ಮಾತನಾಡಿದರು. ಗ್ರಾಮದ ಆಯ್ದ ರೈತರ ಜಮೀನುಗಳ ಮಣ್ಣು ಪರೀಕ್ಷೆ ನಡೆಸಲಾಗಿದೆ. ಮಣ್ಣಿನ ರಸಸಾರ 7.5ರಿಂದ 8.0ರ ಆಸುಪಾಸಿನಲ್ಲಿದೆ. ಲವಣಾಂಶಗಳ ಅಂಶವೂ ಉತ್ತಮವಾಗಿದೆ. ಸಾರಜನಕ ಮತ್ತು ರಂಜಕದ ಅಂಶ ಮಧ್ಯಮವಾಗಿದ್ದು, ಭೂಮಿಯಲ್ಲಿ ಪೊಟ್ಯಾಷ್ ಅಂಶ ಕಡಿಮೆಯಿದೆ. ರೈತರು ಪ್ರತಿ ವರ್ಷ ಎಕರೆಗೆ 3 ಕ್ವಿಂಟಲ್ ಜಿಪ್ಸಂ, 12 ಟನ್ ಕೊಟ್ಟಿಗೆ ಗೊಬ್ಬರ ನೀಡಬೇಕು. ಹಸಿರೆಲೆಗೊಬ್ಬರದ ಬೆಳೆಗಳಾದ ಸೆಣಬು, ಡಯಾಂಚ ಮತ್ತು ವೆಲ್ವೆಟ್ ಬೀನ್ಸ್ಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದು ಎಂದು ತಿಳಿಸಿದರು.
ಕೇಂದ್ರ ವತಿಯಿಂದ ಮೆಣಸಿನಕಾಯಿ ಮತ್ತು ಅಲಸಂದೆ ಬೆಳೆಗಳಲ್ಲಿನ ಮುಂಚೂಣಿ ಪ್ರಾತ್ಯಕ್ಷಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಒಳಸುರಿಗಳನ್ನು ನೀಡಲಾಯಿತು.ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ ಮಾತನಾಡಿ, ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ನಿವಾರಣೆ ಕುರಿತು ಮಾಹಿತಿ ನೀಡಿದರು. ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಟಿ.ಜಿ. ಅವಿನಾಶ್ ಮೆಕ್ಕೆಜೋಳದಲ್ಲಿ ಲದ್ದಿಹುಳುವಿನ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕೃಷ್ಣಮೂರ್ತಿ, ಶಶಿಧರ, ಬಡಯ್ಯ, ತಿಪ್ಪೇಸ್ವಾಮಿ, ಗುರುಮೂರ್ತಿ, ಶಿವಣ್ಣ ಇತರರು ಹಾಜರಿದ್ದರು.- - -
-24ಕೆಡಿವಿಜಿ39:ಜಗಳೂರು ತಾಲೂಕಿನ ಬಸಪ್ಪನಹಟ್ಟಿಯಲ್ಲಿ ಡಾ. ಎಂ.ಜಿ. ಬಸವನಗೌಡ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿದರು.