ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಧ್ಯೇಯದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಹ ಸಾಧನೆ ಮಾಡಬೇಕು ಎಂದು ಅಮ್ಮ ನಗರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಸಾಹಿರಾಬಾನು ಅಭಿಪ್ರಾಯಪಟ್ಟರು.

ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣಮಂಟಪದಲ್ಲಿ ತಾಲೂಕು ಖಿದ್ಮತ್ ಸಮಿತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಹುತೇಕ ಮುಸ್ಲಿಮರು ಕಾಯಕ ನಿಷ್ಠರಾಗಿ ಶ್ರಮಿಸುತ್ತಾರೆ. ದುಡಿಮೆಯಲ್ಲಿ ಒಂದಷ್ಟು ದಾನ ಮಾಡುವಂತಹ ಪರೋಪಕಾರ ಗುಣವನ್ನು ಮೈಗೂಡಿಸಿಕೊಂಡಿದ್ದಾರೆ. ಶ್ರಮಿಕ ಮುಸ್ಲಿಮರು ಮಾಡುವ ಕಾಯಕ ಮತ್ತು ಸೇವೆಯಲ್ಲಿ ದೇವರು ಅಡಗಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

ಖಿದ್ಮತ್ ಕಮಿಟಿ ತಾಲೂಕು ಅಧ್ಯಕ್ಷ ಹಾಗೂ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಎಚ್. ಜಂದಿಸಾಹೇಬ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಇತರರಿಗೂ ಪ್ರೇರಣೆ ನೀಡುವುದು ಪುರಸ್ಕಾರದ ಮುಖ್ಯ ಉದ್ದೇಶವಾಗಿದೆ. ಪ್ರತಿ ಹಳ್ಳಿಗಳಿಗೂ ತೆರಳಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಗಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಾದರಿಯಲ್ಲಿ ವಿದ್ಯಾರ್ಥಿಗಳು ದೇಶಕ್ಕೆ ಉನ್ನತ ಕೊಡುಗೆ ನೀಡುವಂತಾಗಬೇಕು. ಕಠಿಣ ಪರಿಶ್ರಮದಿಂದ ಗುರಿ ಸಾಧಿಸುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ಆಶಿಸಿದರು.


ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಕಂದರ್ ಉದ್ಘಾಟಿಸಿ ಮಾತನಾಡಿದರು. ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಗ್ಯಾರಂಟಿ ಸಮಿತಿಯ ಗುರುಬಸವರಾಜ ಸೊನ್ನದ್, ಗ್ರಾಪಂ ಮಾಜಿ ಸದಸ್ಯ ಹಾಲ್ದಾಳ್ ವಿಜಯಕುಮಾರ್ ಮಾತನಾಡಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ತಾಲೂಕಿನ ನಾನಾ ಗ್ರಾಮಗಳ ಒಟ್ಟು ೧೦೦ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಇದೇ ವೇಳೆ ಉಪ ತಹಸೀಲ್ದಾರ್ ಆಸಿಫ್‌, ನಿವೃತ್ತ ಯೋಧರಾದ ನೂರ್ ಮಹಮದ್, ರಾಮರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ರಫೀ, ಸಮಿತಿಯ ಆಟೋ ರಾಜ, ಮೆಕಾನಿಕ್ ರಾಜು, ಬುಡೇನ್ ಸಾಬ್, ಚಾಂದ್‌ಬಾಷಾ, ಬಿ.ಬಾಷಾಸಾಬ್, ಹಸನ್ ಷರೀಪ್, ಟೈಲರ್ ಶಬ್ಬೀರ್ ಇದ್ದರು. ಮುಖಂಡರಾದ ಎನ್.ಎಂ.ಗೌಸ್, ನಜೀರ್ ಬಾಷಾ, ಹಸನ್ ಶರೀಫ್‌, ಎಚ್.ಎಸ್. ದಾದಾಪೀರ್, ಎಚ್.ಅನಿಸ್ ನಿರ್ವಹಿಸಿದರು.