ಕನ್ನಡಪ್ರಭ ವಾರ್ತೆ ತುರುವೇಕೆರೆ

ನಮ್ಮ ಮುಂದೆ ಸ್ಪರ್ಧಾತ್ಮಕ ಜಗತ್ತು ಇದೆ. ಈ ಜಗತ್ತನ್ನು ಎದುರಿಸಲು ಪಿಯುಸಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಧ್ಯಯನ ಮಾಡಿದಲ್ಲಿ ಉತ್ತಮ ಅವಕಾಶಗಳು ನಮ್ಮನ್ನೇ ಹುಡುಕಿಕೊಂಡು ಬರುತ್ತವೆ ಎಂದು ಜೀವಶಾಸ್ತ್ರ ಉಪನ್ಯಾಸಕ ಡೇವಿಡ್ ಹೇಳಿದರು.

ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನೀಟ್, ಜೆಇಇ, ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾಲೇಜು ಗ್ರಾಮಾಂತರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿರುವುದು ಸಂತೋಷದಾಯಕವಾದ ಸಂಗತಿ. ವಿದ್ಯಾರ್ಥಿಗಳು ಇಷ್ಟಪಟ್ಟು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಲ್ಲಿ ಉತ್ತಮ ಕೆಲಸ ನಿಮ್ಮ ಬಳಿಯೇ ಹುಡುಕಿಕೊಂಡು ಬರಲಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲ ತಾಣಗಳಿಗೆ ದಾಸರಾಗದೇ, ವಿದ್ಯಾರ್ಜನೆ ನೀಡುವ ಪುಸ್ತಕಗಳ ಅಧ್ಯಯನಕ್ಕೆ ಆದ್ಯತೆ ನೀಡಿದರೆ ಯಶಸ್ಸು ಖಂಡಿತ. ಪ್ರಯತ್ನ ಇದ್ದಲ್ಲಿ ಸೋಲೇ ಇಲ್ಲ. ಆತ್ಮವಿಶ್ವಾಸವನ್ನು ಎಂದೆಂದಿಗೂ ಕಳೆದುಕೊಳ್ಳಬೇಡಿ. ಮೊಬೈಲ್ ಗೆ ದಾಸರಾದರೆ ನಿಮ್ಮನ್ನು ಮುಂದೆ ತಲೆ ಎತ್ತದಂತೆ ಮಾಡುತ್ತದೆ. ಅದೇ ಪುಸ್ತಕಕ್ಕೆ ಮಾರು ಹೋದರೆ ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಡೇವಿಡ್ ಹೇಳಿದರು.ರಾಸಾಯನ ಶಾಸ್ತ್ರ ಉಪನ್ಯಾಸಕ ಅನಿಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಇಂದಿನಿಂದಲೇ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಾವ ಅಂಜಿಕೆ ಇಲ್ಲದೇ ಗೆಲ್ಲಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ಸಂಶಯವಿದ್ದಲ್ಲಿ ಕೂಡಲೇ ತಮ್ಮ ಉಪನ್ಯಾಸಕರಲ್ಲಿ ಕೇಳಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದರು. ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜು ಮಾತನಾಡಿ, ತಮ್ಮ ಶಿಕ್ಷಣ ಸಂಸ್ಥೆ ಗ್ರಾಮಾಂತರ ಮಕ್ಕಳ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಪ್ರಥಮ ಪಿಯುಸಿ ಯಿಂದಲೇ ಸಿಇಟಿ, ಜಿಇಇ, ನೀಟ್ ಮುಂತಾದ ವಿಷಯಗಳ ಕುರಿತು ಮಕ್ಕಳಿಗೆ ಬೋಧನೆ ಆರಂಭಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ವೇಳೆ ಉಪನ್ಯಾಸಕರಾದ ತ್ಯಾಗಿನ್, ಹಿರಿಯ ಶ್ರೇಣಿ ಉಪನ್ಯಾಸಕರಾದ ಶಾಂತಲಾ, ಜೀವಿತಾ, ಡಾ,ಚಂದ್ರಯ್ಯ, ತೇಜು, ಶಿಲ್ಪಾ, ಚೇತನ್, ಭವ್ಯ, ಜ್ಯೋತಿ ಸೇರಿದಂತೆ ಹಲವು ಉಪನ್ಯಾಸಕರು ಉಪಸ್ಥಿತರಿದ್ದರು. ಈ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಲಾಯಿತು.